Home ಬೆಂಗಳೂರು ನಗರ ಆಧುನಿಕ ಆರ್ಥಿಕತೆಯಲ್ಲಿ ಕರ್ನಾಟಕ ಮುಂಚೂಣಿ: ಡಾ.ಸಿ.ಎನ್.ಅಶ್ವತ್ಥನಾರಾಯಣ್

ಆಧುನಿಕ ಆರ್ಥಿಕತೆಯಲ್ಲಿ ಕರ್ನಾಟಕ ಮುಂಚೂಣಿ: ಡಾ.ಸಿ.ಎನ್.ಅಶ್ವತ್ಥನಾರಾಯಣ್

35
0
Karnataka at fore in modern economy: Dr. C. N. Ashwathanarayan
Karnataka at fore in modern economy: Dr. C. N. Ashwathanarayan

ಬೆಂಗಳೂರು:

ಆಧುನಿಕ ಆರ್ಥಿಕತೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿ, ವಿಶ್ವದಲ್ಲೇ ಮೊದಲ ಸ್ಥಾನಕ್ಕೇರುವತ್ತ ಸಾಗುತ್ತಿದೆ ಎಂದು ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಹೇಳಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್ ಸೇರಿದಂತೆ ಎಲ್ಲ ವಲಯಗಳಲ್ಲಿ ಸುಧಾರಣೆಗಳನ್ನು ತಂದಿದ್ದಾರೆ. ಡಿಜಿಟಲ್ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಾಗಿದೆ. ದೇಶದ ಎರಡೂವರೆ ಲಕ್ಷ ಗ್ರಾಮಗಳಿಗೆ ಆಪ್ಟಿಕಲ್ ಸೇವೆ ಒದಗಿಸಲಾಗಿದೆ. ಮೂಲಸೌಕರ್ಯವನ್ನು ಅಗಾಧ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ರೈಲ್ವೆಯಲ್ಲಿ ಬಹಳಷ್ಟು ಸುಧಾರಣೆ ತರಲಾಗಿದ್ದು, ಆರಾಮದಾಯಕ ಪ್ರಯಾಣ ಮತ್ತು ಸುರಕ್ಷತೆ ಇದರಿಂದ ಸಾಧ್ಯವಾಗಿದೆ. ‘ವಂದೇ ಭಾರತ್’ ರೈಲು ಆತ್ಮನಿರ್ಭರತೆಗೆ ನಿದರ್ಶನವಾಗಿದೆ. ಕಳೆದ 9 ವರ್ಷಗಳಲ್ಲಿ 70 ವಿಮಾನನಿಲ್ದಾಣಗಳು ನಿರ್ಮಾಣಗೊಂಡಿವೆ ಎಂದು ಹೇಳಿದರು.

ರಾಜ್ಯದಲ್ಲಿ ಜಲಜೀವನ್, ಆಯುಷ್ಮಾನ್ ಭಾರತ್, ಪಿಎಂ ಆವಾಸ್, ಕಿಸಾನ್ ಸಮ್ಮಾನ್ ಸೇರಿದಂತೆ ಕೇಂದ್ರದ ಯೋಜನೆಗಳು ಸಂಪೂರ್ಣವಾಗಿ ಜಾರಿಗೊಂಡು, ಅಭಿವೃದ್ಧಿಯ ವೇಗ ಹೆಚ್ಚಿದೆ. ಬೆಳೆಗಾರನಿಂದ ಬಳಕೆದಾರನವರೆಗೆ ತಂತ್ರಜ್ಞಾನ ಬಳಕೆಯಿಂದ ಕೃಷಿಯಲ್ಲಿ ಕ್ರಾಂತಿ ಮಾಡಲಾಗಿದೆ. ರೈತರು ಉತ್ತಮ ಭವಿಷ್ಯ ಕಟ್ಟಿಕೊಳ್ಳುವತ್ತ ಸಾಲಸೌಲಭ್ಯ ಸೇರಿದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ, ಕಾಂಗ್ರೆಸ್, ರೈತರ ಪ್ರಗತಿಗೆ ಪೂರಕವಾದ ಕೃಷಿ ಕಾನೂನು ಸೇರಿದಂತೆ ಇತರ ವಿಷಯಗಳನ್ನು ವಿರೋಧಿಸುತ್ತಿದೆ ಎಂದರು.

ಆಧುನಿಕ ಆರ್ಥಿಕತೆಯಲ್ಲಿ ಮುಂದಿರುವ ಕರ್ನಾಟಕ, ಕಳೆದ ವರ್ಷ 100 ಶತಕೋಟಿ ಡಾಲರ್ ಮಾಹಿತಿ-ತಂತ್ರಜ್ಞಾನ ರಫ್ತು ಮಾಡಿದೆ. ಉದ್ಯಮಶೀಲತೆಯನ್ನು ಇಡೀ ಕರ್ನಾಟಕಕ್ಕೆ ವಿಸ್ತರಿಸಲಾಗುತ್ತಿದೆ. ಕಳೆದ ವರ್ಷ 20 ಸಾವಿರ ನವೋದ್ಯಮಗಳು ಸ್ಥಾಪನೆಯಾಗಿವೆ. ಇದೇ ಅವಧಿಯಲ್ಲಿ 10 ಲಕ್ಷ ಕೋಟಿ ರೂ. ಹೂಡಿಕೆಯಾಗಿದೆ. ಉದ್ಯಮ ಸ್ನೇಹಿ ವಾತಾವರಣದಲ್ಲೂ ರಾಜ್ಯ ಮೊದಲ ಸ್ಥಾನದಲ್ಲಿದ್ದು, ಆವಿಷ್ಕಾರದ ತಾಣವೆನಿಸಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ ಮೊದಲ ರಾಜ್ಯವಾಗಿದ್ದು, ಗುಣಮಟ್ಟದ ಶಿಕ್ಷಣ ಹಾಗೂ ಕಲಿಕೆ ಮತ್ತು ಕೌಶಲ್ಯ ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ವರುಣಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ನಡೆಸಿರುವ ಹಲ್ಲೆ ಖಂಡನೀಯ. ಬಿಜೆಪಿ ಅಭ್ಯರ್ಥಿ ಸೋಮಣ್ಣ ಮತ್ತು ಸಂಸದರಾದ ಪ್ರತಾಪ್ ಸಿಂಹ ಅವರತ್ತ ಕಲ್ಲುಗಳನ್ನು ಬೀಸಲಾಗಿದೆ. ಸೋಲಿನ ಭೀತಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಈ ಕೃತ್ಯಗಳನ್ನು ಎಸಗುತ್ತಿದ್ದಾರೆ. ಈ ಚುನಾವಣೆ ನಾಡಿನ ದಿಕ್ಸೂಚಿಯಾಗಲಿದ್ದು, ವರುಣಾ ಸೇರಿದಂತೆ 150ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ಗಣನೀಯ ಪ್ರಗತಿ ಸಾಧಿಸಿದ್ದು, ಯುವಜನರಿಗೆ ಹೊಸ ಅವಕಾಶಗಳು ದೊರೆತಿವೆ. ಯುವಜನರ ಭವಿಷ್ಯಕ್ಕೆ ಬಿಜೆಪಿ ಗ್ಯಾರಂಟಿ ಎಂದು ಪ್ರಧಾನಿಯವರು ನಿನ್ನೆ ಹೇಳಿದ್ದಾರೆ. ಡಬಲ್ ಇಂಜಿನ್ ಸರ್ಕಾರಕ್ಕೆ ಕರ್ನಾಟಕ ಉತ್ತಮ ನಿದರ್ಶನವಾಗಿದೆ. ರಾಜ್ಯದಲ್ಲಿ ಡಿಜಿಟಲ್ ವ್ಯವಸ್ಥೆ ಅತಿ ವೇಗದಲ್ಲಿ ಸಾಗುತ್ತಿದ್ದು, ಎಲ್ಲ ಜಿಲ್ಲೆಗಳಲ್ಲಿ ಇಂಟರ್ ನೆಟ್ ಸೇವೆ ಒದಗಿಸಲಾಗಿದೆ. ವಿದ್ಯುನ್ಮಾನ, ಸೆಮಿಕಂಡಕ್ಟರ್ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಜಾಗತಿಕ ತಾಣವಾಗಿ ಹೊರಹೊಮ್ಮಿದೆ. ಕಳೆದ ಎರಡೂವರೆ ವರ್ಷದಲ್ಲಿ 18 ಲಕ್ಷ ಯುವಜನರಿಗೆ ಕೌಶಲ್ಯ ತರಬೇತಿ ನೀಡಲಾಗಿದೆ. ಮೊದಲ ಬಾರಿಗೆ ಎಲ್ಲ ಯುವಜನರು ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here