Karnataka Dy CM DK Shivakumar instructs to create competent authority to look into problems and demands of Bangalore apartment Asociation
ಬೆಂಗಳೂರು:
ಬೆಂಗಳೂರಿನ ಅಪಾರ್ಟ್ಮೆಂಟ್ ನಿವಾಸಿಗಳ ಸಮಸ್ಯೆ ಮತ್ತು ಬೇಡಿಕೆಗಳ ಪರಿಶೀಲಿಸಲು ಸಕ್ಷಮ ಪ್ರಾಧಿಕಾರವನ್ನು ರಚಿಸುವಂತೆ ಅಧಿಕಾರಿಗಳಿಗೆ ಸಚಿವ ಡಿಕೆ.ಶಿವಕುಮಾರ್ ಅವರು ಶನಿವಾರ ಸೂಚನೆ ನೀಡಿದರು.
ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಶನ್ (ಬಿಎಎಫ್)’ನ ಪ್ರತಿನಿಧಿಗಳೊಂದಿಗೆ ಡಿಕೆ.ಶಿವಕುಮಾರ್ ಅವರು ಸಭೆ ನಡೆಸಿ, ಮಾತುಕತೆ ನಡೆಸಿದರು.
ಸಭೆ ಕುರಿತು ಮಾಹಿತಿ ನೀಡಿದ ಬಿಎಎಫ್ನ ಪ್ರಧಾನ ಕಾರ್ಯದರ್ಶಿ ವಿಕ್ರಮ್ ರೈ ಅವರು, ಚುನಾವಣೆಗೂ ಮುನ್ನ ಡಿಕೆ.ಶಿವಕುಮಾರ್ ಅವರು ಟೌಲ್ ಹಾಲ್ ನಲ್ಲಿ ಸಭೆ ನಡೆಸಿದ್ದರು, ಈ ಸಭೆಯನ್ನು ಆಧರಿಸಿ ಇಂದು ಸೌಜನ್ಯ ಸಭೆ ನಡೆಸಲಾಯಿತು,
ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಸಚಿವರಿಗೆ ತಿಳಿಸಿ, ಈಡೇರಿಸುವಂತೆ ಮನವಿ ಮಾಡಿಕೊಂಡೆವು. ನಮ್ಮ ಬೇಡಿಕೆಗಳಲ್ಲಿ ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಕಾಯಿದೆ 1972 ರ ತಿದ್ದುಪಡಿ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಸುಮಾರು 20 ನಿಮಿಷಗಳ ಕಾಲ ಸಭೆ ನಡೆಯಿತು. ನಮ್ಮ ಸಮಸ್ಯೆ, ಸಲಹೆಗಳನ್ನು ಆಲಿಸಿದ ಸಚಿವರು, ಸಮಸ್ಯೆಗಳ ಬಗೆಹರಿಸುವ ಭರವಸೆ ನೀಡಿದರು. ಈ ಸಂಬಂಧ ಪತ್ರ ಬರೆದು ತಮ್ಮ ಕಾರ್ಯದರ್ಶಿಗೆ ನೀಡಿದರು.
ಪತ್ರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು. ಸಮಸ್ಯೆಗಳ ಆಲಿಸಲು ಸಕ್ಷಮ ಪ್ರಾಧಿಕಾರ ಸ್ಥಾಪಿಸುವ ಭರವಸೆ ನೀಡಿದರು. ಐಎಎಸ್ ಕೇಡರ್ ಅಧಿಕಾರಿಯೊಬ್ಬರು ಪ್ರಾಧಿಕಾರದ ಮುಖ್ಯಸ್ಥರಾಗಿರುತ್ತಾರೆ ಎಂದು ತಿಳಿಸಿದರು ಎಂದು ವಿಕ್ರಮ್ ಅವರು ತಿಳಿಸಿದ್ದಾರೆ.
ಬೆಂಗಳೂರು ಅಪಾರ್ಟ್ಮೆಂಟ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿಕ್ರಂ ರೈ, ಕಿರಣ್ ಹೆಬ್ಬಾರ್, ಕೆಪಿಸಿಸಿ ಅಪಾರ್ಟ್ಮೆಂಟ್ ಮಾಲೀಕರ ಘಟಕದ ಅಧ್ಯಕ್ಷ, ರಾಜ್ಯಸಭೆ ಮಾಜಿ ಸದಸ್ಯ, ರಾಜೀವ್ ಗೌಡ, ಅಜಯ್, ಸತೀಶ್ ಮಲ್ಯ, ಪೀಟರ್, ಬ್ರಾಂಡ್ ಬೆಂಗಳೂರು ಫೋರ್ಸ್ ನ ಚೇತನ್ ಗೌಡ ಮತ್ತಿತರರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಕುಮಾರಕೃಪಾ ಅತಿಥಿಗೃಹದಲ್ಲಿ ಭೇಟಿ ಮಾಡಿ ಸಮೋಲೋಚನೆ ನಡೆಸಿದರು.
