Home ಬೆಂಗಳೂರು ನಗರ Field Marshal KM Cariappa Metro Station| ಮೆಟ್ರೋ ನಿಲ್ದಾಣಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹೆಸರು...

Field Marshal KM Cariappa Metro Station| ಮೆಟ್ರೋ ನಿಲ್ದಾಣಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹೆಸರು ನಾಮಕರಣ; ಚರ್ಚಿಸಿ ತೀರ್ಮಾನ: ಡಿಸಿಎಂ ಡಿ.ಕೆ.ಶಿವಕುಮಾರ್

16
0
Metro station to be named after Field Marshal KM Cariappa; Decision to be made after discussion: DCM DK Shivakumar

ಕೊಡಗು ಹಾಗೂ ಕೊಡವರು ದೇಶಕ್ಕೆ ಆಭರಣವಿದ್ದಂತೆ

ಬೆಂಗಳೂರು, ಜೂ.15 “ಮೆಟ್ರೋ ನಿಲ್ದಾಣಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹೆಸರಿಡುವ ಬಗ್ಗೆ ನಾನು ಹಾಗೂ ಮುಖ್ಯಮಂತ್ರಿಗಳು ಚರ್ಚೆ ಮಾಡಿ ತೀರ್ಮಾನಿಸುತ್ತೇವೆ. ಕಾರ್ಯಪ್ಪ ಅವರ ಹೆಸರಿಡುವುದು ನಮ್ಮ ಭಾಗ್ಯ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ಏಳು ಎಕರೆ ಭೂಮಿ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಕೊಡವ ಸಮಾಜದವರು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ದೇಶಿಸಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ಈ ವಿಚಾರವಾಗಿ ನಾವು ಮುಕ್ತ ಮನಸ್ಸು ಹೊಂದಿದ್ದೇವೆ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಹಾಗೂ ಈ ಡಿ.ಕೆ. ಶಿವಕುಮಾರ್ ಸೇರಿ ಕಾರ್ಯಪ್ಪ ಅವರ ಹೆಸರನ್ನು ಉಳಿಸುವ ಕೆಲಸ ಮಾಡುತ್ತೇವೆ” ಎಂದು ಭರವಸೆ ನೀಡಿದರು.

“ಮನುಷ್ಯನಿಗೆ ಮುತ್ತುರತ್ನ ಶೋಭೆ ತರುವಂತೆ ಇಡೀ ದೇಶಕ್ಕೆ ಕೊಡಗು ಹಾಗೂ ಕೊಡವರು ಆಭರಣವಿದ್ದಂತೆ. ಇತಿಹಾಸ ನೋಡಿದಾಗ ನಿಮಗೆ ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸಿದ್ದೀರಿ. ರಾಜಕೀಯ ಮಾತ್ರವಲ್ಲ ಕ್ರೀಡೆ, ಕಾನೂನು ವ್ಯವಸ್ಥೆ, ಸೇನೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕೊಡವರ ಕೊಡುಗೆ ಅಪಾರ. ದೇಶದ ಸ್ವಾತಂತ್ರ್ಯ ಹೋರಾಟಕ್ಕೂ ನಿಮ್ಮ ಕೊಡುಗೆ ಇದೆ” ಎಂದು ಬಣ್ಣಿಸಿದರು.

“ಸಂಸ್ಕೃತಿ ಹಾಗೂ ಪರಂಪರೆಗಳನ್ನು ನಾವು ಹಾಳು ಮಾಡಿಕೊಳ್ಳಬಾರದು ಎಂಬುದು ನಮ್ಮ ಬಯಕೆ. ಕೊಡವ ಸಮಾಜಕ್ಕೆ ನೀಡಲಾಗಿರುವ 7 ಎಕರೆ ಜಮೀನಿಗೆ 30-40 ಕೋಟಿ ಕಡಿಮೆ ಮಾಡಿರುವುದು ದೊಡ್ಡ ವಿಚಾರವಲ್ಲ. ಇದಕ್ಕಿಂತ ನಿಮ್ಮ ತ್ಯಾಗ, ಪರಿಶ್ರಮ, ಶಿಸ್ತು ದೊಡ್ಡದು” ಎಂದು ತಿಳಿಸಿದರು.

“ಸರ್ವರಿಗೂ ಸಮಪಾಲು, ಸಮಬಾಳು ತತ್ವದ ಮೇಲೆ ನಮ್ಮ ಸರ್ಕಾರ ಅನೇಕ ಕಾರ್ಯಕ್ರಮ ರೂಪಿಸುತ್ತಿದೆ. ದುರ್ಬಲ ಸಮಾಜ, ಶೋಷಿತ ಸಮಾಜ, ಹಿಂದುಳಿದವರಿಗೆ ಸಹಾಯ ಮಾಡಲು ಕಾಂಗ್ರೆಸ್ ಬದ್ಧವಾಗಿದೆ” ಎಂದು ತಿಳಿಸಿದರು.

“ಕಾಂಗ್ರೆಸ್ ಸರ್ಕಾರಗಳು ಈ ಹಿಂದಿನಿಂದಲೂ ಹೃದಯ ಶ್ರೀಮಂತಿಕೆಯಿಂದ ಸಣ್ಣ ಸಮಾಜಗಳಿಗೆ ಸಹಾಯ ಮಾಡಿಕೊಂಡು ಬಂದಿವೆ. ನಮ್ಮ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ನಿಮಗೆ ಈ ಭೂಮಿ ನೀಡಲು ತೀರ್ಮಾನಿಸಿದೆ” ಎಂದರು.

ನಮಗೆ ಬೆಂಬಲ ನೀಡಿ ಕೈ ಬಲಪಡಿಸಿ “ನಮ್ಮ ಸರ್ಕಾರ ನಿಮಗೆ ಅನೇಕ ಕಾರ್ಯಕ್ರಮ ಕೊಟ್ಟಿದೆ. ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದವರಿಗೆ ಭೂಮಿ ಕೊಟ್ಟಿದೆ. ಕೊಡವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದ್ದೇವೆ, ಮೂರ್ನಾಲ್ಕು ನಾಯಕರನ್ನು ಶಾಸಕರನ್ನಾಗಿ ಮಾಡಿದ್ದೇವೆ. ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದೇವೆ. ರಾಜಕೀಯದಲ್ಲಿ ನಿಮ್ಮ ಧ್ವನಿ ಇರಬೇಕು ಎಂದು ಹಲವು ತೀರ್ಮಾನ ಮಾಡಿದ್ದೇವೆ. ಈ ಇತಿಹಾಸವನ್ನು ಅರಿತು ನೀವು ನಮ್ಮ ಪರವಾಗಿ ನಿಲ್ಲಬೇಕು” ಎಂದು ಮನವಿ ಮಾಡಿದರು.

“ದೇವರು ನಮಗೆ ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಅದೇರೀತಿ ನಮಗೆ ಈಗ ಸಿಕ್ಕಿರುವ ಅವಕಾಶದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ನಿಮಗೆ ಅಗತ್ಯ ನೆರವು ನೀಡುತ್ತಿದೆ. ನಾವು ನಿಮ್ಮ ಜತೆ ಇದ್ದೇವೆ, ನೀವು ನಮ್ಮ ಜತೆ ನಿಂತು ನಮ್ಮ ಕೈಗೆ ಶಕ್ತಿ ತುಂಬಬೇಕು ಎಂದು ಪಕ್ಷದ ಅಧ್ಯಕ್ಷನಾಗಿ ಮನವಿ ಮಾಡುತ್ತೇನೆ. ಪೊನ್ನಣ್ಣ ಹಾಗೂ ಮಂಥರ್ ಗೌಡ ಅವರನ್ನು ಶಾಸಕರಾಗಿ ಆಯ್ಕೆ ಮಾಡಿದ್ದೀರಿ. ಮುಂದೆಯೂ ನೀವು ಇವರನ್ನು ವಿಧಾನಸೌಧಕ್ಕೆ ಆರಿಸಬೇಕು” ಎಂದು ಹೇಳಿದರು.

LEAVE A REPLY

Please enter your comment!
Please enter your name here