ಬೆಂಗಳೂರು:
“ರಾಜ್ಯದ ಕಾವೇರಿ ಪಾತ್ರದ ಆಣೆಕಟ್ಟುಗಳ ಒಳಹರಿವು 15 ಸಾವಿರ ಕ್ಯೂಸೆಕ್ ಗೆ ಹೆಚ್ಚಾಗಿದ್ದು, ಇದು ರಾಜ್ಯದ ಪಾಲಿಗೆ ಸ್ವಲ್ಪ ನಿರಾಳತೆ ತಂದಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಚಿತ್ರಕಲಾ ಪರಿಷತ್ ನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು: “ರಾಜ್ಯದ ಹಿರಿಯ ನ್ಯಾಯಮೂರ್ತಿಗಳು ಹಾಗೂ ವಕೀಲರ ಜೊತೆ ಚರ್ಚೆ ಮಾಡಿ ತಮಿಳುನಾಡಿಗೆ ನೀರು ಹರಿಸುವ ತೀರ್ಮಾನ ಪುನರ್ ಪರಿಶೀಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ನಿನ್ನೆ ಮೇಲ್ಮನವಿ ಸಲ್ಲಿಸಿದ್ದೇವೆ,” ಎಂದರು.
ಒಳ ಹರಿವು ಹೆಚ್ಚಾಗಿದ್ದು, ರಾಜ್ಯದಲ್ಲಿ ಹೆಚ್ಚಿನ ಮೇಲೆ ಬೀಳಲಿ ಎಂದು ಎಲ್ಲಾ ಜನರು ಪ್ರಾರ್ಥನೆ ಮಾಡಬೇಕಿದೆ ಎಂದರು.
ನಮ್ಮ ರೈತರ ಬೆಳೆ ಹಾಳಾಗದಂತೆ ಈಗಾಗಲೇ ನೀರು ಬಿಟ್ಟಿದ್ದೇವೆ. ತಮಿಳುನಾಡಿಗೆ ಕೆಆರ್ ಎಸ್ ಆಣೆಕಟ್ಟು ಮೂಲಕ ನೀರು ಹರಿಸದಿದ್ದರೂ ಬೆಂಗಳೂರು ಹಾಗೂ ಸುತ್ತಮುತ್ತಲ ಭಾಗದಲ್ಲಿ ಬಿದ್ದ ಮಳೆ ಹಾಗೂ ಸೀಪೆಜ್ ಮೂಲಕ ಆರೂವರೆ ಸಾವಿರ ಕ್ಯೂಸೆಕ್ ಅನಿಯಂತ್ರಿತ ನೀರು ಹರಿದಿದೆ. ಹೀಗಾಗಿ ನಮ್ಮಲ್ಲಿ ಮಳೆ ಬಂದಷ್ಟು ನಮಗೆ ಶಕ್ತಿ ಬರುತ್ತದೆ. ಉಳಿದಂತೆ ಕಾವೇರಿ ವಿಚಾರದಲ್ಲಿ ಕಾನೂನು ಹೋರಾಟಕ್ಕೆ ನಾವು ಬದ್ಧವಿದ್ದೇವೆ,” ಎಂದು ತಿಳಿಸಿದರು.