ನವ ದೆಹಲಿ: ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಮುಂದಿನ ಜನಗಣತಿ ಜೊತೆಯಲ್ಲಿಯೇ ಜಾತಿ ಗಣತಿಯನ್ನು ಮಾಡುತ್ತಿರುವುದು ಸ್ವಾಗತಾರ್ಹ ಎಂದು ಮಾಜಿ ಪ್ರಧಾನಿಗಳಾದ ದೇವೇಗೌಡರು ಹೇಳಿದರು.
ಕೇಂದ್ರ ನಿಲುವಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಕರ್ನಾಟಕ ದ ಜಾತಿಗಣತಿಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿಯೇ ಸಹಮತ ಇಲ್ಲ. ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ನಾನು ಪತ್ರ ಬರೆದಿದ್ದೆ. ನನಗೆ ಅವರು ಈವರೆಗೆ ಉತ್ತರ ಕೊಟ್ಟಿಲ್ಲ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಹಾಗಾದರೆ ಸಿಎಂ ಕಚೇರಿಯಲ್ಲಿ ಎಷ್ಟು ಹಿಂದುಳಿದವರು ಇದ್ದಾರೆ? ಸಿಎಂ ಕಚೇರಿಯಲ್ಲಿ ಎಷ್ಟು ಅವರದ್ದೆ ಸಮುದಾಯದ ಉದ್ಯೋಗಿಗಳು ಎಷ್ಟಿದ್ದಾರೆ? ಎನ್ನುವುದನ್ನು ಹೇಳಬೇಕು. ಅವರು ಹೇಳುತ್ತಾರೆಯೇ? ಅಂತಹ ಸಿದ್ದರಾಮಯ್ಯನವರು ಮೋದಿ ಅವರಿಗೆ ಪಾಠ ಮಾಡುತ್ತಾರೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.
ಜಾತಿ ಸಮೀಕ್ಷೆಯ ಮೂಲಕ ಬೆಣ್ಣೆ ತಿಂದು, ಉಳಿದವರಿಗೆ ನೀರು ಮಜ್ಜಿಗೆ ಕೊಡಲು ಸಿದ್ದರಾಮಯ್ಯ ಹೊರಟಿದ್ದಾರೆ. ಇದು ಸರಿಯಲ್ಲ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಅವರು ಹೇಳಿದರು.