ಬೆಂಗಳೂರು, ಜುಲೈ 15: “ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಹೊಸ ಪಾಲಿಕೆಗಳನ್ನು ರಚಿಸಿ ಶೀಘ್ರದಲ್ಲಿ ಚುನಾವಣೆ ನಡೆಸಲಿದ್ದೇವೆ,” ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಘೋಷಿಸಿದರು.
ಭಾರತ್ ಜೋಡೋ ಭವನದಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.
“ಜಿಬಿಎ ರಚನೆಯಾಗಿದೆ. ಇದರಡಿ ಐದು ಪಾಲಿಕೆಗಳನ್ನು ಸ್ಥಾಪಿಸುವ ನಿರ್ಧಾರ ನಮ್ಮದು. ಈ ಕುರಿತಂತೆ ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಕೆಲವರು ಸಾರ್ವಜನಿಕವಾಗಿ ವಿರೋಧ ವ್ಯಕ್ತಪಡಿಸಬಹುದು, ಆದರೆ ಇದು ಆಡಳಿತಾತ್ಮಕವಾಗಿ ಅಗತ್ಯವಿರುವ ಹಂತವಾಗಿದೆ,” ಎಂದರು.
ಪಾಲಿಕೆಗಳ ರಚನೆಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಹೆಚ್ಚಿನ ಸ್ಥಾನಮಾನ ಸಿಗಲಿದ್ದು, ಅದಕ್ಕಾಗಿ ಈಗಲೇ ಅಡಿಪಾಯ ಹಾಕಬೇಕೆಂದು ಅವರು ಅಭಿಪ್ರಾಯಪಟ್ಟರು.
“ಡಿಕೆ ಶಿವಕುಮಾರ್ ಒಬ್ಬನಿಂದಲೇ ಸರ್ಕಾರ ಬರಲ್ಲ. ಕಾರ್ಯಕರ್ತರೇ ಈ ಪಕ್ಷದ ಜೀವಾಳ. ನಾವು ವಿಧಾನಸೌಧದಲ್ಲಿ ತೀರ್ಮಾನ ಮಾಡಬಹುದು ಆದರೆ ಜನತೆಯ ಬಳಿ ನಮ್ಮ ಪ್ರತಿನಿಧಿಗಳು ನೀವು. ಬೆಂಗಳೂರಿನ ಭವಿಷ್ಯ, ನಮ್ಮ ಪಕ್ಷದ ಭವಿಷ್ಯ ನಿಮ್ಮ ಕೈಯಲ್ಲಿದೆ,” ಎಂದು ಕಾರ್ಯಕರ್ತರ ಮಹತ್ವವನ್ನು ವಾಸ್ತವಿಕವಾಗಿ ರೇಖಾಂಕಿಸಿದರು.