ಬೆಂಗಳೂರು: ರಾಜ್ಯ ಸರ್ಕಾರವು ಸರಕಾರಿ ಕಚೇರಿಗಳಲ್ಲಿ ಪ್ರೀಪೇಡ್ ವಿದ್ಯುತ್ ಮೀಟರ್ಗಳನ್ನು ಅಳವಡಿಸುವ ಯೋಜನೆ ಬಗ್ಗೆ ಚಿಂತನೆ ನಡೆಸಿದ್ದು, ಈ ಕುರಿತು ಅಂತಿಮ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೆಗೆದುಕೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಬುಧವಾರ ತಿಳಿಸಿದರು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಈ ಕ್ರಮವು ಕೇಂದ್ರ ಸರ್ಕಾರದ ಪರಿಷ್ಕೃತ ವಿತರಣಾ ವಲಯ ಯೋಜನೆ (ಆರ್ಡಿಎಸ್ಎಸ್) ಅಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಇಂಧನ ಸುಧಾರಣಾ ಕ್ರಮಗಳ ಭಾಗವೆಂದು ತಿಳಿಸಿದರು.
“ಆರ್ಡಿಎಸ್ಎಸ್ ಯೋಜನೆಯಡಿ ಕೇಂದ್ರ ಸರ್ಕಾರ ಶೇ.60ರಷ್ಟು ಅನುದಾನ ನೀಡುತ್ತದೆ. ಇದರ ಅಡಿಯಲ್ಲಿ ಸ್ಮಾರ್ಟ್ ಮೀಟರ್ಗಳಿಗೆ ಪ್ರತಿ ಯೂನಿಟ್ಗೆ ₹900ರಂತೆ ಸಹಾಯಧನ ಸಿಗುತ್ತದೆ. ಆದರೆ, ಕೆಲವರು ರಾಜ್ಯ ಸರ್ಕಾರ ಹೆಚ್ಚಾಗಿ ಹಣ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿ ಹೈಕೋರ್ಟ್ನಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ,” ಎಂದರು.
ರೈತರಿಗೆ ಸೌರ ಪಂಪ್ ಸೆಟ್ಗಳ ಹಂಚಿಕೆ
ರೈತರಿಗೆ ಸೌಲಭ್ಯ ನೀಡುವ ಉದ್ದೇಶದಿಂದ ‘ಪಿಎಂ ಕುಸುಮ್-ಬಿ’ ಯೋಜನೆ ರಾಜ್ಯದಲ್ಲಿ ಈಗಾಗಲೇ ಜಾರಿಗೆ ಬಂದಿದೆ ಎಂದು ಸಚಿವರು ತಿಳಿಸಿದರು. ಈ ಯೋಜನೆಯಡಿ ಕೇಂದ್ರ ಸರ್ಕಾರ ಶೇ.30, ರಾಜ್ಯ ಸರ್ಕಾರ ಶೇ.50 ಮತ್ತು ಫಲಾನುಭವಿಗಳು ಶೇ.20 ಹಣ ಭರಿಸಬೇಕಾಗುತ್ತದೆ. ಇದಲ್ಲದೆ, ‘ಪಿಎಂ ಕುಸುಮ್-ಸಿ’ ಯೋಜನೆಯು ಬಯಲುಸೀಮೆ ಭಾಗದ ರೈತರಿಗೆ ತುಂಬಾ ಉಪಯುಕ್ತವಾಗಿದೆ ಎಂದು ಹೇಳಿದರು.
ವಿದ್ಯುತ್ ಉತ್ಪಾದನೆ ಹೆಚ್ಚಿಸುವ ಗುರಿ
“ನಾವು ಅಧಿಕಾರಕ್ಕೆ ಬಂದ ನಂತರ 4,000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಹೆಚ್ಚಿಸಿದ್ದೇವೆ. ಈ ಮೂಲಕ ರಾಜ್ಯದ ಸಾಮರ್ಥ್ಯ ಈಗ 35,000 ಮೆಗಾವಾಟ್ ಆಗಿದ್ದು, 2030ರ ವೇಳೆಗೆ 60,000 ಮೆಗಾವಾಟ್ ಗುರಿ ಹೊಂದಿದ್ದೇವೆ. ಈ ಕುರಿತು ಅಗತ್ಯವಿರುವ ಯೋಜನೆ ರೂಪಿಸಲಾಗುತ್ತಿದೆ” ಎಂದರು.