
ಬೆಂಗಳೂರು:
ಕೆಪಿಸಿಸಿ ಅಧ್ಯಕ್ಷ, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಾವು ವ್ಯಾಸಂಗ ಮಾಡಿದ ಬೆಂಗಳೂರಿನ ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ (National Public School, Rajajinagar) ಸ್ಥಾಪಕ ಅಧ್ಯಕ್ಷ ಡಾ. ಕೆ ಪಿ ಗೋಪಾಲಕೃಷ್ಣ ಅವರನ್ನು ಇಂದು ಬೆಳಗ್ಗೆ ಭೇಟಿ ಮಾಡಿ ಆಶೀರ್ವಾದ ಪಡೆದರು.
ಗೋಪಾಲಕೃಷ್ಣಅವರಿಗೆ ಹೂಗುಚ್ಛವನ್ನು ಕೊಟ್ಟು, ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು. ಶಿವಕುಮಾರ್ ಇಂದು ಸೂಟು-ಬೂಟು ಧರಿಸಿ ಗಮನಸೆಳೆದರು.

ಶಿವಕುಮಾರ್ ಮಾತನಾಡಿ, ‘ನಾನು ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದು ಇಲ್ಲೇ. ಭಾರತದ ಮೊದಲ ಅಟಾನಾಮಸ್ ಶಾಲೆ ಇದು. ನನ್ನ ಮಕ್ಕಳೂ ಇದೇ ಶಾಲೆಯಲ್ಲೇ ಓದಿದ್ದಾರೆ. ಈ ಶಾಲೆ ಬೆಲೆ ಏನು ಅಂತ ನನಗೆ ಗೊತ್ತಿದೆ. ಪಂಚಾಯತಿ ಮಟ್ಟದಲ್ಲಿ ನವೋದಯ ಶಾಲೆ ಮಾದರಿಯ ಶಾಲೆಗಳ ಸ್ಥಾಪನೆ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಿದ್ದೇವೆ. ಈ ಯೋಜನೆಯನ್ನು ಹೇಗೆ ಜಾರಿಗೊಳಿಸಬೇಕು ಎಂಬ ಬಗ್ಗೆ ನಾನು ಮತ್ತು ಜಿ.ಪರಮೇಶ್ವರ್ ಅವರು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಶಿಕ್ಷಣಕ್ಕೋಸ್ಕರವೇ ವಲಸೆ ಬರುವ ಮಕ್ಕಳು ಅನೇಕರು ಇದ್ದಾರೆ. ಹೀಗಾಗಿ ಹಳ್ಳಿಗಳಲ್ಲಿ ಪಂಚಾಯಿತಿ ಮಟ್ಟದಲ್ಲಿ ಉತ್ತಮ ಶಿಕ್ಷಣ ಕೊಡಿಸುವುದು ನಮ್ಮ ಧ್ಯೇಯ’ ಎಂದು ಹೇಳಿದರು.