Home ಬೆಂಗಳೂರು ನಗರ DCM DK Shivakumar | ಭೇಟಿಗೆ ಅವಕಾಶ ಕೇಳಿದ್ದರೆ ನಾನೇ ನೀಡುತ್ತಿದ್ದೆ, ಮುನಿರತ್ನ ಸೀನ್ ಕ್ರಿಯೇಟ್...

DCM DK Shivakumar | ಭೇಟಿಗೆ ಅವಕಾಶ ಕೇಳಿದ್ದರೆ ನಾನೇ ನೀಡುತ್ತಿದ್ದೆ, ಮುನಿರತ್ನ ಸೀನ್ ಕ್ರಿಯೇಟ್ ಮಾಡುವ ಅಗತ್ಯವಿರಲಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

38
0
DCM DK Shivakumar | If he had asked for the visit, I would have granted it, there was no need to create a scene with Muniratna
DCM DK Shivakumar | If he had asked for the visit, I would have granted it, there was no need to create a scene with Muniratna

ಬೆಂಗಳೂರು:

“ಶಾಸಕ ಮುನಿರತ್ನ ಅವರು ನನ್ನ ಭೇಟಿಗೆ ಮೊದಲೇ ಅವಕಾಶ ಕೇಳಿದ್ದರೆ ಕೊಡುತ್ತಿದ್ದೆ. ಕಂಬಳ ಕರೆಪೂಜೆ (ಗುದ್ದಲಿಪೂಜೆ) ಕಾರ್ಯಕ್ರಮದ ಬಳಿ ಬಂದು ಸೀನ್ ಕ್ರಿಯೇಟ್ ಮಾಡುವ ಅವಶ್ಯಕತೆ ಇರಲಿಲ್ಲ. ಅವರನ್ನು ಕಾಲಿಗೆ ಬೀಳಿಸಿಕೊಳ್ಳಲು ನಾನೇನು ಮಠದ ಸ್ವಾಮೀಜಿಯೇ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಸದಾಶಿವನಗರದ ನಿವಾಸಲ್ಲಿ ಶಾಸಕ ಮುನಿರತ್ನ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು: “ಶಾಸಕ ಮುನಿರತ್ನ ಅವರು ರಾಜರಾಜೇಶ್ವರಿ ಕ್ಷೇತ್ರಕ್ಕೆ ಅನುದಾನದ ವಿಚಾರವಾಗಿ ಚರ್ಚೆ ನಡೆಸಿದರು. ʼದ್ವೇಷದ ರಾಜಕಾರಣ’ ಎಂದು ಹೇಳಿದರು. ಅದಕ್ಕೆ ನಾನು, “ಬಿಜೆಪಿ ಸರ್ಕಾರ ಇದ್ದ ವೇಳೆ ಕಾಂಗ್ರೆಸ್ ಶಾಸಕರ ಅನುದಾನಕ್ಕೆ ಏಕೆ ಕತ್ತರಿ ಹಾಕಿದ್ದರು? ಹೋಗಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರನ್ನೇ ಕೇಳಿನೋಡಿ. ಕನಕಪುರಕ್ಕೆ ಬಂದಿದ್ದ ವೈದ್ಯಕೀಯ ಕಾಲೇಜನ್ನು ಹೇಗೆ ತೆಗೆದರು? ಅಂತಾ. ಅದನ್ನು ಯಾವ ರಾಜಕಾರಣ ಎಂದು ಕರೆಯುತ್ತಾರೆ” ಎಂದು ಮುನಿರತ್ನ ಅವರಿಗೆ ಕೇಳಿದ್ದಾಗಿ ತಿಳಿಸಿದರು.

“ಅದಕ್ಕೆ ಮುನಿರತ್ನ ಅವರು ನಾನು ಚಿಕ್ಕವನು, ಇದಕ್ಕೆಲ್ಲ ನನ್ನನ್ನ ಮುಂದೆ ಬಿಡಬೇಡಿ ಎಂದರು. ಇನ್ನೂ ಅನೇಕ ವಿಚಾರಗಳು ಚರ್ಚೆಯಾದವು. ಅದನ್ನೆಲ್ಲಾ ಮಾಧ್ಯಮಗಳಿಗೆ ಹೇಳಲು ಆಗುವುದಿಲ್ಲ, ನಿಮಗೆ ಅದೆಲ್ಲಾ ಅರ್ಥವಾಗಿರುತ್ತದೆ. ಕಾಲಿಗೆ ಬೀಳುವುದೆಲ್ಲ ಇಟ್ಟುಕೊಳ್ಳಬೇಡಿ, ಸುಮ್ಮನೆ ಹೊರಡಿ ಎಂದು ಅವರಿಗೆ ಹೇಳಿದೆ” ಎಂದರು.

ಸರ್ಕಾರದಿಂದಲೇ ಕಾಮಗಾರಿಗಳ ತನಿಖೆ ನಡೆಸಲಾಗುವುದೇ ಎನ್ನುವ ಪ್ರಶ್ನೆಗೆ “ಈಗಾಗಲೇ ತನಿಖೆ ನಡೆಯುತ್ತಿದೆಯಲ್ಲ. ಯಾರು ಸರಿಯಾಗಿ ಕೆಲಸ ಮಾಡಿದ್ದಾರೋ ಅವರಿಗೆ ಬಿಲ್ ಬಿಡುಗಡೆ ಮಾಡಲಾಗುವುದು. ಬೊಮ್ಮಾಯಿ ಸಾಹೇಬರು ವಿಧಾನಸಭೆಯಲ್ಲಿ ವರದಿ ನೀಡಿ, ಹೇಳಿಕೆ ನೀಡಿದ್ದರು. ಮುನಿರತ್ನ ಅವರು ಸಹ ನನ್ನ ಕ್ಷೇತ್ರದಲ್ಲಿ ಅನ್ಯಾಯ ನಡೆದಿದೆ ಎಂದು ಪತ್ರ ಬರೆದಿದ್ದರು. ಅದನ್ನೆಲ್ಲಾ ತನಿಖೆಗೆ ನೀಡಿದ್ದೇವೆ. ಬೊಮ್ಮಾಯಿ ಅವರು ಹಾಗೂ ಇವರು ಹೇಳಿದ್ದಕ್ಕೆ ಲೋಕಾಯುಕ್ತ ತನಿಖೆಗೆ ನೀಡಿದ್ದೇವೆ. ವರದಿ ಬಂದ ಬಳಿಕ ಕಾನೂನು ಪ್ರಕಾರವಾಗಿ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳುತ್ತೇವೆ” ಎಂದು ತಿಳಿಸಿದರು.

ಕಾಮಗಾರಿಗಳ ಪಟ್ಟಿ ತಂದುಕೊಡುವುದಾಗಿ ಮುನಿರತ್ನ ಅವರು ಹೇಳಿರುವ ಬಗ್ಗೆ ಕೇಳಿದಾಗ, “ಯಾವ ಕಾಮಗಾರಿ, ಯಾವುದು ಆದ್ಯತೆಯ ಮೇಲೆ ನಡೆಯಬೇಕು, ಯಾವ ಕೆಲಸ ಎಂದು ಪಟ್ಟಿ ತಂದುಕೊಡಿ ಎಂದು ಹೇಳಿ ಕಳಿಸಿದ್ದೇನೆ” ಎಂದು ಹೇಳಿದರು.

ಡಿ.ಕೆ ಸಹೋದರರು ಏನು ಮಾಡಿಕೊಂಡು ಬಂದಿದ್ದಾರೋ ನಾನು ಅದನ್ನೇ ಮಾಡುತ್ತಿದ್ದೇನೆ ಎಂಬ ಮುನಿರತ್ನ ಹೇಳಿಕೆ ಬಗ್ಗೆ ಕೇಳಿದಾಗ “ನಾನು ಎಕ್ಸಿಬಿಟರ್, ನಟ, ನಿರ್ಮಾಪಕ ಅಲ್ಲ. ಆದರೆ ನಮ್ಮಲ್ಲಿ ಹಾಗೂ ನಮ್ಮ ಲೋಕಸಭಾ ಕ್ಷೇತ್ರದಲ್ಲಿ ಬಹಳಷ್ಟು ಜನ ನಟರು, ನಿರ್ಮಾಪಕರು, ವಿತರಕರು ಸೇರಿಕೊಂಡು ಬಿಟ್ಟಿದ್ದಾರೆ. ನಾನು ಈ ಹಿಂದೆ ಪ್ರದರ್ಶಕ ಆಗಿದ್ದೆ, ಈಗಲ್ಲ” ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್ ಅವರನ್ನು ಒಂದಷ್ಟು ಜನ ಹಾದಿ ತಪ್ಪಿಸುತ್ತಿದ್ದಾರೆ. ಆ ಮಾಹಿತಿಯನ್ನು ಅವರಿಗೆ ನೀಡುತ್ತೇನೆ ಎಂಬ ಮುನಿರತ್ನ ಹೇಳಿಕೆ ಬಗ್ಗೆ ಕೇಳಿದಾಗ, “ನನಗೆ ಮಾಹಿತಿಯನ್ನ ನೀವು ಕೊಟ್ಟರು, ಅವರು, ಯಾರೇ ಕೊಟ್ಟರು ತೆಗೆದುಕೊಳ್ಳುತ್ತೇನೆ” ಎಂದರು.

ಅರಮನೆ ಮೈದಾನದಲ್ಲಿ ಮುನಿರತ್ನ ಹೈಡ್ರಾಮಾ

ಇದಕ್ಕೂ ಮುನ್ನ ನಗರದ ಅರಮನೆ ಮೈದಾನದಲ್ಲಿ ನಡೆದ ಬೆಂಗಳೂರು ಕಂಬಳ- ನಮ್ಮ ಕಂಬಳದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡುತ್ತಿದ್ದಾಗ, ಅಲ್ಲಿಗೆ ಬಂದ ಮುನಿರತ್ನ ಅವರು ಮನವಿ ಸಲ್ಲಿಸಲು ಬಂದಿರುವುದಾಗಿ ಹೇಳಿ ಸಭೆಯ ಬಳಿ ಕೆಲಕಾಲ ಗೊಂದಲ ಮೂಡಿಸಿದರು.

ಇದನ್ನು ಗಮನಿಸಿದ ಡಿ.ಕೆ.ಶಿವಕುಮಾರ್ ವೇದಿಕೆ ಮೇಲಿಂದಲೇ ಪ್ರತಿಕ್ರಿಯಿಸಿ, “ನಾಟಕ ಮಾಡಬೇಕು ಎಂದು ಇಲ್ಲಿಗೆ ಬಂದಿದ್ದಾರೆ, ಅವರನ್ನು ನಿಧಾನಕ್ಕೆ ಭೇಟಿಯಾಗೋಣ. ನಾಟಕ ಮಾಡುವ, ಸಿನಿಮಾ ತೆಗೆಯುವ ನಿರ್ಮಾಪಕರಲ್ಲವೇ! ಅವರದ್ದು ಒಂದೊಂದು ಕಥೆ ಇರುತ್ತದೆ, ಇವನ್ನೆಲ್ಲಾ ಅರಗಿಸಿಕೊಳ್ಳೊಣ. ನಡೆ ಮುಂದೆ, ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂದು ನಾವು ಮುನ್ನಡೆಯಬೇಕು” ಎಂದು ತಿಳಿಸಿದರು.

“ಅವರದ್ದು ಏನೋ ತೊಂದರೆ ಇದೆ. ಆದರೆ ಈ ಕಾರ್ಯಕ್ರಮಕ್ಕೆ ಅಡ್ಡಿಯಾಗದಂತೆ ಅದನ್ನು ಬಗೆಹರಿಸಿ. ಬೆಂಗಳೂರಿನಲ್ಲಿ ಕಂಬಳ ಮಾಡಬೇಕು ಎಂದು ಮಂಗಳೂರಿನಿಂದ ಜನರು ಬಂದು
ಉತ್ಸಾಹದಿಂದ ಇಲ್ಲಿ ಸೇರಿದ್ದಾರೆ. ಈ ಕಾರ್ಯಕ್ರಮಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಿ” ಎಂದು ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಅವರಿಗೆ ಹೇಳಿದರು.

ಕಾರ್ಯಕ್ರಮ ಮುಗಿಸಿ ಹೊರಟ ಡಿಸಿಎಂ ಶಿವಕುಮಾರ್ ಅವರು, ಮನವಿ ಸಲ್ಲಿಸಲು ಬಂದ ಮುನಿರತ್ನ ಅವರಿಗೆ “ಮಧ್ಯಾಹ್ನ ಮನೆಯ ಬಳಿ ಬನ್ನಿ, ಈ ಕುರಿತು ಚರ್ಚೆ ಮಾಡೋಣ” ಎಂದರು.

ಈ ಸಂದರ್ಭದಲ್ಲಿ ಶಾಸಕ ಮುನಿರತ್ನ ಅವರು ಶಿವಕುಮಾರ್ ಅವರ ಕಾಲಿಗೆ ಬಿದ್ದು, ಮನವಿ ಪತ್ರ ನೀಡಿದರು.

ಅರಮನೆ ಮೈದಾನದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಅವರು, “ಮುನಿರತ್ನ ಅವರು ಪ್ರತಿಭಟನೆ ಮಾಡಲು ಬಂದಿದ್ದಾರೆ ಎಂದು ಹೇಳಿದ್ದೀರಿ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡಲು ಅವಕಾಶವಿದೆ. ಕಂಬಳ ಗುದ್ದಲಿ ಪೂಜೆಯ ಬಳಿ ಬಂದು ʼಸೀನ್ ಕ್ರಿಯೇಟ್ʼ ಮಾಡುವ ಅವಶ್ಯಕತೆ ಇರಲಿಲ್ಲ. ದಸರಾ ಕ್ರೀಡಾಕೂಟ ಉದ್ಘಾಟನೆಗೆ ಮೈಸೂರಿಗೆ ಹೋಗಬೇಕಾಗಿದ್ದು, ಸಮಯ ಸಿಕ್ಕರೆ ಭೇಟಿಗೆ ಅವಕಾಶ ನೀಡುತ್ತೇನೆ” ಎಂದರು.

ಕಾರ್ಯಕ್ರಮ ಮುಗಿದ ನಂತರ ಶಿವಕುಮಾರ್ ಅವರು ತಮ್ಮ ಮನೆಗೆ ಬಂದು ಭೇಟಿ ಮಾಡಿ ತಮ್ಮ ಮನವಿ ಬಗ್ಗೆ ಚರ್ಚಿಸುವಂತೆ ತಿಳಿಸಿದರು.

ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಧಾವಿಸಿದ ಮುನಿರತ್ನ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಡಿಸಿಎಂ ಅವರ ಬಳಿ ಚರ್ಚೆ ನಡೆಸಿದರು.

LEAVE A REPLY

Please enter your comment!
Please enter your name here