ಶಿವಮೊಗ್ಗ: ದೇಶಾದ್ಯಂತ 352 ಪ್ರಕರಣಗಳಲ್ಲಿ 82 ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ಸೈಬರ್ ವಂಚನೆ ಮೂಲಕ ವಂಚಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಸೈಬರ್ ಅಪರಾಧ ಪೊಲೀಸ್ ಠಾಣೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(ಡಿ) ಹಾಗೂ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 318(4) ಮತ್ತು 319(2) ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ವಿಲ್ಸನ್ ಎಂಬುವರು ಸಲ್ಲಿಸಿದ ದೂರಿನ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ.
ದೂರಿನ ಪ್ರಕಾರ, ಪ್ರಮುಖ ಆರೋಪಿ 43 ವರ್ಷದ ಜಗದೀಶ ಸಿ, ವಿಲ್ಸನ್ಗೆ ಕಮಿಷನ್ ನೀಡುವ ಭರವಸೆ ನೀಡಿ ಬ್ಯಾಂಕ್ ಖಾತೆ ತೆರೆಯುವಂತೆ ಆಮಿಷವೊಡ್ಡಿದ್ದಾನೆ. ನಂತರ ಜಗದೀಶ್ ಖಾತೆಯ ಕಂಟ್ರೋಲ್ ತಾನೂ ಪಡೆದುಕೊಂಡು ವಿಲ್ಸನ್ನಂತೆ ನಟಿಸಿ ದೊಡ್ಡ ಮೊತ್ತದ ಹಣವನ್ನು ವಂಚನೆಯಿಂದ ವರ್ಗಾಯಿಸಿದ್ದಾನೆ. ಶಿವಮೊಗ್ಗದ ಶರಾವತಿ ನಗರದ ಶರಾವತಿ ನಗರದ ಶಾರದಮ್ಮ ಕಾಂಪೌಂಡ್ನಲ್ಲಿ ನೆಲೆಸಿರುವ ಜಗದೀಶ್ ಎಲೆಕ್ಟ್ರಾನಿಕ್ಸ್ ಬುಸಿನೆಸ್ ನಡೆಸುತ್ತಿದ್ದಾನೆ. ಇತರ ಇಬ್ಬರು ಆರೋಪಿಗಳನ್ನು ಚಿಕ್ಕಮಗಳೂರಿನ ಶಂಕರಪುರದ ಮೀನು ವ್ಯಾಪಾರಿ 39 ವರ್ಷದ ಅರ್ಷದ್ ಮತ್ತು ಶಿವಮೊಗ್ಗದ ಹೊಸಮನೆಯ ಮಾರ್ಕೆಟಿಂಗ್ ವೃತ್ತಿಪರ ಅನಂತ ಟಿ (34) ಎಂದು ಗುರುತಿಸಲಾಗಿದೆ.
ವಂಚಕರು ಹಣವನ್ನು ಅಕ್ರಮವಾಗಿ ವರ್ಗಾಯಿಸಲು ಬಳಸಿದ್ದ 15 ಬ್ಯಾಂಕ್ ಖಾತೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಾತೆಗಳನ್ನು ವಿವಿಧ ಹೆಸರುಗಳಲ್ಲಿ ತೆರೆಯಲಾಗಿದೆ. ಈ ಖಾತೆಗಳ ಮೂಲಕ 14.71 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವರ್ಗಾಯಿಸಲಾಗಿದ್ದು, ದೇಶಾದ್ಯಂತ ದಾಖಲಾಗಿರುವ 352ಕ್ಕೂ ಹೆಚ್ಚು ವಂಚನೆ ದೂರುಗಳಿಗೆ ಸಂಬಂಧಿಸಿವೆ. ಒಟ್ಟು 82 ಕೋಟಿ ರೂ.ಗಳನ್ನು ವಂಚಿಸಲಾಗಿತ್ತು. ಪೊಲೀಸರು ಆರೋಪಿಗಳಿಂದ ಎರಡು ಮೊಬೈಲ್ ಫೋನ್ಗಳು, 11 ಎಟಿಎಂ ಕಾರ್ಡ್ಗಳು, ಒಂಬತ್ತು ಕ್ಯೂಆರ್ ಕೋಡ್ ಸ್ಕ್ಯಾನರ್ಗಳು ಮತ್ತು 15 ಏರ್ಟೆಲ್ ಸಿಮ್ ಕಾರ್ಡ್ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಮೂವರನ್ನೂ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕರಿಯಪ್ಪ ಎಜಿ ಮತ್ತು ರಮೇಶ್ ಕುಮಾರ್ ಅವರ ನಿರ್ದೇಶನದಡಿ ಆರೋಪಿಗಳನ್ನು ಬಂಧಿಸಲಾಗಿತ್ತು. ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿದ್ದು, ಇದರಲ್ಲಿ ಎಎಸ್ಐ ಶೇಖರ್ ಎನ್, ಕಾನ್ಸ್ಟೆಬಲ್ಗಳಾದ ಕಿರಣ್ ಕುಮಾರ್, ಚಂದ್ರಶೇಖರ್, ಗಿರೀಶ್ ಸ್ವಾಮಿ, ಆಂಡ್ರ್ಯೂಸ್ ಮತ್ತು ಗೌತಮ್ ಜಿ ಎನ್ ಸೇರಿದ್ದಾರೆ. ತಲೆಮರೆಸಿಕೊಂಡಿರುವ ಇತರ ಶಂಕಿತರನ್ನು ಬಂಧಿಸಲು ಪ್ರಯತ್ನಗಳು ಮುಂದುವರೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
