Karnataka eager to serve Nandini Ghee for Tirupati Laddu again; KMF MD writes to TTD
ಬೆಂಗಳೂರು:
ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡುಗಳಿಗೆ ನಂದಿನ ತುಪ್ಪ ಪೂರೈಕೆ ವಿಚಾರ ರಾಜ್ಯದಲ್ಲಿ ರಾಜಕೀಯ ನಾಯಕರ ವಾಕ್ಸಮರಕ್ಕೆ ಕಾರಣವಾದ ಬೆನ್ನಲ್ಲೇ, ಟಿಟಿಡಿಗೆ ಪತ್ರ ಬರೆದಿರುವ ಕೆಎಂಎಫ್, ‘ನಾವು ಹಿಂದಿನಂತೆ ನಿಮಗೆ ತುಪ್ಪ ಪೂರೈಸಲು ಉತ್ಸುಕರಾಗಿದ್ದೇವೆ. ತುಪ್ಪದ ದರದ ಬಗ್ಗೆ ಚರ್ಚಿಸಲು ಸಭೆ ಆಯೋಜಿಸಬೇಕು’ ಎಂದು ಮನವಿ ಮಾಡಿದೆ.
ಟೆಂಡರ್ಗಳಲ್ಲಿ ಹೆಚ್ಚಿನ ಸ್ಪರ್ಧಾತ್ಮಕ ಬಿಡ್ಡಿಂಗ್ಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ತುಪ್ಪವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿಗೆ ಬರೆದ ಪತ್ರದಲ್ಲಿ ಕೆಎಂಎಫ್ ಹೇಳಿದೆ.
ನಾವು ಪ್ರತಿ ವರ್ಷ 30 ಸಾವಿರ ಮೆಟ್ರಿಕ್ ಟನ್ ತುಪ್ಪ ಉತ್ಪಾದನೆ ಮಾಡುತ್ತೇವೆ. ನಾವು ನಿಮಗೆ ತುಪ್ಪ ಪೂರೈಕೆ ಮಾಡಲು ತುಂಬಾ ಉತ್ಸುಕರಾಗಿದ್ದೇವೆ. ನಮ್ಮ ಜೊತೆ ಒಂದು ಸಭೆಯನ್ನು ಆಯೋಜನೆ ಮಾಡಿ ದರದ ಬಗ್ಗೆ ಚರ್ಚೆ ಮಾಡೋಣ ಎಂದು ಪತ್ರದಲ್ಲಿ ಹೇಳಲಾಗಿದೆ.
ತುಪ್ಪ ಪೂರೈಕೆಯಾಗದಿರುವ ಕುರಿತು ಮಾಧ್ಯಮಗಳಲ್ಲಿ ಉಂಟಾಗಿರುವ ವಿವಾದದ ಬಗ್ಗೆಯೂ ಸ್ಪಷ್ಟನೆ ನೀಡುವಂತೆ ಕೆಎಂಎಫ್ ಕೋರಿದೆ.
ಇತ್ತೀಚಿನ ದಿನಗಳಲ್ಲಿ ಟೆಂಡರ್ಗಳಲ್ಲಿ ಹೆಚ್ಚು ಸ್ಪರ್ಧಾತ್ಮಕ ಬಿಡ್ಡಿಂಗ್ಗಳಿಂದಾಗಿ ಕೆಎಂಎಫ್ ಟಿಟಿಡಿಗೆ ತುಪ್ಪವನ್ನು ಪೂರೈಸಲು ಸಾಧ್ಯವಾಗಲಿಲ್ಲ. ಕೆಎಂಎಫ್ ಸಹಕಾರಿ ರೈತ ಸಂಘಟನೆಯಾಗಿರುವುದರಿಂದ ಟೆಂಡರ್ಗಳಲ್ಲಿ ಸ್ಪರ್ಧಾತ್ಮಕ ಬಿಡ್ಡಿಂಗ್ಗೆ ಹೋಗುವುದಿಲ್ಲ. ಏಕೆಂದರೆ ಅಂತಹ ದರದಲ್ಲಿ ತುಪ್ಪದ ಉತ್ಪಾದನಾ ವೆಚ್ಚವನ್ನು ವಸೂಲಿ ಮಾಡಲು ಕಷ್ಟವಾಗುತ್ತದೆ ಎಂದು ಕೆಎಂಎಫ್ ಎಂಡಿ ಎಂ ಕೆ ಜಗದೀಶ್ ಅವರು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಟಿಟಿಡಿ ಪ್ರಸ್ತುತ ಖರೀದಿಸುತ್ತಿರುವ ತುಪ್ಪದ ಗುಣಮಟ್ಟದ ಬಗ್ಗೆ ಕೆಲವು ವರದಿಗಳು ಮತ್ತು ಹೇಳಿಕೆಗಳಿಗೆ ದೇವಾಲಯದ ಟ್ರಸ್ಟ್ನಿಂದ ಪ್ರತಿಕ್ರಿಯೆ ಬಂದಿವೆ. ಕೆಎಂಎಫ್ನಿಂದ ಟಿಟಿಡಿಗೆ ತುಪ್ಪ ಪೂರೈಕೆಯಾಗದಿರುವ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ರಾಜಕೀಯ ತಿರುವು ಪಡೆದುಕೊಂಡಿದ್ದು, ವಿವಿಧ ಮಾಧ್ಯಮಗಳಲ್ಲಿ ರಾಜಕೀಯ ಪಕ್ಷಗಳ ವಿಭಿನ್ನ ಹೇಳಿಕೆಗಳಿಗೆ ಅವಕಾಶ ಕಲ್ಪಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
“ತುಪ್ಪ ಪೂರೈಕೆಯಾಗದಿರುವ ಕಾರಣ ಮತ್ತು ಸ್ಪರ್ಧಾತ್ಮಕ ಬಿಡ್ಡಿಂಗ್ನಿಂದ ಟಿಟಿಡಿಯ ತುಪ್ಪ ಪೂರೈಕೆ ಟೆಂಡರ್ನಲ್ಲಿ ಭಾಗವಹಿಸಲು ಸಾಧ್ಯವಾಗದಿರುವ ಬಗ್ಗೆ ಕೆಎಂಎಫ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದೆ ಮತ್ತು ಟಿಟಿಡಿ ಕಡಿಮೆ ಗುಣಮಟ್ಟದ ತುಪ್ಪವನ್ನು ಖರೀದಿಸುತ್ತಿದೆ ಎಂದು ಕೆಎಂಎಫ್ ಯಾವತ್ತೂ ಹೇಳಿಲ್ಲ” ಎಂದು ಸ್ಪಷ್ಟಪಡಿಸಿದೆ.
