ಭಾರತ ಮತ್ತು ನ್ಯೂಜಿಲೆಂಡ್ (India and New Zealand) ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಭಾನುವಾರಂದು ಹ್ಯಾಮಿಲ್ಟನ್ನಲ್ಲಿ (Hamilton) ನಡೆಯಲಿದೆ. ಮೊದಲ ಏಕದಿನ ಪಂದ್ಯದಲ್ಲಿ ಸೋತಿರುವ ಶಿಖರ್ ಧವನ್ (Shikhar Dhawan) ನೇತೃತ್ವದ ಟೀಂ ಇಂಡಿಯಾ (team India) ಎರಡನೇ ಏಕದಿನ ಪಂದ್ಯವನ್ನು ಗೆಲ್ಲುವುದರೊಂದಿಗೆ ಸರಣಿಯನ್ನು ಸಮಬಲಗೊಳಿಸುವತ್ತ ಕಣ್ಣಿಟ್ಟಿದೆ. ಮೊದಲ ಪಂದ್ಯದಲ್ಲಿ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಟಾಮ್ ಲೇಥಮ್ (Kane Williamson and Tom Latham) ಅವರ ದಾಖಲೆಯ ದ್ವಿಶತಕದ ಜೊತೆಯಾಟದಿಂದಾಗಿ ಟೀಂ ಇಂಡಿಯಾ 7 ವಿಕೆಟ್ಗಳ ಅಂತರದಿಂದ ಹೀನಾಯವಾಗಿ ಸೋಲಿಸಿತ್ತು. ಹೀಗಿರುವಾಗ ಹ್ಯಾಮಿಲ್ಟನ್ನಲ್ಲೂ ತಮ್ಮ ಗೆಲುವಿನ ಓಟವನ್ನು ಮುಂದುವರಿಸಲು ಕಿವೀಸ್ ಪ್ರಯತ್ನಿಸಲಿದೆ.
ಆದರೆ ಮೊದಲ ಪಂದ್ಯವನ್ನು ಸೋತಿರುವುದರಿಂದ ಸರಣಿಯನ್ನು ಜೀವಂತವಾಗಿರಿಸಲು ಟೀಂ ಇಂಡಿಯಾ ಎರಡನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಆಡಿದ ಮೊದಲ ಪಂದ್ಯದಲ್ಲಿ ಧವನ್ ಪಡೆಯ ಬ್ಯಾಟಿಂಗ್ ವಿಭಾಗ ಭರ್ಜರಿ ಪ್ರದರ್ಶನದೊಂದಿಗೆ 306 ರನ್ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತ್ತು. ಆದರೆ ಈ ಬೃಹತ್ ಟಾರ್ಗೆಟ್ ಅನ್ನು ಉಳಿಸುವಲ್ಲಿ ಬೌಲಿಂಗ್ ವಿಭಾಗ ವಿಫಲವಾಯಿತು. ಅನುಭವಿಗಳಿಲ್ಲದೆ ಮೈದಾನಕ್ಕಿಳಿದಿದ್ದ ಟೀಂ ಇಂಡಿಯಾ ತನ್ನ ನಿರ್ಧಾರಕ್ಕೆ ಭಾರಿ ದಂಡವನ್ನೇ ತೆತ್ತಬೇಕಾಯಿತು. ಹೀಗಾಗಿ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ತನ್ನಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿಕೊಂಡು ಅಖಾಡಕ್ಕಿಳಿಯಬೇಕಿದೆ.
ಬಿರುಗಾಳಿ ಸಹಿತ ಮಳೆ ಬೀಳುವ ಸಂಭವ
ಎರಡನೇ ಏಕದಿನ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲಗೊಳಿಸುವ ತವಕದಲ್ಲಿರುವ ಭಾರತಕ್ಕೆ ಮಳೆ ವಿಲನ್ ಆಗುವ ಸಾಧ್ಯತೆಗಳಿವೆ. ಹ್ಯಾಮಿಲ್ಟನ್ನಲ್ಲಿ ಭಾನುವಾರ ಮೋಡ ಕವಿದ ವಾತಾವರಣವಿದ್ದು, ಸುಮಾರು 4 ಗಂಟೆಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಇದರ ಜೊತೆಗೆ ಶೇ.19ರಷ್ಟು ಬಿರುಗಾಳಿ ಏಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದು ನಿಜವಾದರೆ ಭಾರತಕ್ಕೆ ತಲೆನೋವು ಇನ್ನಷ್ಟು ಹೆಚ್ಚಾಗಲಿದೆ.
ಏಕದಿನ ಸರಣಿಗೂ ಮೊದಲು ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿಗೂ ಮಳೆ ಅಡ್ಡಿಯಾಗಿತ್ತು. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರೆ, ಎರಡನೇ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತ್ತು. ಆದರೆ ಮೂರನೇ ಪಂದ್ಯ ಮಳೆಯಿಂದಾಗಿ ಟೈ ಆಗಿದ್ದರಿಂದ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟೀಂ ಇಂಡಿಯಾ ಟಿ20 ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಂಡಿತ್ತು.
ಮೊದಲ ಪಂದ್ಯದಲ್ಲಿ ಹೀನಾಯ ಸೋಲು
ಆಕ್ಲೆಂಡ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆತಿಥೇಯರಿಗೆ 307 ರನ್ಗಳ ಗುರಿ ನೀಡಿತ್ತು. ಈ ಪಂದ್ಯದಲ್ಲಿ ನಾಯಕ ಶಿಖರ್ ಧವನ್ 72 ರನ್, ಶುಭಮನ್ ಗಿಲ್ ಅರ್ಧಶತಕ ಮತ್ತು ಶ್ರೇಯಸ್ ಅಯ್ಯರ್ ಅವರ 80 ರನ್ಗಳ ನೆರವಿನಿಂದ ಭಾರತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿತು. ಉತ್ತರವಾಗಿ, ಆತಿಥೇಯರು 17 ಎಸೆತಗಳು ಬಾಕಿ ಇರುವಂತಯೇ 3 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿದರು.
ಠಾಕೂರ್ ದುಬಾರಿ
ಮೊದಲ ಏಕದಿನ ಪಂದ್ಯದಲ್ಲಿ ಕಿವೀಸ್ ಪರ ಲೇಥಮ್ ಅಜೇಯ 145 ಮತ್ತು ವಿಲಿಯಮ್ಸನ್ ಅಜೇಯ 94 ರನ್ ಗಳಿಸಿ ತಂಡದ ಗೆಲುವಿನ ರೂವಾರಿಗಳಾಗಿದ್ದರು. ಭಾರತದ ಪರ ಅರ್ಷದೀಪ್ ಸಿಂಗ್, ಶಾರ್ದೂಲ್ ಠಾಕೂರ್ ತುಂಬಾ ದುಬಾರಿಯಾಗಿದ್ದರು. ಇದರಲ್ಲಿ ಠಾಕೂರ್ ಒಂದೇ ಒಂದು ಓವರ್ನಲ್ಲಿ ಸುಮಾರು 25 ರನ್ಗಳನ್ನು ಬಿಟ್ಟುಕೊಟ್ಟು ಪಂದ್ಯವು ಬಹುತೇಕ ಭಾರತದ ಕೈಯಿಂದ ಜಾರುವಂತೆ ಮಾಡಿದ್ದರು.