ಬೆಂಗಳೂರು : ರಾಜ್ಯ ಆಂತರಿಕ ಭದ್ರತಾ ವಿಭಾಗದ (ಐಎಸ್ಡಿ) ಐಜಿಪಿ ಡಿ. ರೂಪಾ ಅವರ ವಿರುದ್ಧ ಇತ್ತೀಚಿಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ದೂರು ನೀಡಿದ್ದ ಡಿಐಜಿ ವರ್ತಿಕಾ ಕಟಿಯಾರ್ ಅವರನ್ನು ಐಎಸ್ಡಿಯಿಂದ ಗೃಹರಕ್ಷಕ ದಳ ಹಾಗೂ ಸಿವಿಲ್ ಡಿಫೆನ್ಸ್ ವಿಭಾಗದ ಡಿಐಜಿಯಾಗಿ ವರ್ಗಾವಣೆಗೊಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಐಎಸ್ಡಿ ಐಜಿಪಿಯಾಗಿರುವ ಡಿ.ರೂಪಾ ಅವರು ಕೆಳಹಂತದ ಸಿಬ್ಬಂದಿಯನ್ನು ಬಳಸಿಕೊಂಡು ತಮ್ಮ ಕೊಠಡಿಯನ್ನು ಅನಧಿಕೃತವಾಗಿ ಪ್ರವೇಶಿಸಿ, ಕೆಲ ದಾಖಲೆಗಳನ್ನು ಇರಿಸಿದ್ದಾರೆ ಎಂದು ವರ್ತಿಕಾ ಕಟಿಯಾರ್ ದೂರಿನಲ್ಲಿ ಉಲ್ಲೇಖಿಸಿದ್ದರು. ಅದರಲ್ಲೂ, ಕೆಳಹಂತದ ಮೂವರು ಸಿಬ್ಬಂದಿಯನ್ನು ಬಳಸಿಕೊಂಡು ಕಂಟ್ರೋಲ್ ರೂಂನಿಂದ ಕೀ ತಂದು ಕೊಠಡಿ ತೆರೆಯಲಾಗಿದೆ. ಅಲ್ಲಿ ತಮ್ಮ ಕೊಠಡಿಯಲ್ಲಿನ ದಾಖಲೆಗಳನ್ನು ಇರಿಸಲಾಗಿದೆ. ಅವುಗಳನ್ನು ದುರುದ್ದೇಶದಿಂದ ಫೋಟೋ ತೆಗೆಸಿ, ವಾಟ್ಸಾಪ್ ಮೂಲಕ ಪಡೆದುಕೊಂಡಿದ್ದಾರೆ ಎಂದು ವರ್ತಿಕಾ ಕಟಿಯಾರ್ ಆರೋಪ ಮಾಡಿದ್ದರು.
ವಿಷಯ ತಿಳಿದು ಮೂವರು ಸಿಬ್ಬಂದಿಯನ್ನು ವಿಚಾರಿಸಿದಾಗ ಅವರು ಐಜಿಪಿ ಡಿ.ರೂಪಾ ಅವರ ಆದೇಶದಂತೆ ಕಡತಗಳನ್ನು ಇರಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ನನ್ನ ಕಚೇರಿಯಲ್ಲಿ ಗೌಪ್ಯ ಮತ್ತು ಇತರೆ ಇನ್ನಿತರ ಕಚೇರಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಇರಿಸಲಾಗಿದ್ದು, ಕಚೇರಿಯ ಅವಧಿ ಮುಗಿದ ಬಳಿಕ ಅನಧಿಕೃತವಾಗಿ ಪ್ರವೇಶಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ವರ್ತಿಕಾ ಕಟಿಯಾರ್ ಆಪಾದನೆ ಮಾಡಿದ್ದರು.