Home ಬೆಂಗಳೂರು ನಗರ ಮಾನನಷ್ಟ ಮೊಕದ್ದಮೆ | ಬಿಬಿಎಂಪಿ ಪ್ರಥಮ ದರ್ಜೆ ಸಹಾಯಕ ಮಾಯಣ್ಣನಿಗೆ 10 ಲಕ್ಷ ರೂ. ದಂಡ

ಮಾನನಷ್ಟ ಮೊಕದ್ದಮೆ | ಬಿಬಿಎಂಪಿ ಪ್ರಥಮ ದರ್ಜೆ ಸಹಾಯಕ ಮಾಯಣ್ಣನಿಗೆ 10 ಲಕ್ಷ ರೂ. ದಂಡ

3
0
BBMP building

ಬೆಂಗಳೂರು : ಬಿಬಿಎಂಪಿ ನೌಕರರು ಮತ್ತು ಅಧಿಕಾರಿಗಳ ಕಲ್ಯಾಣ ಸಂಘದ ವಿರುದ್ಧ ಕಸಾಪ ಬೆಂಗಳೂರು ನಗರ ಜಿಲ್ಲೆಯ ಮಾಜಿ ಅಧ್ಯಕ್ಷ, ಬಿಬಿಎಂಪಿ ಪ್ರಥಮ ದರ್ಜೆ ಸಹಾಯಕ ಮಾಯಣ್ಣ ಮತ್ತು ಅವರ ಬೆಂಬಲಿಗರು ಅಪಪ್ರಚಾರ ಮಾಡುವುದನ್ನು ಪ್ರತಿಬಂಧಿಸಿ ನಗರ ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, 3 ತಿಂಗಳೊಳಗೆ ದೂರುದಾರ ಸಂಘಕ್ಕೆ 10 ಲಕ್ಷ ರೂ. ಗಳ ನಷ್ಟವನ್ನು ಪಾವತಿಸುವಂತೆ ಆದೇಶಿಸಿದೆ.

24ನೆ ಹೆಚ್ಚುವರಿ ಸಿಟಿ ಸಿವಿಲ್ ಅಂಡ್ ಸೆಷನ್ಸ್ ನ್ಯಾಯಾಲಯ ಈ ಆದೇಶ ನೀಡಿದೆ. ಪ್ರತಿವಾದಿಯು ಮಾಡಿರುವ ವಿವಿಧ ಸುಳ್ಳು ದೂರುಗಳು, ಪ್ರಚಾರಗಳು ಇತ್ಯಾದಿಗಳಿಂದಾಗಿ ಸೊಸೈಟಿ ಮತ್ತು ಅದರ ಅಧ್ಯಕ್ಷರು ಅನಾನುಕೂಲತೆ ಮತ್ತು ಕಿರುಕುಳವನ್ನು ಅನುಭವಿಸಿದ್ದಾರೆ. ಆದ್ದರಿಂದ. ದೂರುದಾರರು ಪ್ರಾರ್ಥಿಸಿದಂತೆ ಶಾಶ್ವತ ತಡೆಯಾಜ್ಞೆ ಪರಿಹಾರಕ್ಕೂ ಅರ್ಹರಾಗಿದ್ದಾರೆ ಎಂದು ಕೋರ್ಟ್ ಹೇಳಿದೆ.

ಪ್ರತಿವಾದಿ (ಮಾಯಣ್ಣ) ಅಥವಾ ಅವರ ಕಡೆಯವರು ಫಿರ್ಯಾದಿ ಸಂಘ ಮತ್ತು ಅದರ ಪದಾಧಿಕಾರಿಗಳು, ಅದರ ಅಧ್ಯಕ್ಷ ಅಮೃತ್‍ರಾಜ್ ಅಥವಾ ಅವರ ಕುಟುಂಬ ಸದಸ್ಯರು ಮತ್ತು ಅವರಿಗೆ ಸಂಬಂಧಪಟ್ಟವರನ್ನು ಯಾವುದೇ ರೀತಿಯ ಚಾರಿತ್ರ್ಯ ವಧೆ ಅಥವಾ ಮಾನನಷ್ಟಕ್ಕೆ ಒಳಪಡಿಸುವುದನ್ನು ಕೋರ್ಟ್ ಪ್ರತಿಬಂಧಿಸಿ ತಡೆಯಜ್ಞೆ ಕೊಟ್ಟಿದೆ.

ಸಂಘದ ಬಗ್ಗೆ ಅಥವಾ ಅಧ್ಯಕ್ಷರು, ಪದಾಧಿಕಾರಿಗಳ ಬಗ್ಗೆ ಅಪಪ್ರಚಾರ ಬರೆಯುವುದು, ಪ್ರಕಟಿಸುವುದು, ಪ್ರಚಾರ ಮಾಡುವುದು, ಪ್ರಸಾರ ಮಾಡುವುದು ಅಥವಾ ಪ್ರಕಟಿಸುವುದು ಅಥವಾ ಪ್ರಸಾರಕ್ಕೆ ಅವಕಾಶ ನೀಡುವುದು ಸೇರಿದಂತೆ ಯಾವುದೇ ರೀತಿಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗಿಸಿಕೊಳ್ಳುವುದು ಅಥವಾ ವರ್ತಿಸುವುದು ಅಥವಾ ನಕಾರಾತ್ಮಕವಾಗಿ ತೊಡಗುವುದಕ್ಕೆ ಶಾಶ್ವತ ತಡೆಯಾಜ್ಞೆಯ ಆದೇಶದ ಮೂಲಕ ನಿಬರ್ಂಧಿಸಲಾಗಿದೆ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಆದೇಶದ ದಿನಾಂಕದಿಂದ 3 ತಿಂಗಳೊಳಗೆ ದೂರುದಾರ ಸಂಘಕ್ಕೆ ಹತ್ತು ಲಕ್ಷ ರೂಪಾಯಿಗಳ ನಷ್ಟವನ್ನು ಪಾವತಿಸುವಂತೆ ಪ್ರತಿವಾದಿ ಮಾಯಣ್ಣ ಅವರಿಗೆ ನ್ಯಾಯಾಲಯ ಆದೇಶಿಸಿದೆ.

ಪ್ರತಿವಾದಿ ಮಾಯಾಣ್ಣ ಅವರು ಅಪಪ್ರಚಾರ ಮಾಡಿ ಸಂಘಕ್ಕೆ ಮತ್ತು ಅಧ್ಯಕ್ಷರು-ಪದಾಧಿಕಾರಗಳಿಗೆ ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿದ್ದಾರೆ. ಇಂಥ ಅಪಪ್ರಚಾರ ಮಾಡುವುದು, ಸುಳ್ಳು ಆರೋಪಗಳನ್ನು ಪ್ರಕಟಿಸುವುದು, ಸಂಘ ಮತ್ತು ಅಧ್ಯಕ್ಷರು-ಪದಾಧಿಕಾರಿಗಳ ವಿರುದ್ಧ ಇಲ್ಲಸಲ್ಲದ ಅಪಾದನೆಗಳನ್ನು ಮಾಡುತ್ತಾ ಚಾರಿತ್ರ್ಯವಧೆ ಅಥವಾ ಮಾನನಷ್ಟ ಮಾಡುವುದನ್ನು ನಿರ್ಭಂಧಿಸಿ ಶಾಶ್ವತ ತಡೆಯಾಜ್ಞೆ ನೀಡಬೇಕೆಂದು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ನೌಕರರು ಮತ್ತು ಅಧಿಕಾರಿಗಳ ಕಲ್ಯಾಣ ಸಂಘ ಕೋರ್ಟ್ ಮೊರೆ ಹೋಗಿತ್ತು.

LEAVE A REPLY

Please enter your comment!
Please enter your name here