ಬೆಂಗಳೂರು : ಅನಧಿಕೃತವಾಗಿ ಒಳಚರಂಡಿ ನೀರನ್ನು ಸಂಪರ್ಕ ಪಡೆದಿದ್ದರೆ, ಮೇ 7 ರೊಳಗಾಗಿ ಅಧಿಕೃತ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.
ರವಿವಾರ ಪ್ರಕಟಣೆ ಹೊರಡಿಸಿರುವ ಅವರು, ಜಲಮಂಡಳಿ ಕಾಯ್ದೆಯ ಉಲ್ಲಂಘನೆ ಮಾಡಿ ಅನಧಿಕೃತವಾಗಿ ಒಳಚರಂಡಿ ನೀರನ್ನು ಸಂಪರ್ಕ ಪಡೆದಿದ್ದಲ್ಲಿ ಕೂಡಲೇ ಬೆಂಗಳೂರು ಜಲಮಂಡಳಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಪರಿಗಣಿಸಿ ಅನಧಿಕೃತ ಸಂಪರ್ಕವನ್ನು ಮಂಡಳಿಯ ನಿಯಮಾನುಸಾರ ಅಧಿಕೃತ ಮಾಡಿಕೊಳ್ಳಲಾಗುತ್ತದೆ ತಿಳಿಸಿದ್ದಾರೆ.
ಒಂದು ವೇಳೆ ಮೇ 7ರ ನಂತರ ಒಳಚರಂಡಿ ನೀರನ್ನು ಅನಧಿಕೃತವಾಗಿ ಮಂಡಳಿಯ ಒಳಚರಂಡಿ ಕೊಳವೆ ಮಾರ್ಗಕ್ಕೆ ಅಥವಾ ಮಳೆ ನೀರು ಕಾಲುವೆಗೆ ಹರಿಸುತ್ತಿರುವುದು ಕಂಡುಬಂದಲ್ಲಿ ಅಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964 ಕಲಂ 65 ಮತ್ತು 72 ರನ್ವಯ ಬಿಬಿಎಂಪಿ ವ್ಯಾಪ್ತಿಯ ಬೆಂಗಳೂರು ನಗರದ ನಾಗರೀಕರು ತಮ್ಮ ಕಟ್ಟಡದ ಒಳಚರಂಡಿ ನೀರನ್ನು ಕಡ್ಡಾಯವಾಗಿ ಬೆಂಗಳೂರು ಜಲಮಂಡಳಿಯಿಂದ ನೀರು ಮತ್ತು ಒಳಚರಂಡಿ ಸಂಪರ್ಕವನ್ನು ಪಡೆದು ಮಂಡಳಿಯ ಒಳಚರಂಡಿ ಕೊಳವೆ ಮಾರ್ಗಕ್ಕೆ ಹರಿಸಬೇಕಾಗಿರುತ್ತದೆ ಎಂದು ಅವರು ವಿವರಿಸಿದ್ದಾರೆ.
ಇನ್ನು ಎಲ್ಲಾ ಮಾದರಿಯ ದೊಡ್ಡಗಾತ್ರದ ಕಟ್ಟಡದವರು ನಿಯಮಾನುಸಾರ ಎಸ್ಟಿಪಿ ಅಳವಡಿಸಿಕೊಂಡು ಸಂಸ್ಕರಿಸಿದ ನೀರನ್ನು ತಮ್ಮ ಕಟ್ಟಡದಲ್ಲಿ ಗೃಹ ಬಳಕೆಗೆ ಹೊರತುಪಡಿಸಿ ಇನ್ನಿತರೆ ಅನ್ಯ ಉದ್ದೇಶಗಳಿಗೆ ಬಳಸಬೇಕಾಗಿರುತ್ತದೆ. ಕೆಲವರು ಈ ಕ್ರಮವನ್ನು ಉಲ್ಲಂಘನೆ ಮಾಡಿ ಅನಧಿಕೃತವಾಗಿ ಒಳಚರಂಡಿ ನೀರನ್ನು ಮಂಡಳಿಯ ಒಳಚರಂಡಿ ಕೊಳವೆ ಮಾರ್ಗಕ್ಕೆ ಹಾಗೂ ಮಳೆ ನೀರು ಕಾಲುವೆಗೆ ಹರಿಸುತ್ತಿರುವುವರ ಬಗ್ಗೆ ಬೆಂಗಳೂರು ಜಲಮಂಡಳಿಯಿಂದ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.