
Karnataka Lokayukta Raid: Survey Supervisor KT Srinivas Murthy arrested
ಬೆಂಗಳೂರು:
ಬೆಂಗಳೂರಿನ ಕೆ.ಆರ್.ಪುರ ತಾಲೂಕು ಕಚೇರಿ ಸರ್ವೆ ಸೂಪರ್ವೈಸರ್ ಕೆ.ಟಿ.ಶ್ರೀನಿವಾಸಮೂರ್ತಿ ಅವರನ್ನು ಲೋಕಾಯುಕ್ತ ಬಂಧಿಸಿದೆ. ಅಕ್ರಮ ಆಸ್ತಿಗಳಿಕೆ ಆರೋಪ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ನಿನ್ನೆ ಶ್ರೀನಿವಾಸಮೂರ್ತಿ ಅವರ ನಿವಾಸ, ಕಚೇರಿ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ಮನೆಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಶ್ರೀನಿವಾಸಮೂರ್ತಿ ಅವರನ್ನು ಲೋಕಾತಯುಕ್ತ ಬಂಧಿಸಿ ವಿಚಾರಣೆಗೊಳಪಡಿಸಿದೆ.
ಕೆ.ಟಿ ಶ್ರೀನಿವಾಸ್ ಮೂರ್ತಿಗೆ ಸಂಬಂಧಿಸಿದ 14 ಕಡೆ ಲೋಕಾ ರೇಡ್ ಮಾಡಿದ್ದು, ಬೆಂಗಳೂರು, ತುಮಕೂರು ಸೇರಿದಂತೆ ರಾಜ್ಯದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿದೆ. ದಾಳಿ ವೇಳೆ ಲೋಕಾಯುಕ್ತ ಮೂರು ಕೋಟಿಗೂ ಅಧಿಕ ಆಸ್ತಿ ಪಾಸ್ತಿ ಪತ್ತೆ ಹಚ್ಚಿದೆ. ಕೆ ಟಿ ಶ್ರೀನಿವಾಸಮೂರ್ತಿ ಅವರು ಕೆ ಆರ್ ಪುರ ತಾಲ್ಲೂಕು ಕಚೇರಿಯಲ್ಲಿ ಸರ್ವೇ ಸೂಪರ್ ವೈಸರ್ ಆಗಿದ್ದಾರೆ.
ಶ್ರೀನಿವಾಸ್ ಅವರನ್ನು ಇಂದು (ಆಗಸ್ಟ್ 23) ಸಂಜೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದು, ಆ ವೇಳೆ ತಮ್ಮ ವಶಕ್ಕೆ ಕೇಳಲಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಜೂನ್ ತಿಮಗಳಲ್ಲಿ ಇದೇ ಕೆಆರ್ ಪುರಂ ತಹಶೀಲ್ದಾರ್ ಆಗಿದ್ದ ಅಜಿತ್ ರೈ ಅವರ ಮೇಲೂ ಸಹ ಲೋಕಾಯುಕ್ತ ದಾಳಿಯಾಗಿತ್ತು. ಆ ವೇಳೆ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಜಿತ್ ರೈ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಅಜಿತ್ ರೈ ಜಾಮೀನಿನ ಮೇಲೆ ಆಚೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.