ಬೆಂಗಳೂರು: ನಗರದ ಏಜಿಪುರ ಫ್ಲೈಓವರ್ ಕಾಮಗಾರಿಯ ನಿರ್ಲಕ್ಷ್ಯ ಮತ್ತೊಮ್ಮೆ ಬಹಿರಂಗವಾಗಿದೆ. ಮಧ್ಯರಾತ್ರಿ ಫ್ಲೈಓವರ್ ಮೇಲಿನಿಂದ ಬಿದ್ದ ಸಿಮೆಂಟ್ ಸ್ಲ್ಯಾಬ್ ಆಟೋ ಮೇಲೆ ಬಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆಟೋ ಮುಂಭಾಗದ ಗ್ಲಾಸ್ ಸಂಪೂರ್ಣವಾಗಿ ಒಡೆದುಹೋಯಿತು.
10 ವರ್ಷಕ್ಕಿಂತ ಹೆಚ್ಚು ಕಾಲದಿಂದ ಈಜಿಪುರ ಫ್ಲೈಓವರ್ ಕಾಮಗಾರಿ ಅಪೂರ್ಣವಾಗಿಯೇ ಸಾಗುತ್ತಿದ್ದು, ನಾಗರಿಕರು ಪ್ರತಿದಿನವೂ ಆತಂಕದಲ್ಲಿ ಸಂಚರಿಸುತ್ತಿದ್ದಾರೆ. ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, “ಯಾವಾಗ ಯಾವ ಸ್ಲ್ಯಾಬ್ ಬೀಳುತ್ತದೋ ಯಾರಿಗೂ ಗೊತ್ತಿಲ್ಲ. ನಾಗರಿಕರ ಜೀವಗಳ ಬೆಲೆ ಯಾರಿಗೆ?” ಎಂದು ಪ್ರಶ್ನಿಸಿದ್ದಾರೆ.
ಘಟನೆ ನಂತರ ಅಧಿಕಾರಿಗಳು ತಾತ್ಕಾಲಿಕವಾಗಿ ಸುರಕ್ಷತಾ ಜಾಲ (safety mesh) ಅಳವಡಿಸಿದ್ದಾರೆ. ಆದರೆ ತಜ್ಞರು, “ಈ ರೀತಿಯ ತಾತ್ಕಾಲಿಕ ಕ್ರಮಗಳು ಜನರ ಪ್ರಾಣವನ್ನು ಉಳಿಸಲು ಸಾಕಾಗುವುದಿಲ್ಲ,” ಎಂದು ಎಚ್ಚರಿಸಿದ್ದಾರೆ.
ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯವನ್ನು ಸಾರ್ವಜನಿಕರು ಗರಂ ಶಬ್ದಗಳಲ್ಲಿ ಟೀಕಿಸಿದ್ದಾರೆ. “ಎರಡು ಸರ್ಕಾರಗಳು ಬದಲಾದರೂ ಫ್ಲೈಓವರ್ ಉದ್ಘಾಟನೆಯಾಗಿಲ್ಲ, ಕಾಮಗಾರಿ ಪೂರ್ಣಗೊಂಡಿಲ್ಲ. ಜನರ ಜೀವ ಹೋದರೆ ಯಾರು ಹೊಣೆ?” ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಈ ಘಟನೆಯಿಂದಾಗಿ ಚಾಲಕ ಗಾಯಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಈ ಘಟನೆ ಬೆಂಗಳೂರು ರಸ್ತೆಗಳ ಮತ್ತು ಫ್ಲೈಓವರ್ಗಳ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಗುಂಡಿಗಳು, ಅಸುರಕ್ಷಿತ ಕಾಮಗಾರಿಗಳು ಅನೇಕ ಬಲಿಗಳನ್ನು ಪಡೆದಿರುವುದನ್ನು ಜನರು ನೆನಪಿಸಿದ್ದಾರೆ.