ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯ ಇರುವ ತೆರಿಗೆ ಪದ್ಧತಿಯಲ್ಲಿ ನಮಗೆ ತೃಪ್ತಿ ಇಲ್ಲ. ಈಗ ಕೇವಲ 3 ಸಾವಿರ ಕೋಟಿ ಮಾತ್ರ ತೆರಿಗೆ ಸಂಗ್ರಹವಾಗುತ್ತಿದೆ. ಹೀಗಾಗಿ ನಾವು ತೆರಿಗೆ ಸಂಗ್ರಹಕ್ಕೆ ಹೊಸ ಚಿಂತನೆ ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮೋಹನ್ ದಾಸ್ ಪೈ ಅವರ ಸಮಿತಿ ಕೊಟ್ಟಿರುವ ವರದಿಯಲ್ಲಿನ ತೆರಿಗೆ ಶಿಫಾರಸ್ಸಿನ ಬಗ್ಗೆ ಕೇಳಿದಾಗ, ಸುದ್ದಿಗಾರರೊಂದಿಗೆ ಮಾತನಾಡಿ ಉಪ ಮುಖ್ಯಮಂತ್ರಿ ಅವರು: “ಸದ್ಯ ಇರುವ ತೆರಿಗೆ ಪದ್ಧತಿಯಲ್ಲಿ ನಮಗೆ ತೃಪ್ತಿ ಇಲ್ಲ. ಈಗ ಕೇವಲ 3 ಸಾವಿರ ಕೋಟಿ ಮಾತ್ರ ತೆರಿಗೆ ಸಂಗ್ರಹವಾಗುತ್ತಿದೆ. ಹೀಗಾಗಿ ನಾವು ತೆರಿಗೆ ಸಂಗ್ರಹಕ್ಕೆ ಹೊಸ ಚಿಂತನೆ ಮಾಡುತ್ತಿದ್ದೇವೆ, ” ಎಂದರು.
“ಸರ್ಕಾರಿ ಕಚೇರಿ ಸೇರಿ, ಕೇಂದ್ರ ಸರ್ಕಾರದ ಕಚೇರಿಗಳು ತೆರಿಗೆ ಪಾವತಿಸಬೇಕು ಎಂದು ಪತ್ರ ಬರೆದಿದ್ದೇನೆ. ಹೆಚ್ಎಎಲ್ ನವರು 93 ಕೋಟಿ ತೆರಿಗೆ ಪಾವತಿಸಿದ್ದಾರೆ. ಕೆಇಬಿ, ಕೆಪಿಟಿಸಿಎಲ್ ನಂತಹ ರಾಜ್ಯ ಸರ್ಕಾರಿ ಕಚೇರಿಗಳೂ ಆಸ್ತಿ ತೆರಿಗೆ ಪಾವತಿಗೆ ಸೂಚಿಸಿದ್ದೇನೆ. ಮೊದಲು ಸರ್ಕಾರದವರಿಂದ ತೆರಿಗೆ ಸಂಗ್ರಹಿಸೋಣ. ಮೋಹನ್ ದಾಸ್ ಪೈ ಅವರ ಶಿಫಾರಸ್ಸಿನ ಬಗ್ಗೆ ನಾವು ಚರ್ಚೆ ಮಾಡಬೇಕಿದೆ. ಬ್ರ್ಯಾಂಡ್ ಬೆಂಗಳೂರು ವಿಚಾರವಾಗಿ 70 ಸಾವಿರ ಸಲಹೆಗಳು ಬಂದಿವೆ. ಇದೇ ತಿಂಗಳು 9ರಂದು ದೊಡ್ಡ ವಿಚಾರ ಸಂಕೀರ್ಣ ಹಮ್ಮಿಕೊಂಡಿದ್ದೇವೆ. ನಂತರ ಅದರ ಮೇಲೆ ನಾವು ಕೆಲಸ ಆರಂಭಿಸುತ್ತೇವೆ,” ಎಂದು ತಿಳಿಸಿದರು.
ಸ್ವಯಂಘೋಷಿತ ತೆರಿಗೆ ಸರಿಯಾಗಿ ಕೆಲಸ ಮಾಡುತ್ತಿಲ್ಲವಾದರೆ ಬೇರೆ ಆಯ್ಕೆ ಏನಿದೆ ಎಂದು ಕೇಳಿದಾಗ, “ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದಕ್ಕಿಂತ ಪರಿಣಾಮಕಾರಿಯಾಗಿಲ್ಲ. ವಿಧಾನಸೌಧದಲ್ಲೇ 3 ಲಕ್ಷ ಇದ್ದರೆ 2 ಲಕ್ಷ ಎಂದು ಹೇಳಿಕೊಳ್ಳುತ್ತಾರೆ. ವಾಣಿಜ್ಯ ಉದ್ದೇಶಕ್ಕೆ ಕಟ್ಟಿರುವ ಕಟ್ಟಡಗಳಲ್ಲಿ ಕೇವಲ ವಾಸಪ್ರದೇಶದ ತೆರಿಗೆ ಪಾವತಿಸುತ್ತಿದ್ದು, ಮಾಣಿಜ್ಯ ಉದ್ದೇಶದ ತೆರಿಗೆ ಪಾವತಿಸುತ್ತಿಲ್ಲ. ಹೀಗಾಗಿ ಪ್ರತಿ ಮನೆಯ ಲೆಕ್ಕ ಹಾಕಬೇಕು ಎಂದು ಭಾವಿಸಿದ್ದೇವೆ. ಈ ವಿಚಾರವಾಗಿ ಅಧಿಕಾರಿಗಳ ಬದಲಾವಣೆ ಮಾಡಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.