ಬೆಂಗಳೂರು: ಆಗಸ್ಟ್ 15ರಂದು ಆಚರಿಸಲಿರುವ 79ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ಬೀಳುವ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳ ಅಪಮಾನವನ್ನು ತಡೆಯಲು, ಹಿಂದೂ ಜನಜಾಗೃತಿ ಸಮಿತಿ ಬೆಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದೆ.
ಈ Nation-first ಮನವಿಯಲ್ಲಿ ಸಮಿತಿ ಪ್ರತಿನಿಧಿಗಳು ಸರ್ಕಾರದ ಧ್ವಜ ಸಂಹಿತೆ ಉಲ್ಲಂಘಿಸುವಂತೆ ಪ್ಲಾಸ್ಟಿಕ್ ರಾಷ್ಟ್ರಧ್ವಜ ಮಾರಾಟ ಮಾಡುವ ವ್ಯಾಪಾರಿಗಳು, ಹಾಗೂ ಧ್ವಜವನ್ನು ಅವಮಾನಗೊಳಿಸುವ ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ಲಾಸ್ಟಿಕ್ ಧ್ವಜಗಳು ಸುಲಭವಾಗಿ ಹಾಳಾಗದ ಕಾರಣದಿಂದಾಗಿ ರಸ್ತೆಗಳಲ್ಲಿ, ಚರಂಡಿಗಳಲ್ಲಿ ಅವಮಾನಿತ ಸ್ಥಿತಿಯಲ್ಲಿ ಬಿದ್ದಿರುತ್ತವೆ ಎಂಬುದನ್ನು ಅವರು ಎತ್ತಿ ಹೇಳಿದರು.
“ರಾಷ್ಟ್ರಧ್ವಜವು ರಾಷ್ಟ್ರದ ಭಾವೈಕ್ಯದ ಸಂಕೇತ. ಸ್ವಾತಂತ್ರ್ಯೋತ್ಸವದಂದು ಮನೆ ಮನೆಗಳಲ್ಲಿಯೂ, ಶಾಲಾ-ಕಾಲೇಜುಗಳಲ್ಲಿ ಧ್ವಜ ಹಾರಾಟ ನಡೆಯಬೇಕು. ಆದರೆ ಧ್ವಜದ ಗೌರವವನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲೂ ಇದೆ. ಪ್ಲಾಸ್ಟಿಕ್ ಧ್ವಜಗಳು ಧ್ವಜ ಸಂಹಿತೆಗೆ ವಿರುದ್ಧವಲ್ಲದೆ ಪರಿಸರಕ್ಕೂ ಹಾನಿಕಾರಕ” ಎಂದು ಮನವಿ ಸಲ್ಲಿಸುವ ವೇಳೆ ಸಮಿತಿಯ ಮುಖಂಡರು ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿಗಳು ಮನವಿಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದು, “ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಈ ವೇಳೆ ಕೃಷ್ಣಸ್ವಾಮಿ ಕಣವೆ, ಶಕುಂತಲಾ ಶೆಟ್ಟಿ, ಹಿಂದೂ ಜನಜಾಗೃತಿ ಸಮಿತಿಯ ಭವ್ಯಾ ಗೌಡ, ರಾಷ್ಟ್ರ ರಕ್ಷಣಾಪಡೆಯ ಶ್ರೀ ಪ್ರವೀಣ್, ಶ್ರೀ ಸೂರ್ಯ, ಶ್ರೀರಾಮ ಸೇನೆಯ ಮುಖಂಡರು ಹಾಗೂ ವಿವಿಧ ಹಿಂದುತ್ವಪರ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.