ಬೆಂಗಳೂರು : ಬಿಬಿಎಂಪಿ ಕಂದಾಯ ಕಚೇರಿ ಕಾರ್ಯ ವೈಖರಿ ಕುರಿತು ದೂರುಗಳ ಸುರಿಮಳೆ ಬೆನ್ನಲ್ಲೇ 54 ಬಿಬಿಎಂಪಿ ಕಚೇರಿಗಳ ಮೇಲೆ ಲೋಕಾಯುಕ್ತ ಏಕ ಕಾಲದಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ. ಶುಕ್ರವಾರ ಖುದ್ದು ಲೋಕಾಯುಕ್ತ ಬಿ.ಎಸ್.ಪಾಟೀಲ್ ಹಾಗೂ ಇಬ್ಬರು ಉಪಲೊಕಾಯುಕ್ತರು ದಾಳಿಯಲ್ಲಿ ಭಾಗಿಯಾಗಿ ಅಧಿಕಾರಿಗಳ ಬೆವಳಿಸಿದ್ದಾರೆ.
ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ RO ಮತ್ತು ARO ಕಚೇರಿಗಳಲ್ಲಿ ಪಾಲಿಕೆಗೆ ಸಂಬಂಧಿಸಿದ ಸ್ವತ್ತುಗಳಿಗೆ ಇ-ಖಾತಾ ನೀಡುತ್ತಿದ್ದು, ಸದರಿ ಇ-ಖಾತಾ ಪಡೆಯುವಲ್ಲಿ ಗ್ರಾಹಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದ ಬಗ್ಗೆ ಹಲವಾರು ದೂರುಗಳು ಬಂದ ಸಲುವಾಗಿ ಹಾಗೂ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಬಿಬಿಎಂಪಿರವರು ಅನಧೀಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಹಾಗೂ ನೆಪ ಮಾತ್ರಕ್ಕೆ ನೋಟೀಸ್ನ್ನು ನೀಡಿ ಅನಧೀಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವವರನ್ನು ತಡೆಯಲು ವಿಪಲಾಗಿರುವದರಿಂದ ಸಾರ್ವಜನಿಕರು ಆಗಿಂದ್ದಾಗ್ಗೆ ಲೋಕಾಯುಕ್ತ ಸಂಸ್ಥೆಯ ಗಮನ ಸೆಳೆಯುತ್ತಿದ್ದ ಮೇರೆಗೆ, ಈ ಹಿಂದೆ ಆಗಸ್ಟ್-2023 ರಂದು ಲೋಕಾಯುಕ್ತರ ಆದೇಶದಂತೆ ಬಿಬಿಎಂಪಿ ಯ 08 ವಲಯಗಳಿಗೆ ಸಂಬಂಧಿಸಿದಂತೆ 08 ಸ್ವಯಂ ಪ್ರೇರಿತ ದೂರುಗಳನ್ನು ನೊಂದಾಯಿಸಿ ತನಿಖೆ ಮುಂದುವರೆದಿರುತ್ತದೆ.

ಸದರಿ ಪ್ರಕರಣಗಳಲ್ಲಿ ಈ ದಿನ ಲೋಕಾಯುಕ್ತ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನ್ಯಾಯಾಂಗ ಹಾಗೂ ಪೊಲೀಸ್ ಅಧಿಕಾರಿಗಳ ತಂಡಗಳನ್ನು ಸನ್ನದುಗೊಳಿಸಿ, ಬೆಂಗಳೂರು ನಗರದಾದ್ಯಂತ ಇರುವ ಸುಮಾರು 54 ಬಿಬಿಎಂಪಿ ಕಚೇರಿಗಳಿಗೆ ಏಕ ಕಾಲದಲ್ಲಿ ದಿಡೀರ್ ದಾಳಿ ನಡೆಸಿ ಅಕ್ರಮಗಳನ್ನು ಪತ್ತೆ ಹಚ್ಚುವಂತೆ ಲೋಕಾಯುಕ್ತರು ಆದೇಶಿಸಿದ ಮೇರೆಗೆ ತಪಾಸಣೆ ನಡೆಸಲಾಯಿತು.
- ಲೋಕಾಯುಕ್ತರು ಖುದ್ದಾಗಿ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಎಆರ್ಓ ಕಚೇರಿ ಹೆಬ್ಬಾಳ ಸಬ್ ಡಿವಿಷನ್ ಮುನಿರೆಡ್ಡಿ ಪಾಳ್ಯ ಮುಖ್ಯ ರಸ್ತೆಯಲ್ಲಿರುವ ಕಚೇರಿಗೆ ಖುದ್ದು ಭೇಟಿ ನೀಡಿದ ಸಂದರ್ಭದಲ್ಲಿ ಕಚೇರಿಯಲ್ಲಿ ಯಾವುದೇ ವಹಿಗಳನ್ನು ಅಂದರೆ ಹಾಜರಾತಿ ವಹಿ, ನಗದು ಘೋಷಣಾ ವಹಿ, ಚಲನಾ-ವಲನಾ ವಹಿಗಳನ್ನು ಸರಿಯಾಗಿ ನಿರ್ವಹಣೆ ಮಾಡಿರುವುದಿಲ್ಲ.
- ಸಹಾಯಕ ಕಾರ್ಯಪಾಲಕ ಅಭಿಯಂತರರ ಹೆಬ್ಬಾಳ ಸಬ್ ಡಿವಿಷನ್ ಕಚೇರಿಯಲ್ಲಿ ಒಟ್ಟು 22 ಜನ ಸಿಬ್ಬಂದಿಗಳಿದ್ದು, ಅದರಲ್ಲಿ 21 ಜನ ಹಾಜರಾತಿ ವಹಿಗೆ ಸಹಿ ಮಾಡಿದ್ದು, ಕಚೇರಿಯಲ್ಲಿ ಕೇವಲ ಮೂರು ಜನ ಮಾತ್ರ ಇದ್ದರು.

- ಎಆರ್ಓ ಸಹ ಕಚೇರಿಯಲ್ಲಿ ಹಾಜರಿರಲಿಲ್ಲ. ಕರೆ ಮಾಡಿ ಕೇಳಿದಾಗ ಬೆಳಗ್ಗೆ ಕಚೇರಿಗೆ ಬಂದು ನಂತರ ಮುಖ್ಯ ಕಚೇರಿಗೆ ಹೋಗಿರುವುದಾಗಿ ತಿಳಿಸಿರುತ್ತಾರೆ. ಆದರೆ ಆ ಬಗ್ಗೆ ಚಲನಾ-ವಲನಾ ವಹಿಯಲ್ಲಿ ನಮೂದು ಮಾಡಿರುವುದಿಲ್ಲ.
- ಎಆರ್ಓ ರವರು ಬೆಳಗ್ಗೆ ಕಚೇರಿಗೆ ಬಂದು ಮಧ್ಯಾಹ್ನ ತನಕ ಕೆಲಸ ಮಾಡಿರುತ್ತೇನೆಂದು ಹೇಳಿರುತ್ತಾರೆ. ಆದರೆ ಹಾಜರಾತಿ ವಹಿಯಲ್ಲಿ ಅವರು ಸಹಿ ಮಾಡಿರುವುದಿಲ್ಲ.
- ಸದರಿ ಕಚೇರಿಯಲ್ಲಿ ನಗದು ವಹಿ ಮತ್ತು ಚಲನಾ-ವಲನಾ ವಹಿಗಳನ್ನು ಆಗಸ್ಟ್- 2023 ರ ನಂತರ ನಿರ್ವಹಣೆ ಮಾಡಿರುವುದಿಲ್ಲ. ಈ ಬಗ್ಗೆ ಹಾಜರಿದ್ದ ಸಿಬ್ಬಂದಿಗಳು ಯಾವುದೇ ಸಮರ್ಪಕ ಉತ್ತರ ನೀಡಿರುವುದಿಲ್ಲ.
- ಕಾರ್ಯಪಾಲಕ ಅಭಿಯಂತರರ ಕಛೇರಿಯಲ್ಲಿಯೂ ಸಹ ಬಹುತೇಕ ಅಧಿಕಾರಿ ಮತ್ತು ಸಿಬ್ಬಂದಿಗಳು ಗೈರುಹಾಜರಿರುವುದು ಕಂಡುಬಂದಿರುತ್ತದೆ.
- ಕಾರ್ಯಪಾಲಕ ಅಭಿಯಂತರರು ಬಿಬಿಎಂಪಿ ಕೆಆರ್ ಪುರಂ ಡಿವಿಷನ್ನಲ್ಲಿ ತಪಾಸಣೆ ಸಮಯದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರ ಬಳಿ ಸುಮಾರು ರೂ. 50,000/- ನಗದು ಹಾಗೂ ಸಹಾಯಕ ಅಭಿಯಂತರರ ಬಳಿ ರೂ. 43.000/- ನಗದು ಪತ್ತೆಯಾಗಿರುತ್ತದೆ. ಈ ಸಂಬಂಧ ಅವರು ನಗದು ಘೋಷಣಾ ವಹಿಯಲ್ಲಿ ತಮ್ಮ ಬಳಿ ಇರುವ ಹಣದ ಬಗ್ಗೆ ನಮೂದು ಮಾಡಿರುವುದಿಲ್ಲ ಹಾಗೂ ಸದರಿ ನಗದಿನ ಬಗ್ಗೆ ಸಮಂಜಸ ಉತ್ತರ ನೀಡಿರುವುದಿಲ್ಲ. ಸದರಿ ನಗದನ್ನು ಮಹಜರ್ ಮಾಡಿ ವಶಪಡಿಸಿಕೊಳ್ಳಲಾಗಿದೆ.
- ಮೇಲ್ಕಂಡ ಎಲ್ಲಾ ಕಚೇರಿಗಳಲ್ಲಿ ಇನ್ನೂ ಹಲವಾರು ಲೋಪದೋಷಗಳು ಕಂಡುಬಂದಿದ್ದು, ಎಲ್ಲಾ ಲೋಪದೋಷಗಳನ್ನು ಸರಿಪಡಿಸಿ. ಲೋಕಾಯುಕ್ತ ಕಚೇರಿಗೆ ಸಂಬಂಧಿಸಿದ ಅಧಿಕಾರಿಗಳು ಖುದ್ದಾಗಿ ಹಾಜರಾಗಿ ವರದಿ ನೀಡಲು ಲೋಕಾಯುಕ್ತರು ಸೂಚಿಸಿರುತ್ತಾರೆ.
- ಇದೇ ಸಂದರ್ಭದಲ್ಲಿ ಉಪಾಲೋಕಾಯುಕ್ತರವರಾದ ನ್ಯಾಯಮೂರ್ತಿ ಶ್ರೀ ಕೆ.ಎನ್. ಫಣೀಂದ್ರ ರವರು ಎಆರ್ಓ ಕಚೇರಿ ಚಾಮರಾಜ ಪೇಟೆ ವಸಂತನಗರ ಸಬ್ಡಿವಿಷನ್ ಹಾಗೂ ಕಾರ್ಯಪಾಲಕ ಅಭಿಯಂತರರು ಶಿವಾಜಿ ನಗರ ಡಿವಿಷನ್ ಬಿಬಿಎಂಪಿ ಕಚೇರಿಗಳಲ್ಲಿ ತಪಾಸಣಾ ಕಾರ್ಯ ಕೈಗೊಂಡಿರುತ್ತಾರೆ ಹಾಗೂ ಗೌರವಾನ್ವಿತ ಉಪಾಲೋಕಾಯುಕ್ತರವರಾದ ನ್ಯಾಯಮೂರ್ತಿ ಶ್ರೀ ಬಿ. ವೀರಪ್ಪ ರವರು ಕಾರ್ಯಪಾಲಕ ಇಂಜಿನಿಯರ್ ಚಿಕ್ಕಪೇಟ್ ಜಯನಗರ ಡಿವಿಷನ್ ಮತ್ತು ಎಆರ್ಓ ಕಚೇರಿ ಸೌತ್ ಎಂಡ್ ಸರ್ಕಲ್ ಬಿಬಿಎಂಪಿ ಕಚೇರಿಗಳಲ್ಲಿ ತಪಾಸಣೆ ಕೈಗೊಂಡಿರುತ್ತಾರೆ.
ತಪಾಸಣೆ ಇನ್ನೂ ನಡೆಯುತ್ತಿದ್ದು ಹಲವು ಕಚೇರಿಗಳಲ್ಲಿ ತಡರಾತ್ರಿವರೆಗೆ ಮುಂದುವರೆದಿರುತ್ತದೆ.