ಬೆಂಗಳೂರು:
ತನ್ನನ್ನು ಬಿಟ್ಟು ಪರಸ್ತ್ರೀಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಗೆಳೆಯನೊಂದಿಗೆ ಮಹಿಳೆ ಗಲಾಟೆ ಮಾಡಿದ ಪರಿಣಾಮ ಕೋಪಗೊಂಡ ಗೆಳೆಯ ಆಕೆಯನ್ನು ಹತ್ಯೆ ಮಾಡಿರುವ ಘಟನೆಯೊಂದು ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಶರಗುಣಂ (35) ಹತ್ಯೆಯಾದ ಮಹಿಳೆಯಾಗಿದ್ದಾರೆ. ಆರೋಪಿ ಗಮೇಶ್ ಮಹಿಳೆಯನ್ನು ಹತ್ಯೆ ಮಾಡಲು ಯತ್ನಿಸಿದ್ದು, ಬಳಿಕ ಆಕೆಯನ್ನು ಆತನೇ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಮೃತ ಮಹಿಳೆ ಶರಗುಣಂ ಮೂಲತಃ ತಮಿಳುನಾಡು ಮೂಲದವರಾಗಿದ್ದು, ಕುರುಬರಹಳ್ಳಿಯ ಜೆಸಿ.ನಗರದ ಕಾಲೋನಿಯಲ್ಲಿ ತನ್ನ ಪತಿ ಶಿವಕುಮಾರ್ ಹಾಗೂ ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದರು.
ಪತಿ ಟೈಲ್ಸ್ ಗುತ್ತಿಗೆದಾರನಾಗಿದ್ದರೆ, ಆಕೆ ಮನೆಗೆಲಸ ಮಾಡುತ್ತಿದ್ದಳು. 5 ವರ್ಷಗಳ ಹಿಂದೆ ಆಕೆದೆ ತಮಿಳುನಾಡು ಮೂಲದ ಗಣೇಶ್ ಎಂಬಾತನ ಪರಿಯತವಾಗಿದೆ. ಬಳಿಕ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿದೆ. ಗೆಳೆಯರಿಗೆ ಆಟೋ ಕೊಡಿಸಿದ್ದಲ್ಲದೇ, ತನ್ನ ಮನೆಯ ಸಮೀಪವೇ ಬಾಡಿಗೆಯನ್ನೂ ಶರಗುಣಂ ಕೊಡಿಸಿದ್ದಾಳೆ. ಇತ್ತೀಚೆಗೆ ಆತನ ವರ್ತನೆಯಲ್ಲಿ ಬದಲಾವಣೆಯನ್ನು ಕಂಡ ಶರಗುಣಂ ಬೇರೊಂದು ಮಹಿಳೆಯೊಂದಿಗೆ ಸಂಬಂಧವಿದೆ ಎಂದು ಆಗಾಗ್ಗೆ ಜಗಳಕ್ಕಿಳಿಯುತ್ತಿದ್ದಳು.
ಈ ನಡುವೆ ಇವರಿಬ್ಬರ ಅನೈತಿಕ ಸಂಬಂಧ ತಿಳಿದ ಶಿವಕುಮಾರ್, ಆತನೊಂದಿಗಿನ ಸಂಬಂಧ ಕಡಿದುಕೊಳ್ಳುವಂತೆ ಸೂಚಿಸಿದ್ದರೂ, ಪತಿಯ ಮಾತು ಕೇಳದ ಶರಗುಣಂ, ಗಣೇಶ್ ಜೊತೆಗಿನ ಸಂಬಂಧವನ್ನು ಮುಂದುವರೆಸಿದ್ದಳು.
ಶಿವಕುಮಾರ್ ಅವರು ಕೆಲಸಕ್ಕೆ ಹೋದ ಬಳಿಕ ಶರಗುಣಂ ಎಂದಿನಂತೆ ಗೆಳೆಯನ ಮನೆಗೆ ಹೋಗಿದ್ದು, ಈ ವೇಳೆ ಪರಸ್ತ್ರೀ ಜೊತೆಗೆ ಸಂಬಂಧ ಇದೆ ಎಂದು ಜಗಳಕ್ಕಿಳಿದಿದ್ದಾಳೆ. ಮಾತು ವಿಕೋಪಕ್ಕೆ ತಿರುಗಿದ್ದು, ಬೇಸತ್ತು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಫ್ಯಾನಿಗೆ ನೇಣಿ ಬಿಗಿದುಕೊಂಡಿದ್ದ ನಿಂತಿದ್ದ ಶರಗುಣಂನನ್ನು ನೋಡಿದ, ಆರೋಪಿ ಗಣೇಶ್ ನಿಂತಿದ್ದ ಚೇರನ್ನು ತಳ್ಳಿದ್ದಾನೆ. ಈ ವೇಳೆ ಉಸಿರುಗಟ್ಟಿ ಶರಗುಣಂ ಒದ್ದಾಡಿದ್ದು, ರಕ್ಷಣೆಗೆ ಗಣೇಶ್ ಧಾವಿಸಿಲ್ಲ. ನಂತರ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾನೆ.
ಬಳಿಕ ಮಹಿಳೆ ತನ್ನ ಸಹೋದರಿ ಎಂದು ಆಸ್ಪತ್ರೆಯ ಸಿಬ್ಬಂದಿಗೆ ಹೇಳಿದ್ದಾನೆ. ಈ ವೇಳೆ ಆಸ್ಪತ್ರೆಯ ಸಿಬ್ಬಂದಿಗಳು ಬಸವೇಶ್ವರನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.