ಬೆಂಗಳೂರು:
ಅಟಲ್ ಬಿಹಾರಿ ವಾಜಪೇಯಿ, ದೀನದಯಾಳ್ ಉಪಾಧ್ಯಾಯ, ಶ್ಯಾಮಪ್ರಸಾದ್ ಮುಖರ್ಜಿ ಅವರು ನಮಗೆ ಆದರ್ಶಪ್ರಾಯರಾಗಿ ಬದುಕಿದರು. ನಂತರ ಬಂದ ಎಲ್.ಕೆ.ಅಡ್ವಾಣಿ, ಇಂದಿನ ನರೇಂದ್ರ ಮೋದಿಯವರು ಸೇರಿ ಎಲ್ಲರೂ ಕಳಂಕರಹಿತ ಆಡಳಿತ ನೀಡಿದ್ದೇವೆ. ವಾಜಪೇಯಿ ಅವರ ಸರಕಾರ ಆರೂವರೆ ವರ್ಷಗಳಲ್ಲಿ ಕಳಂಕರಹಿತವಾಗಿ ಕೆಲಸ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್ ಕುಮಾರ್ ಕಟೀಲ್ ಅವರು ಇಂದು ತಿಳಿಸಿದರು.
ಕೊಡಿಗೆಹಳ್ಳಿ ಮುಖ್ಯರಸ್ತೆಯ ಭದ್ರಪ್ಪ ಲೇಔಟ್ ನ ಶಾಂತಿನಿಕೇತನ ಶಾಲೆಯಲ್ಲಿ ಪ್ರಶಿಕ್ಷಣ ವರ್ಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಏಳೂವರೆ ವರ್ಷಗಳಿಂದ ಆಡಳಿತ ನಡೆಸುತ್ತಿದ್ದು, ಭ್ರಷ್ಟಾಚಾರರಹಿತರಾಗಿ ಜನಮೆಚ್ಚುಗೆ ಪಡೆದಿದ್ದಾರೆ. ಆದರ್ಶಗಳು ಮತ್ತು ವ್ಯಕ್ತಿಯ ನಿರ್ಮಾಣದಿಂದ ಪಕ್ಷ ಬೆಳೆದುನಿಂತಿದೆ ಎಂದು ತಿಳಿಸಿದರು. ಪ್ರಶಿಕ್ಷಣ ವರ್ಗಗಳಲ್ಲಿ ನಾವು ನಾಯಕರನ್ನು ಬೆಳೆಸುವ ಕಾರ್ಯ ಮಾಡಿದ್ದೇವೆ. ಆದ್ದರಿಂದ ಇಂಥ ವರ್ಗಗಳು ಅತ್ಯಂತ ಮಹತ್ವದ್ದು ಎಂದರು.

ಬಡ ಮಹಿಳೆಯರ ಸಂಕಷ್ಟ ನಿವಾರಣೆಗೆ ಉಚಿತ ಗ್ಯಾಸ್ ಸಂಪರ್ಕ, ಜನಧನ್ ಯೋಜನೆ ಮೂಲಕ ನೇರ ಸೌಲಭ್ಯ ವರ್ಗಾವಣೆ, ಹಳ್ಳಿಯಲ್ಲಿರುವ ಮಹಿಳೆಯರಿಗಾಗಿ ಶೌಚಾಲಯ ನಿರ್ಮಾಣ, ತಾಯಂದಿಯರ ಔಷಧಿಯ ಮತ್ತು ಆಸ್ಪತ್ರೆ ವೆಚ್ಚ ಭರಿಸಲಾಗುತ್ತಿದೆ ಎಂದರು. ಇಂದು ಜಗದ್ಗುರು ಭಾರತದ ನಿರ್ಮಾಣ ನಡೆಯುತ್ತಿದೆ ಎಂದು ತಿಳಿಸಿದರು.
ನರೇಂದ್ರ ಮೋದಿಯವರ ಆಡಳಿತವನ್ನು ಜಗತ್ತು ಕೊಂಡಾಡುತ್ತಿದೆ. ಪಕ್ಷವು ಜನಸಂಘದಿಂದ ಇಂದಿನವರೆಗೆ ಸಿದ್ಧಾಂತ ಮತ್ತು ಕಾರ್ಯಪದ್ಧತಿಯಲ್ಲಿ ರಾಜಿ ಮಾಡಿಕೊಂಡಿಲ್ಲ. ಕಾಶ್ಮೀರ ಮತ್ತು ಭಾರತವು ಒಂದೇ ಸಂವಿಧಾನ, ಒಂದೇ ಧ್ವಜ ಹೊಂದಿರಬೇಕು ಎಂದು ಶ್ಯಾಮಪ್ರಸಾದ್ ಮುಖರ್ಜಿ ಅವರು ಹೋರಾಡಿದ್ದರು. ಕಾಶ್ಮೀರದ 370ನೇ ವಿಧಿ ರದ್ದು ಮಾಡುವ ಕೆಲಸವನ್ನು ಬಿಜೆಪಿ ಸರಕಾರ ಮಾಡಿದೆ ಎಂದು ವಿವರಿಸಿದರು.
ಅಯೋಧ್ಯೆಯ ಪ್ರಭು ಶ್ರೀರಾಮಮಂದಿರಕ್ಕಾಗಿ 30-40 ವರ್ಷಗಳ ಕಾಲ ಹೋರಾಟ ಮಾಡಿದ್ದೇವೆ. ಹಿಂದುಗಳ ಭಾವನೆಯ ಸಂಕೇತ ಮತ್ತು ಸ್ವಾಭಿಮಾನದ ಸಂಕೇತ ಎನಿಸಿದ ಅಯೋಧ್ಯೆಯ ಮಂದಿರ ನಿರ್ಮಾಣದ ಕನಸು ಇದೀಗ ನನಸಾಗುತ್ತಿದೆ. ಮಂದಿರದ ಶಿಲಾನ್ಯಾಸವನ್ನು ಸ್ವತಃ ನರೇಂದ್ರ ಮೋದಿಯವರೇ ನೆರವೇರಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಕೇದಾರನಾಥದಲ್ಲಿ ಅತಿವೃಷ್ಟಿಯಿಂದ ಮಂದಿರ ಕೊಚ್ಚಿ ಹೋದಾಗ ಎರಡೇ ವರ್ಷಗಳಲ್ಲಿ ಅದನ್ನು ಪುನರ್ ನಿರ್ಮಿಸಿ ಶಂಕರಾಚಾರ್ಯರ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡುವ ಕಾರ್ಯವನ್ನೂ ಮಾಡಿದ್ದೇವೆ. ಹಿಂದೂಗಳ ಹೃದಯ ಮಂದಿರ ಎನಿಸಿದ ಕಾಶಿಯ ಭವ್ಯವಾಗಿ ಮತ್ತು ದಿವ್ಯವಾಗಿ ಪುನರ್ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಗೋಹತ್ಯೆ ನಿಷೇಧಿಸಿದ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಭಿನಂದಿಸಿದ ಅವರು, ಸಾಮರಸ್ಯ ಕೊರತೆಯನ್ನು ನಿವಾರಿಸಲು ಮತಾಂತರ ಪಿಡುಗನ್ನು ನಿವಾರಿಸಲು ಮತಾಂತರ ನಿಷೇಧ ಕಾನೂನನ್ನು ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರ ಜಾರಿಗೊಳಿಸುತ್ತಿದೆ. ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು. ಈ ಮೂಲಕ ನುಡಿದಂತೆ ನಡೆವ ಸರಕಾರ ನಮ್ಮದು ಎಂದು ತಿಳಿಸಿದರು.
ಸಾಮಾಜಿಕ ಜಾಗೃತಿ, ರಾಷ್ಟ್ರಭಕ್ತಿ, ರಾಜಕಾರಣದೊಂದಿಗೆ ಕಾರ್ಯಕರ್ತ ಕೆಲಸ ಮಾಡಬೇಕು. ಮೌಲ್ಯಾಧಾರಿತ ರಾಜಕಾರಣಕ್ಕೆ ವ್ಯಕ್ತಿತ್ವ ನಿರ್ಮಾಣದ ಅಗತ್ಯವಿದೆ. ಅದಕ್ಕಾಗಿ ಅಭ್ಯಾಸವರ್ಗಗಳನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಬಿಜೆಪಿ ಅತಿ ಹೆಚ್ಚು ಸದಸ್ಯರು, ಅತಿ ಹೆಚ್ಚು ಶಾಸಕರು ಮತ್ತು ಗರಿಷ್ಠ ಸಂಸದರನ್ನು ಪಡೆದ ಪಕ್ಷ. ಅದು ಅತಿ ಹೆಚ್ಚು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ. ನಂಬರ್ ವನ್ ಸ್ಥಾನದಲ್ಲಿರುವ ಪಕ್ಷ ನಮ್ಮದು. ನಮ್ಮ ಕಾರ್ಯಪದ್ಧತಿ ಮತ್ತು ನಡವಳಿಕೆಯಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ವಿಶ್ಲೇಷಿಸಿದರು. ರಾಷ್ಟ್ರೋನ್ನತಿಯ ರಾಜಕಾರಣದ ಪರಿಕಲ್ಪನೆಯನ್ನು ಜನಸಂಘ ಕಾಲದಿಂದಲೇ ಹೊಂದಿದ್ದೇವೆ. ಪರಮ ವೈಭವ ಸ್ಥಿತಿಗೆ ಭಾರತವನ್ನು ಕೊಂಡೊಯ್ಯಲು ನಾವೀಗ ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.
ಸಿದ್ಧಾಂತ ಮತ್ತು ತತ್ವದಡಿ ಕೆಲಸ ಮಾಡುವ ಕಾರ್ಯಕರ್ತರಿಗೆ ಆದರ್ಶವನ್ನು ನೀಡಿದ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರು ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಒಬ್ಬ ಸ್ವಯಂಸೇವಕ, ಸಂಸದ, ವಿರೋಧ ಪಕ್ಷದ ನಾಯಕ, ರಾಷ್ಟ್ರದ ಪ್ರಧಾನಿಯಾಗಿ ಕಳಂಕರಹಿತ, ಆದರ್ಶಪ್ರಾಯರಾಗಿ ಅದ್ಭುತವಾದ ಸಾಧನೆಯನ್ನು ವಾಜಪೇಯಿ ಅವರು ಮಾಡಿದವರು ಎಂದು ನೆನಪಿಸಿದರು. ವಾಜಪೇಯಿ ಅವರು ಕೇವಲ ಬಿಜೆಪಿ ನಾಯಕರಲ್ಲ. ದೇಶಭಕ್ತ, ರಾಷ್ಟ್ರಪ್ರೇಮಿಯಾಗಿರುವ ಎಲ್ಲರಿಗೂ ಮಾದರಿ ವ್ಯಕ್ತಿ ಎಂದರು.
ರಾಜ್ಯಾಧ್ಯಕ್ಷರಾದ ಶ್ರೀ @nalinkateel ಅವರು ಇಂದು ಬ್ಯಾಟರಾಯನಪುರದಲ್ಲಿ ವಿಷಯ ಪ್ರಮುಖರ ಕಾರ್ಯಾಗಾರ ನಡೆಸಿದರು.
— BJP Karnataka (@BJP4Karnataka) December 25, 2021
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ @arunbpbjp, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಶ್ರೀ ಬಿ. ನಾರಾಯಣ, ಪ್ರಶಿಕ್ಷಣ ಪ್ರಕೋಷ್ಠ ರಾಜ್ಯ ಸಂಚಾಲಕರು, ಸಹ ಸಂಚಾಲಕರು ಹಾಗೂ ಪ್ರಮುಖರು ಉಪಸ್ಥಿತರಿದ್ದರು. pic.twitter.com/cf4EbeLfCb
ಇಂದು ಏಸುಕ್ರಿಸ್ತನ ಜನ್ಮದಿನ ಮತ್ತು ವಾಜಪೇಯಿ ಅವರ ಜನ್ಮದಿನ. ಕಾರ್ಯಕರ್ತರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯ ನಡೆದಿದೆ ಎಂದು ತಿಳಿಸಿದರು.
ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕರಾದ ಶ್ರೀಕಾಂತ್ ಕುಲಕರ್ಣಿ, ಪ್ರಶಿಕ್ಷಣ ಪ್ರಕೋಷ್ಠದ ಸಹ ಸಂಚಾಲಕರು ಮತ್ತು ವಿಧಾನಪರಿಷತ್ ಮಾಜಿ ಸದಸ್ಯರಾದ ಸಿದ್ದರಾಮಣ್ಣ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಬಿ. ನಾರಾಯಣ್, ಪಕ್ಷದ ಪ್ರಮುಖರು, ಅಪೇಕ್ಷಿತರು ಭಾಗವಹಿಸಿದ್ದರು.