ಬೆಂಗಳೂರು : ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದು ಪೊಲೀಸ್ ಎನ್ಕೌಂಟರ್ಗೆ ಬಲಿಯಾಗಿದ್ದ ಬಿಹಾರ ಮೂಲದ ರಿತೇಶ್ ಕುಮಾರ್ ಎಂಬಾತನ ಅಂತ್ಯಸಂಸ್ಕಾರ ಶನಿವಾರ ನಡೆದಿದೆ.
ಸಿಐಡಿ ಎಸ್ಪಿ ವೆಂಕಟೇಶ ಎನ್. ಸಮ್ಮುಖದಲ್ಲಿ ಹುಬ್ಬಳ್ಳಿ ಜಿಲ್ಲೆಯ ಬಿಡನಾಳ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆದಿದ್ದು, ಸಿಐಡಿ ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡರು.
ಎ.13ರಂದು ಆರೋಪಿ ರಿತೇಶ್ ಕುಮಾರ್ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಬಳಿಕ ಆಕೆಯನ್ನು ನಿರ್ಮಾಣ ಹಂತದ ಕಟ್ಟಡದ ಶೌಚಾಲಯದೊಳಗೆ ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಪ್ರಕರಣ ಸಂಬಂಧ ಅಶೋಕ ನಗರ ಠಾಣೆ ಪೊಲೀಸರು ಅದೇ ದಿನ ಸಂಜೆ ವೇಳೆಗೆ ಆರೋಪಿಯನ್ನು ಬಂಧಿಸಿದ್ದರು.
ಆ ಬಳಿಕ ತನಿಖೆಯ ದೃಷ್ಟಿಯಿಂದ ಆರೋಪಿಯನ್ನು ಆತ ವಾಸಿಸುತ್ತಿದ್ದ ಶೆಡ್ ಬಳಿ ಕರೆದುಕೊಂಡು ಹೋಗಿದ್ದರು. ಈ ವೇಳೆ ರಾಯನಾಳ ಬ್ರಿಡ್ಜ್ ಬಳಿ ಆರೋಪಿ ರಿತೇಶ್ ಕುಮಾರ್ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರೂ ರಿತೇಶ್ ಪರಾರಿಯಾಗುವ ತನ್ನ ಪ್ರಯತ್ನ ಮುಂದುವರೆಸಿದ್ದ. ಆಗ ಪೊಲೀಸರು ಗುಂಡು ಹಾರಿಸಿದ್ದರಿಂದ ಆತ ಮೃತಪಟ್ಟಿದ್ದ.
ಈ ನಡುವೆ ಆರೋಪಿಯ ಶವ ಅಂತ್ಯಸಂಸ್ಕಾರ ಮಾಡಬಾರದು, ಸಾಕ್ಷ್ಯ ನಾಶವಾಗಬಹುದು ಎಂದು ಕೋರಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಹಾಗಾಗಿ ಎನ್ಕೌಂಟರ್ಗೆ ಬಲಿಯಾದ ರಿತೇಶ್ ಮೃತದೇಹವನ್ನು ಹುಬ್ಬಳ್ಳಿಯ ಕೆಎಂಸಿಆರ್ಐ ಶವಾಗಾರದ ಕೋಲ್ಡ್ ಸ್ಟೋರೇಜ್ನಲ್ಲಿ ಇಡಲಾಗಿತ್ತು. ಈ ನಡುವೆ ಶವ ಕೊಳೆಯುತ್ತಾ ಬಂದ ಹಿನ್ನೆಲೆ ಸಿಐಡಿ ಪೊಲೀಸರಿಗೆ ಶವ ಡಿಕಾಂಪೋಸ್ ಆಗುತ್ತಿದೆ, ಆದ ಕಾರಣ ಇದನ್ನು ವಶಕ್ಕೆ ಪಡೆಯುವಂತೆ ಕೆಎಂಸಿಆರ್ಐ ಪತ್ರ ಬರೆದಿತ್ತು.
ಸಿಐಡಿ ಪೊಲೀಸರು ಶವದ ಸಮಾಧಿ ಮಾಡುವ ಅಗತ್ಯವಿದೆ, ಶವ ಕೊಳೆಯುತ್ತಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ವಿಚಾರಣೆ ನಡೆಸಿರುವ ನ್ಯಾಯಾಲಯ, ಅಂತ್ಯಸಂಸ್ಕಾರ ಮಾಡಲು ಇತ್ತೀಚೆಗೆ ಅನುಮತಿ ನೀಡಿತ್ತು.
ಶವವನ್ನು ಹೂಳಬೇಕು ಎಂಬ ಹೈಕೋರ್ಟ್ ಆದೇಶದಂತೆ ಸಿಐಡಿ ಎಸ್ಪಿ ವೆಂಕಟೇಶ ಎನ್ ಸಮ್ಮುಖದಲ್ಲಿ ವಿಡಿಯೋ ರೆಕಾರ್ಡ್ ಮೂಲಕ ಹುಬ್ಬಳ್ಳಿ ಮಹಾನಗರ ಪಾಲಿಕೆ ಸಿಬ್ಬಂದಿ ಮೃತದೇಹವನ್ನು ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ. ಈ ವೇಳೆಯಲ್ಲಿ ಶಹರ ತಹಶೀಲ್ದಾರ್ ಕಲನಗೌಡ ಹಾಗೂ ಎಸಿಪಿ ಶಿವಪ್ರಕಾಶ್ ನಾಯಕ್ ಇದ್ದರು.