Mekedatu, Mahadai projects to be implemented on priority: D K Shivakumar
ಬೆಂಗಳೂರು:
ಮೇಕೆದಾಟು ಮತ್ತು ಮಹದಾಯಿ ಯೋಜನೆಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಂಡು ಪೂರ್ವಸಿದ್ಧತಾ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದರು.
ಜಲಸಂಪನ್ಮೂಲ ಸಚಿವರಾದ ಬಳಿಕ ನೀರಾವರಿ ಅಧಿಕಾರಿಗಳೊಂದಿಗೆ ಮಂಗಳವಾರ ಮೊದಲ ಸಭೆ ನಡೆಸಿದ ಅವರು, ರಾಜ್ಯದಲ್ಲಿನ ನೀರಾವರಿಗೆ ಸಂಬಂಧಿಸಿ ಯೋಜನೆಗಳ ಕುರಿತು ಚರ್ಚೆ ನಡೆಸಿದರು.
ವಿಕಾಸಸೌಧದಲ್ಲಿ ಇಂದು ಜಲ ಸಂಪನ್ಮೂಲ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ರಾಜ್ಯದಲ್ಲಿ ಬಾಕಿ ಉಳಿದಿರುವ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆರ್ಥಿಕ ಕ್ರೋಢೀಕರಣ ಮಾಡಿ ಆದಷ್ಟು ಬೇಗನೆ ಮುಗಿಸುವಂತೆ ಸೂಚಿಸಲಾಯಿತು.
— DK Shivakumar (@DKShivakumar) May 30, 2023
ಈ ಹಿಂದೆ ನಡೆದಿರುವ ಕಾಮಗಾರಿಗಳಲ್ಲಿ ನಡೆದಿರಬಹುದಾದ ಭ್ರಷ್ಟಾಚಾರ, ಲೋಪದೋಷಗಳನ್ನು ಪತ್ತೆ ಮಾಡಲು ಪ್ರತ್ಯೇಕ… pic.twitter.com/YIiH0wCrT7
ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ನೀಡಿದ ಸಲಹೆ ಸೂಚನೆಗಳು
- ಕೇಂದ್ರದಿಂದ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಅನುಮತಿ ತರುವುದೇ ನಾನು ನಿಮಗೆ ನೀಡುತ್ತಿರುವ ಗುರಿ.
- ಮೇಕೆದಾಟು, ಮಹದಾಯಿ ಯೋಜನೆಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಬೇಕು. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ.
- ಜಲವಿವಾದ ಪರಿಹಾರ, ಬಾಕಿ ಯೋಜನೆಗಳ ಪೂರ್ಣ, ನೀರಾವರಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಣ, ಕೇಂದ್ರದಿಂದ ಅನುದಾನ ತರುವುದು, ಉದ್ಯೋಗ ಸೃಷ್ಟಿಗೆ ಒತ್ತು ಕೊಡಬೇಕು.
- ನೀರಾವರಿ ಯೋಜನೆಗಳಿಗೆ 5 ವರ್ಷದಲ್ಲಿ 2 ಲಕ್ಷ ಕೋಟಿ ರು ವಿನಿಯೋಗಿಸುತ್ತೇವೆ ಎಂದು ಮಾತು ಕೊಟ್ಟಿದ್ದೇವೆ.
- ಸರಕಾರ, ಸಂಸ್ಥೆಗಳು, ಕೇಂದ್ರದ ಅನುದಾನದ ಮೂಲಕ ಸಂಪನ್ಮೂಲ ಒಟ್ಟುಗೂಡಿಸಬೇಕು.
- ಕೇಂದ್ರ ಸಚಿವ ಶೇಖಾವತ್ ಉತ್ತಮ ವ್ಯಕ್ತಿ. ರಾಜ್ಯದ ಕೆಲಸಗಳಿಗೆ ಅವರ ಸಹಕಾರ ಪಡೆಯೋಣ.
- ಬಾಕಿ ಯೋಜನೆಗಳಿಗೆ ಭೂಸ್ವಾಧೀನ ತ್ವರಿತಗತಿಯಲ್ಲಿ
ಮಾಡಿ. - ಗುಣಮಟ್ಟದಲ್ಲಿ ರಾಜಿ ಇಲ್ಲ.
- ಮೇಕೆದಾಟು ಯೋಜನೆಗೆ ಮೀಸಲಿಟ್ಟ 1000 ಕೋಟಿ ರೂಪಾಯಿ ಅನುದಾನವನ್ನು ಭೂಸ್ವಾಧೀನದಂತಹ ಪೂರ್ವಸಿದ್ಧತೆ ಕೆಲಸಗಳಿಗೆ ಬಹುದಿತ್ತು. ಮಾಡಿಲ್ಲ ಏಕೆ? ಹಾಗಾದರೆ ಹಣ ಇಟ್ಟಿದ್ದಾದರೂ ಏಕೆ?
- ಬರೀ ಎಲ್ಒಸಿ, ಟೆಂಡರ್, ಗುತ್ತಿಗೆ ಹಂಚಿಕೆ, ಬಿಲ್ ಮಾಡೋ ಕೆಲಸಕ್ಕೆ ನಿಮ್ಮ ಶ್ರಮ ವಿನಿಯೋಗ ಆಗಬಾರದು.
- ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ. ನಿಷ್ಠೆ, ಪ್ರಾಮಾಣಿಕತೆಗೆ ಮಾತ್ರ ಪ್ರೋತ್ಸಾಹ.
- ಜಾತಿಯತೆ ಬೇಡ. ಮಾನವೀಯತೆ ಇರಲಿ.
- ನನಗೆ ಯಾವುದೇ ದ್ವೇಷ ಇಲ್ಲ. ಕೆಲಸ ಆಗಬೇಕು ಅಷ್ಟೇ.
- ನೀವು ಸರಕಾರಕ್ಕೆ ನಿಷ್ಠಾರಾಗಿರಬೇಕೆ ಹೊರತು ನಿಮಗೆ ಪೋಸ್ಟಿಂಗ್ ಕೊಟ್ಟವರಿಗಲ್ಲ. ಅಂತವರನ್ನು ಸಹಿಸೋದಿಲ್ಲ.
- ನನಗೂ 33 ವರ್ಷ ಅನುಭವ ಇದೆ. ನಿಮ್ಮ ಕೈಯಲ್ಲಿ ಮಾಡಬಾರದ್ದು ಮಾಡಿಸಲ್ಲ. ದಾರಿ ತಪ್ಪಬೇಡಿ. ಎಚ್ಚರಿಕೆಯಿಂದ ಕೆಲಸ ಮಾಡಿ. ಬದಲಾವಣೆ ತನ್ನಿ.
- ಡೆಲ್ಲಿಯಿಂದ ಯೋಜನೆಗಳನ್ನು ತರಬೇಕು.
- ನೆರೆಯ ತಮಿಳುನಾಡು, ಆಂಧ್ರ, ಮಹಾರಾಷ್ಟ್ರಕ್ಕೆ ಎಷ್ಟು ಯೋಜನೆಗಳು ಬಂದಿವೆ, ನಮ್ಮ ರಾಜ್ಯಕ್ಕೆ ಎಷ್ಟು ಬಂದಿವೆ ಎಂದು ನೀವೇ ಹೋಲಿಕೆ ಮಾಡಿಕೊಳ್ಳಿ. ನೀವು ಎಷ್ಟು ಚೆನ್ನಾಗಿ ಕೆಲಸ ಮಾಡಿದ್ದೀರಿ ಎಂದು ಗೊತ್ತಾಗುತ್ತದೆ. ಕರ್ನಾಟಕಕ್ಕೆ ಬಹಳ ಅನ್ಯಾಯವಾಗಿದೆ.
- ನಾವು ಕರ್ನಾಟಕದ ಎಂಪಿಗಳ ಜತೆ ಸಭೆ ಮಾಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋಣ.
- ಪ್ರಧಾನಿಗಳು, ಕೇಂದ್ರದ ಜಲ ಸಂಪನ್ಮೂಲ ಸಚಿವರು ಸೇರಿದಂತೆ ಅಗತ್ಯ ಇರುವ ಎಲ್ಲರನ್ನೂ ಭೇಟಿ ಮಾಡೋಣ.
- ಕೇಂದ್ರದಿಂದ ಯೋಜನೆಗಳನ್ನು ತರುವ ಗುರಿಯನ್ನು ನಿಮಗೆ ನೀಡುತಿದ್ದೇನೆ. ಕೇಂದ್ರಕ್ಕೆ ಮನವರಿಕೆ ಮಾಡಿ, ಯೋಜನೆ ತರುವುದೇ ನಿಮ್ಮ ಕೆಲಸ.
- ಕೆಲಸ ಮಾಡಿದರೆ ನೀವು ಇಲ್ಲಿರುತ್ತೀರಿ. ಇಲ್ಲದಿದ್ದರೆ ನಿಮ್ಮ ಜಾಗದಲ್ಲಿ ಬೇರೆಯವರು ಇರುತ್ತಾರೆ.
- ನಾನು ಇಲಾಖೆ ವಹಿಸಿಕೊಂಡ ಏನೇನು ಕೆಲಸ ಮಾಡಿದ್ದೀರಿ ಎಂಬ ಬಗ್ಗೆ ಕಾಲ ಕಾಲಕ್ಕೆ ವರದಿ ಕೊಡಬೇಕು.
- ಯಾವ, ಯಾವ ಯೋಜನೆಗಳು ಯಾವ ಹಂತದಲ್ಲಿವೆ ಎಂಬ ಬಗ್ಗೆ ವಿಡಿಯೋ, ಫೋಟೋ ದಾಖಲೆ ಒದಗಿಸಬೇಕು.
- ಯೋಜನೆಗಳು ಕುಂಠಿತಗೊಳ್ಳಲು ಕಾರಣಗಳನ್ನು ಸಾಕ್ಷಿ ಸಮೇತ ನೀಡಬೇಕು. ಕತೆ, ಕಟ್ಟು ಕತೆ ಕೇಳುವುದಿಲ್ಲ.
- ನಾನು ಈ ಖಾತೆಯಿಂದ ಇಳಿದ ನಂತರ ಕಣ್ಣಿಗೆ ಕಾಣುವ ಯಾವುದೇ ಕೆಲಸ ಆಗಿಲ್ಲ. ಮೂರು ವರ್ಷದ ಹಿಂದೆ ಇದ್ದಂತೆಯೇ ಇದೆ.
- ನಾನು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೆನೆ ಎನ್ನುವುದಕ್ಕಿಂತ ಎಷ್ಟು ಕೆಲಸ ಮಾಡಿದೆ ಎಂಬುದೇ ಮುಖ್ಯವಾಗಬೇಕು.
- ನೀವು ಯಾವುದೇ ಯೋಜನೆ ಮಾಡಿದರೂ ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ.
- ಪ್ರತಿ ಹನಿ ನೀರು ರೈತರ, ಜನರ ಹಿತಕ್ಕೆ ಬಳಕೆ ಆಗಬೇಕು. ಪೋಲಾಗಬಾರದು.
- ಎಲ್ಲೆಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬಹುದು ಎಂಬುದರ ಬಗ್ಗೆ ತ್ವರಿತಗತಿಯಲ್ಲಿ ನೀಲನಕ್ಷೆ ತಯಾರು ಮಾಡಿ.
- ಕೆಆರ್ ಎಸ್, ಮಂಚನಬೆಲೆ, ತಿಪ್ಪಗೊಂಡನಹಳ್ಳಿ, ಹೇಮಾವತಿ ಜಲಾಶಯ ಸೇರಿದಂತೆ ಈಗಾಗಲೇ ಸಿದ್ದವಾಗಿರುವ ಉದ್ಯಾನವನ, ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ತುರ್ತು ಕ್ರಮ ತೆಗೆದುಕೊಳ್ಳಿ.
