
Representational Image
ಬೆಳಗಾವಿ:
ಬೆಳಗಾವಿ ಜಿಲ್ಲೆಯ ಈದ್ಗಾ ಮೈದಾನದಲ್ಲಿ ಶನಿವಾರ ಮುಸ್ಲಿಂ ಬಾಂಧವರು ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ನಡೆಸಿದರು.
ಮುಸ್ಲಿಂ ಧರ್ಮಗುರು ಮುಫ್ತಿ ಅಬ್ದುಲ್ ಅಜೀಜ್ ಖಾಜಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಏರ್ಪಡಿಸಲಾಗಿತ್ತು. ಪ್ರಾರ್ಥನೆ ವೇಳೆ ಹಲವರು ಕಣ್ಣೀರು ಹಾಕಿದ್ದು ಕಂಡು ಬಂದಿತು.


ಶಾಸಕ ಆಸೀಫ್ ಸೇಠ್ ಅವರು ಮಾತನಾಡಿ, ‘ಸಾಮಾನ್ಯವಾಗಿ ಮೇ ತಿಂಗಳಲ್ಲಿ ಮುಂಗಾರು ಆರಂಭವಾಗುತ್ತದೆ, ಆದರೆ, ಈ ಬಾರಿ ಜೂನ್ ಕೊನೆಯ ವಾರಕ್ಕೆ ಕಾಲಿಟ್ಟರೂ ಮಳೆಯಾಗುತ್ತಿಲ್ಲ. ನಗರಕ್ಕೆ ಕುಡಿಯುವ ನೀರು ಪೂರೈಸುವ ರಾಕಸಕೊಪ್ಪ ಮತ್ತು ಹಿಡಕಲ್ ಜಲಾಶಯಗಳು ಬಹುತೇಕ ಖಾಲಿಯಾಗಿವೆ. ಹೀಗಾಗಿ ಮಳೆಗಾಗಿ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುತ್ತಿದ್ದೇವೆ. ಇಂದು ಮಳೆಯಾಗದಿದ್ದರೆ, ಮುಂದಿನ ಮೂರು ದಿನಗಳವರೆಗೆ ಪ್ರಾರ್ಥನೆ ಮುಂದುವರಿಯುತ್ತದೆ ಎಂದು ಹೇಳಿದರು.