ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಜೊತೆ ಯುವ ಸಂವಾದದಲ್ಲಿ ಬಾಗಿಯಾದ ನಗರದ ವಿಧ್ಯಾರ್ಥಿಗಳು
ಬೆಂಗಳೂರು:
ಬೆಂಗಳೂರಿಗರ, ಕರ್ನಾಟಕದ ಬಹುದಿನಗಳ ಬೇಡಿಕೆಯಾಗಿರುವ ಅಮೆರಿಕ ಕಾನ್ಸುಲೇಟ್ ಕಚೇರಿ, ಬೆಂಗಳೂರಿನಲ್ಲಿ ಪ್ರಾರಂಭಿಸಲು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ರಿಗೆ ಮನವಿ ಸಲ್ಲಿಸುತ್ತೇನೆ ಎಂದು ಡಾ. ಎಸ್ ಜೈಶಂಕರ್ ಇಂದು ಬೆಂಗಳೂರಿನಲ್ಲಿ ತಿಳಿಸಿದ್ದು, ಶೀಘ್ರವೇ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ಸಂಸದ ಶ್ರೀ ತೇಜಸ್ವೀ ಸೂರ್ಯ ರವರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ BJYM ಯುವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತ, “ ಬೆಂಗಳೂರು ದೇಶದ ಐ ಟಿ ರಪ್ತು ಮಾಡುವಲ್ಲಿ ಅತ್ಯಂತ ಪ್ರಮುಖ ನಗರವಾಗಿದ್ದು, ಇಲ್ಲಿ ಯು.ಎಸ್ ಕಾನ್ಸುಲೇಟ್ ಕಚೇರಿ ಏಕಿಲ್ಲ ? “ ಎಂಬ ಮಾನ್ಯ ಸಂಸದರ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಕುರಿತು ಶೀಘ್ರವೇ ಕ್ರಮ ಕೈಗೊಳ್ಳುವ ಕುರಿತು ಭರವಸೆ ನೀಡಿದರು.
” ನಾನು ಬೆಂಗಳೂರಿನ ನಿವಾಸಿಗಳ ದೃಷ್ಟಿಕೋನದಲ್ಲಿ ನಿಮ್ಮ ( ತೇಜಸ್ವೀ ಸೂರ್ಯ ) ಪ್ರಶ್ನೆಗೆ ಸಕಾರಾತ್ಮಕ ಉತ್ತರ ನೀಡಬಹುದು. ಆದರೆ, ಅಮೆರಿಕ ಸರ್ಕಾರ ಈ ಕುರಿತು ನಿರ್ಣಯ ತೆಗೆದುಕೊಳ್ಳಬೇಕಾದ್ದರಿಂದ , ಅಲ್ಲಿನ ಸರ್ಕಾರಕ್ಕೆ ಬೆಂಗಳೂರಿಗರ ಸಂದೇಶ ತಲುಪಿಸುವ ಕಾರ್ಯ ಮಾಡುತ್ತೇನೆ . ಮುಂದಿನ ಬಾರಿ ಅಮೇರಿಕಾ ವಿದೇಶಾಂಗ ಕಾರ್ಯದರ್ಶಿಗಳನ್ನು ಭೇಟಿಯಾದಾಗ ಈ ಕುರಿತು ಖಂಡಿತ ಪ್ರಸ್ತಾಪ ಮಾಡುತ್ತೇನೆ” ಎಂದು ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಡಾ. ಜೈಶಂಕರ್ ಈ ಕುರಿತು ವಿದೇಶಾಂಗ ಇಲಾಖೆ ಪರವಾಗಿ ಶೀಘ್ರವೇ ಕ್ರಮ ಕೈಗೊಳ್ಳುವ ಸುಳಿವು ನೀಡಿದ್ದು ವಿಶೇಷ.
Bengaluru, bustling with lakhs of young techies & contributing 40% of the IT revenue of the nation, does not have a US Consulate.
— Tejasvi Surya (@Tejasvi_Surya) March 24, 2023
EAM @DrSJaishankar: "It's honestly a no-brainer & a compelling ask. Next time I meet Mr. Anthony Blinken, I will hammer home that message."@BJYM pic.twitter.com/yz3hERVZEj
ರಾಜ್ಯದ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಯುವ ಮೋರ್ಚಾ ನೇತೃತ್ವದಲ್ಲಿ, ಈ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಯುವ ಸಂವಾದ ವೇದಿಕೆ ಅಡಿ ನಡೆಸಲು ಇಚ್ಚಿಸಲಾಗಿದ್ದು, ಪ್ರಥಮ ಬಾರಿಗೆ ಮತದಾನ ಮಾಡಲಿರುವ ಯುವ ಮತದಾರರಿಗೆ ಸರ್ಕಾರದ ನೀತಿ- ನಿರೂಪಣೆಗಳು, ಕಾರ್ಯಕ್ರಮಗಳನ್ನು ತಿಳಿಸಲು ಬುಹುಮುಖ್ಯ ವೇದಿಕೆಯಾಗಿ ಕಾರ್ಯನಿರ್ವಹಿಸಲಿದ್ದು, ಇಂದಿನ ಯುವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಾ.ಜೈಶಂಕರ್ , ಜಿ -20 ಶೃಂಗ, ರಶಿಯಾ, ಚೀನಾ ಸಂಬಂಧಗಳು, ಕ್ವಾಡ್ ರಾಷ್ಟ್ರಗಳು, ಸಿರಿಯಾ,ಟರ್ಕಿ, ಆಫ್ಘಾನಿಸ್ತಾನಕ್ಕೆ ಭಾರತ ಮಾನವೀಯ ನೆಲೆಯಲ್ಲಿ ಒದಗಿಸಿದ ಸಹಾಯ ಸೇರಿದಂತೆ ಹಲವಾರು ಜಾಗತಿಕ ವಿದ್ಯಮಾನಗಳಿಗೆ ಸಂಬಂಧಿಸಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದ ಸೂರ್ಯ, ಇಡೀ ದೇಶದ ಆರ್ಥಿಕತೆಗೆ ಬೆಂಗಳೂರು ಮತ್ತು ಕರ್ನಾಟಕ ಗಣನೀಯ ಕೊಡುಗೆ ನೀಡುತ್ತಿದ್ದು, ಕಳೆದ 4 ವರ್ಷಗಳಲ್ಲಿ ಅತೀ ಹೆಚ್ಚಿನ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ರಾಷ್ಟ್ರೀಯ ನಾವೀನ್ಯತಾ ಸೂಚ್ಯಂಕದಲ್ಲಿಯೂ ಕೂಡ ಅಗ್ರಗಣ್ಯ ಪ್ರಥಮ ಸ್ಥಾನದಲ್ಲಿದೆ. ದೇಶದ 500 ಫಾರ್ಚ್ಯೂನ್ ಕಂಪನಿಗಳಲ್ಲಿ 400 ಕಂಪನಿಗಳು ಬೆಂಗಳೂರಿನಲ್ಲಿವೆ. ಮುಂದಿನ 15 ವರ್ಷಗಳಲ್ಲಿ ವಿಶ್ವದ ಅತೀ ವೇಗದ ಬೆಳವಣಿಗೆ ಹೊಂದಲಿರುವ ನಗರಗಳ ಪಟ್ಟಿಯಲ್ಲಿ ನಮ್ಮ ಬೆಂಗಳೂರು ಅಗ್ರಗಣ್ಯವಾಗಿದೆ. ಇದೆಲ್ಲದರ ಜೊತೆಗೆ ರಕ್ಷಣಾ, ವಿಮಾನಯಾನ ಕ್ಷೇತ್ರದ ,ಬಾಹ್ಯಾಕಾಶ ಕ್ಷೇತ್ರದ ಶೇ.65 ರಷ್ಟು ಬಹುಮುಖ್ಯ ಉಪಕರಣಗಳು ತಯಾರಾಗುವುದು ಕೂಡ ನಮ್ಮ ಬೆಂಗಳೂರಿನಲ್ಲಿ ಎನ್ನುವುದು ಗಮನಾರ್ಹ. ಶೇ 50 ರಷ್ಟು ಯೂನಿಕಾರ್ನ್ ಗಳು ನಮ್ಮ ರಾಜ್ಯದಲ್ಲಿ ಪ್ರಾರಂಭವಾಗಿ, ಇಲ್ಲಿಯೇ ಕಾರ್ಯಾಚರಣೆ ಕೂಡ ನಡೆಸುತ್ತಿವೆ.
ಅತೀ ಹೆಚ್ಚಿನ ಪ್ರಮಾಣದ ಮೆಟ್ರೋ ರೈಲು ಸಂಪರ್ಕ ಹೊಂದಿದ ನಗರ ನಮ್ಮ ಬೆಂಗಳೂರು. ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ & ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಪ್ರಗತಿಯಾಗಿದೆ ” ಎಂದು ತಿಳಿಸಿದರು.
ವಿಜ್ಞಾನ, ತಂತ್ರಜ್ಞಾನ , ಐ.ಟಿ, ಬಿ. ಟಿ ಕ್ಷೇತ್ರಗಳಲ್ಲಿ ಅಗಾಧ ಪ್ರಗತಿ ಸಾಧಿಸಿರುವ ಬೆಂಗಳೂರು ನಗರಕ್ಕೆ ಅಮೆರಿಕ ಕಾನ್ಸುಲೇಟ್ ಕಚೇರಿ ಸ್ಥಾಪನೆ ಕುರಿತು, ಮಾನ್ಯ ಸಂಸದ ತೇಜಸ್ವೀ ಸೂರ್ಯ ರವರು, ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ರವರಿಗೆ 2019 ರಲ್ಲಿ ಮನವಿ ಸಲ್ಲಿಸಿದ್ದು, ಭಾರತದಲ್ಲಿನ ಅಮೆರಿಕ ರಾಯಭಾರಿ ಡಾ. ಕೆನೆತ್ ಜಸ್ಟರ್ ರವರಿಗೂ ಕೂಡ ಮಾರ್ಚ್ 2020 ರಲ್ಲಿ ಮನವಿ ಸಲ್ಲಿಸಿದ್ದು, ಬೆಂಗಳೂರಿಗರ ಬಹುದಿನಗಳ ಬೇಡಿಕೆಗೆ ಇಂದಿನ ಯುವ ಸಂವಾದ ಕಾರ್ಯಕ್ರಮದಲ್ಲಿ ಭರವಸೆ ಸಿಕ್ಕಿದ್ದು ಗಮನಾರ್ಹ.
“ ರಾಜ್ಯದ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಯುವ ಸಂವಾದ ವೇದಿಕೆ ಅಡಿ ನಡೆಸಲು ಇಚ್ಚಿಸಲಾಗಿದ್ದು, ಶ್ರೀಮತಿ ಸ್ಮೃತಿ ಇರಾನಿ ( ಮಾನ್ಯ ಕೇಂದ್ರ ಸಚಿವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭಾರತ ಸರ್ಕಾರ) , ಶ್ರೀ ರಾಜೀವ್ ಚಂದ್ರಶೇಖರ್ ( ಕೇಂದ್ರ ಸಚಿವರು) ಸೇರಿದಂತೆ ಬಿಜೆಪಿಯ ಇನ್ನೂ ಅನೇಕ ನಾಯಕರೊಂದಿಗೆ ಏರ್ಪಡಿಸಲು ನಿರ್ಧರಿಸಲಾಗಿದೆ “ ಎಂದು ಸಂಸದ ತೇಜಸ್ವೀ ಸೂರ್ಯ ವಿವರಿಸಿದರು.