ಬೆಂಗಳೂರು: ಬೆಂಗಳೂರು ದಕ್ಷಿಣ ವಿಪ್ರ ಬಳಗ ವತಿಯಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ Bangalore South ಕ್ಷೇತ್ರದ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಭೆ ಮತ್ತು ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಕೋಣನಕುಂಟೆಯ ಶ್ರೀ ಲಕ್ಷ್ಮೀನರಸಿಂಹ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಗಾಯತ್ರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಎಂ. ಕೃಷ್ಣಪ್ಪ, ಮಹಾಸಭಾ ಅಧ್ಯಕ್ಷ ಎಸ್. ರಘುನಾಥ್, ಉಪಾಧ್ಯಕ್ಷ ಎಂ. ನರಸಿಂಹನ್, ಹಿರಿಯ ಉಪಾಧ್ಯಕ್ಷ ಆರ್. ಲಕ್ಷ್ಮಿಕಾಂತ್, ಖಜಾಂಚಿ ಸುಬ್ಬನರಸಿಂಹ, ಹಾಗೂ ದಕ್ಷಿಣ ಜಿಲ್ಲಾ ಪ್ರತಿನಿಧಿಗಳಾದ ಕೆ.ಎನ್. ರವಿಕುಮಾರ್, ಕೆ. ಸತೀಶ್ ಉರಾಳ್, ಅಂಬಿಕಾ ರಾಮಚಂದ್ರ, ಆರ್.ಜಿ. ರಾಜಶೇಖರ್ ಸೇರಿದಂತೆ ಗಣ್ಯರು ಭಾಗವಹಿಸಿದರು.
ಶಾಸಕ ಎಂ. ಕೃಷ್ಣಪ್ಪ ಮಾತನಾಡಿ, “ವಿಪ್ರರು ಸರಸ್ವತಿಯ ಪುತ್ರರು. ಅವರು ಎಲ್ಲಾ ಕ್ಷೇತ್ರಗಳಲ್ಲಿ ಎತ್ತರಕ್ಕೆ ಬೆಳದಿದ್ದಾರೆ. ವಿಪ್ರ ಸಮುದಾಯದ ಕಾರ್ಯಕ್ರಮಗಳಿಗೆ ಉಚಿತವಾಗಿ ಉತ್ತಮ ಸ್ಥಳ ಹಾಗೂ ಭವನಗಳನ್ನು ಬೆಂಗಳೂರು ದಕ್ಷಿಣದಲ್ಲಿ ಒದಗಿಸಲಾಗುವುದು. ನಾನು ನಿಮ್ಮಲ್ಲಿಯೇ ಒಬ್ಬ, ನಿಮ್ಮ ಸೇವೆಗೆ ಸದಾ ಸಿದ್ದನಿದ್ದೇನೆ” ಎಂದರು.

ಮಹಾಸಭಾ ಅಧ್ಯಕ್ಷ ಎಸ್. ರಘುನಾಥ್ ಅವರು ಸಮುದಾಯದ ಅಭಿವೃದ್ದಿಗಾಗಿ ₹100 ಕೋಟಿ ದತ್ತಿ ನಿಧಿಗೆ ಚಾಲನೆ ನೀಡಿದ್ದಾರೆ. ಈಗಾಗಲೇ ₹52 ಲಕ್ಷ ಸಂಗ್ರಹವಾಗಿದೆ ಎಂದು ಅವರು ತಿಳಿಸಿದರು.
“ಪ್ರತಿ ಕಾರ್ಯಕಾರಿ ಸಮಿತಿಯ ಸದಸ್ಯರು ಪ್ರತಿದಿನ ಕನಿಷ್ಠ ಒಬ್ಬರನ್ನು ಸದಸ್ಯರಾಗಿ ನೋಂದಣಿಮಾಡಿಸಬೇಕು. ಶ್ರೀಮಂತ ವಿಪ್ರರು ದೇಣಿಗೆ ನೀಡಬೇಕು,” ಎಂದ ಅವರು.
ಎಂ. ನರಸಿಂಹನ್ ಅವರು, ಬ್ರಾಹ್ಮಣ ಸಮುದಾಯದ ಸುವರ್ಣಭವನ ನಿರ್ಮಾಣ ಈ ಸಮುದಾಯದ ನಾಯಕ ಬಿ.ಎನ್.ವಿ. ಸುಬ್ರಹ್ಮಣ್ಯರ ಕನಸು ಎಂದು ನೆನೆಸಿದರು. ಅವರು 12 ಲಕ್ಷ ಸದಸ್ಯತ್ವದ ಗುರಿ ಸಾಧನೆಗಾಗಿ ಎಲ್ಲರೂ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದರು.
ಆರ್. ಲಕ್ಷ್ಮಿಕಾಂತ್ ಅವರು, ಮುಂದಿನ ಐದು ವರ್ಷಗಳ ವಿಪ್ರ ಅಭಿವೃದ್ಧಿಗೆ ನಿಶ್ಚಿತ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು ಮತ್ತು ಅದನ್ನು ಯಶಸ್ವಿಯಾಗಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಸುಬ್ಬನರಸಿಂಹ ಅವರು ಮಾತನಾಡಿ, “ಬ್ರಾಹ್ಮಣರ ಏಕತೆಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಶ್ರಮಿಸುತ್ತಿದೆ. ಜಾತಿ ಜನಗಣತಿಯಲ್ಲಿ ಶೈವ, ಮಾದ್ವ, ಶ್ರೀ ವೈಷ್ಣವ ಎಂದು ಬೇರ್ಪಡಿಸದೆ ಬ್ರಾಹ್ಮಣ ಎಂದೇ ಬರೆಯಬೇಕು” ಎಂದು ಮನವಿ ಮಾಡಿದರು. ದತ್ತಿ ನಿಧಿಗೆ ಎಲ್ಲಾ ಉಪಸಮುದಾಯದವರು ದೇಣಿಗೆ ನೀಡಬಹುದು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಪಾಲಿಕೆ ಸದಸ್ಯರುಗಳಾದ ಸೋಮಶೇಖರ್, ಜಯರಾಮ್, ಜಿಲ್ಲಾ ಪ್ರತಿನಿಧಿಗಳಾದ ಎಸ್.ಎಸ್. ಪ್ರಸಾದ್, ನಾಗೇಶ್, ದಿಲೀಪ್ ಕುಮಾರ್ ಸಹ ಭಾಗವಹಿಸಿದ್ದರು.