ಮಂಡ್ಯ :- ರೈತರ ಹಿತ ಬಲಿಕೊಟ್ಟು ಅಧಿಕಾರಕ್ಕಾಗಿ ಅಂಟು ಕೂರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕಳೆದ 57 ದಿನಗಳಿಂದ ಮಂಡ್ಯದಲ್ಲಿ ರೈತ ಹಿತರಕ್ಷಣಾ ಸಮಿತಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಭೇಟಿ ನೀಡಿ ಮನವಿ ಸ್ವೀಕರಿಸಿ ಬಳಿಕ ಸಭೆ ಉದ್ದೇಶಿಸಿ ಮಾತನಾಡಿದರು.
ಈ ವರ್ಷದ ಮುಂಗಾರು ಕೈ ಕೊಟ್ಟ ಪರಿಣಾಮ ಈ ವರ್ಷ ಕಂಡು ಕೇಳರಿಯದ ರೀತಿಯಲ್ಲಿ ರಾಜ್ಯದಲ್ಲಿ ಬರಗಾಲ ಎದುರಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸುಪ್ರೀಂ ಕೋರ್ಟ್, ಕಾವೇರಿ ನದಿ ನೀರು ಪ್ರಾಧಿಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಸಮಿತಿ ತಮಿಳುನಾಡಿಗೆ ನೀರು ಬಿಡುವಂತೆ ಕರ್ನಾಟಕಕ್ಕೆ ನೀರು ಬಿಡುವಂತೆ ಆದೇಶ ಮಾಡುತ್ತಲೆ ಬರುತ್ತಿದೆ ಎಂದರು. ಸಾಮಾನ್ಯವಾಗಿ ಪ್ರತಿ ವರ್ಷ ತಮಿಳುನಾಡಿಗೆ 177.25 ಟಿಎಂಸಿ ನೀರು ಕೊಡಬೇಕು ಎಂದು ಸುಪ್ರಿಂ ತೀರ್ಪು ನೀಡಿದೆ.
ಇಂತಿಷ್ಟು ತಿಂಗಳಲ್ಲಿ ಇಂತಿಷ್ಟು ನೀರು ಕೊಡಬೇಕು ಎಂದಿದೆ. ಎರಡು ಕಮಿಟಿಗಳನ್ನು ಮಾಡಿದ್ದು, ಆ ಕಮಿಟಿಗಳು ಅನೇಕ ಬಾರಿ ಕಾವೇರಿ ಜಲಾನಯನ ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವಾಂಶ ತಿಳಿದಿದ್ದರೂ ಸಹ ನೀರು ಬಿಡಿ ಎಂದು ಹೇಳುತ್ತಿರುವುದು ಸಮಜಂಸವಲ್ಲ. ಇದು ಹೊಸ ವ್ಯಾಜ್ಯವೇನಲ್ಲ ಇದಕ್ಕೆ 100 ವರ್ಷವಾಗುತ್ತ ಬರುತ್ತಿದೆ. 1924 ರಲ್ಲೇ ಅಗ್ರಿಮೆಂಟ್ ಆಗಿದ್ದು, ಅದನ್ನೇ ಹಿಡ್ಕೊಂಡು ತಮಿಳುನಾಡು ನಮ್ಮನ್ನ ಅಲ್ಲಾಡಿಸ್ತಿದೆ ಎಂದು ಕಿಡಿಕಾರಿದರು.
ಇಂತಹ ತೀರ್ಪುಗಳ ವಿರುದ್ಧ ನಾವು ಸುಪ್ರೀಂ ಕೋರ್ಟ್ ಮತ್ತು ಪ್ರಾಧಿಕಾರಗಳ ಮುಂದೆ ಸಮರ್ಥವಾಗಿ ವಾದ ಮಂಡಿಸಿದ್ದೇವೆ. ಪ್ರಾಧಿಕಾರ ನೀಡಿರೊ 2600 ಕ್ಯುಸೆಕ್ ನೀರನ್ನ ಹೇಗೆ ಮೆಂಟೇನ್ ಮಾಡ್ತಿವಿ ಎಂದು ಹೇಳಲಾಗಲ್ಲ. ಆದರೆ ಈಗ ಇರುವ ಬೆಳೆ ಉಳಿಸಿಕೊಳ್ಳಲು ಪ್ರಯತ್ನ ಮಾಡಲಾಗುವುದು. ನಾವು ನಿಮ್ಮಗಳ ಹಿತ ಕಾಯುವುದರಲ್ಲಿ ಸರ್ಕಾರ ಹಿಂದೆ ಬೀಳಲ್ಲ. ಅಧಿಕಾರಕ್ಕಾಗಿ ರೈತರನ್ನ ಬಲಿ ಕೊಡಲ್ಲ. ನಿಮ್ಮ ಹಿತ ಕಾಯುವ ಕೆಲಸ ನಾವು ಮಾಡೇ ಮಾಡ್ತಿವಿ ಎಂದರು. ಈ ಸಂಬಂಧವಾಗಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡ್ತಿವಿ. ಸದ್ಯದಲ್ಲೇ ಬೆಳಗಾವಿಯಲ್ಲಿ ಅಧಿವೇಶನ ಕರೆಯಲಾಗುವುದು ಎಂದು ಧರಣಿ ನಿರತರಿಗೆ ಭರವಸೆ ನೀಡಿದರು.
ವರದಿ : ಗಿರೀಶ್ ರಾಜ್ ಮಂಡ್ಯ
The post CM Siddaramaiah: ರೈತರ ಹಿತ ಬಲಿ ಕೊಟ್ಟು ಅಧಿಕಾರಕ್ಕೆ ಅಂಟು ಕೂರಲ್ಲ: ಸಿಎಂ ಸಿದ್ದರಾಮಯ್ಯ appeared first on Ain Live News.