ಬೆಂಗಳೂರು, ಮಾರ್ಚ್ 20, (ಕರ್ನಾಟಕ ವಾರ್ತೆ): ಕಬ್ಬನ್ ಉದ್ಯಾನವನದಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುವುದಿಲ್ಲ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವರು ಹಾಗೂ ಸಭಾನಾಯಕರಾದ ಎನ್.ಎಸ್. ಭೋಸರಾಜು ಅವರು ತಿಳಿಸಿದರು
ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವರ ಪರವಾಗಿ ಉತ್ತರಿಸಿದ ಸಚಿವರು, ಕಬ್ಬನ್ ಉದ್ಯಾನವನವನ್ನು ಪ್ರತಿ ಮಾಹೆಯ ಎರಡನೇ ಮತ್ತು ನಾಲ್ಕನೇ ಶನಿವಾರ ಪ್ರತಿ ಭಾನುವಾರ ಮತ್ತು ರಾಷ್ಟ್ರೀಯ ಹಬ್ಬಗಳಾದ ದಿನಗಳಂದು ಹೊರತುಪಡಿಸಿ ಜನವರಿ-26 ಗಣರಾಜ್ಯೋತ್ಸವ, ಆಗಸ್ಟ್-15 ಸ್ವಾತಂತ್ರ್ಯ ದಿನಾಚರಣೆ ಮತ್ತು ಅಕ್ಟೋಬರ್- 2 ಗಾಂಧಿ ಜಯಂತಿ ದಿನಗಳಂದು ಹಾಗೂ ಎಲ್ಲಾ ಸಾರ್ವತ್ರಿಕ ರಜಾ ದಿನಗಳು ಉಳಿದ ದಿನಗಳಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಾರ್ವಜನಿಕ ಸಾಂಚಾರಕ್ಕೆ ತೆರೆಯಲಾಗುತ್ತಿದೆ ಎಂದು ತಿಳಿಸಿದರು.
ಮುಂದುವರೆದು, ಎಲ್ಲಾ ಶನಿವಾರಗಳಂದು ಸಂಜೆ 6.30 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಕಬ್ಬನ್ ಉದ್ಯಾನವನದಲ್ಲಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಕಡೆಯಿಂದ ಸಿದ್ದಲಿಂಗಯ್ಯ ವೃತ್ತದವರೆಗೆ ಹಾಗೂ ಸಿದ್ದಲಿಂಗಯ್ಯ ವೃತ್ತದಿಂದ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಕಡೆಗಿನ ಪ್ರವೇಶ ದ್ವಾರಗಳನ್ನು ತೆರೆಯಲಾಗುತ್ತಿದೆ.
ಕಬ್ಬನ್ ಉದ್ಯಾನವನದ ಒಳ ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದ ದಿನಗಳಂದು ತುರ್ತು ಸೇವೆಗಳಾದ ಆಂಬುಲೆನ್ಸ್ ಮತ್ತು ಫೈಯರ್ ಬ್ರಿಗೇಡ್ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆ ಆಗದಂತೆ ಕಾಲಕಾಲಕ್ಕೆ ಕಬ್ಬನ್ ಉದ್ಯಾನವನದ ಪ್ರವೇಶ ದ್ವಾರಗಳನ್ನು ತೆರೆದು ಸಂಚಾರಕ್ಕೆ ಅನುವು ವಹಿಸಲಾಗುತ್ತಿದೆ ಎಂದು ತಿಳಿಸಿದರು.