ಬೆಂಗಳೂರು, ಮಾರ್ಚ್ 19, (ಕರ್ನಾಟಕ ವಾರ್ತೆ) : ಹೊಸಕೋಟೆ ತಾಲ್ಲೂಕಿನ ಸರ್ವೆ ನಂ 73 ರಲ್ಲಿರುವ ಚೆನ್ನರಾಯಸ್ವಾಮಿ ದೇವಸ್ಥಾನದ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್) ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚೆನ್ನರಾಯ ಸ್ವಾಮಿ ದೇವಸ್ಥಾನವನ್ನು 2012ರಿಂದ ಮುಚ್ಚಲಾಗಿದೆ. ಇದು ಟ್ರಸ್ಟ್ ಮೂಲಕ ನಿರ್ವಹಿಸಲಾಗುತ್ತಿದೆಯೇ ಇಲ್ಲವೇ ಎಂಬುದರ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖಾ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ಸಂಸ್ಥೆಗಳಲ್ಲಿ ಭಕ್ತರು ನೀಡಿರುವ ಕಾಣಿಕೆ, ಹರಕೆ ಸೇವೆ ಇತ್ಯಾದಿಗಳ ಮೂಲಕ ಬರುವ ಆದಾಯವನ್ನು ಆಯಾಯ ದೇವಾಲಯಗಳ ನಿಧಿಗೆ (ಬ್ಯಾಂಕ್ ಖಾತೆ) ಜಮಾ ಮಾಡಲಾಗುತ್ತದೆ.ದೇವಾಲಯಕ್ಕೆ ಬರುವ ಯಾವುದೇ ಆದಾಯವನ್ನು ಸರ್ಕಾರದ ಬೊಕ್ಕಸಕ್ಕೆ ಸಂದಾಯ ಮಾಡುವುದಿಲ್ಲ.
ಧಾರ್ಮಿಕ ಸಂಸ್ಥೆಗಳಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997 ರ ಕಾಯ್ದೆ ಕಲಂ 25 ರನ್ನಯ ಸ್ಥಳೀಯರನ್ನೊಳಗೊಂಡಂತೆ 09 ಜನ ಸದಸ್ಯರ ವ್ಯವಸ್ಥಾಪನಾ ಸಮಿತಿ ರಚಿಸಲಾಗುತ್ತದೆ. ಸದರಿ ಸಮಿತಿಯು ದೇವಾಲಯದ ವಾರ್ಷಿಕ ಆಯವ್ಯಯ ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವುದು ಇತ್ಯಾದಿಗಳ ಕುರಿತಂತೆ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತದೆ. ಅದರಂತೆ,ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ರ ಕಾಯ್ದೆ ಕಲಂ 35 (1) ರಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಂಡ ಆಯವ್ಯಯದನ್ವಯ ಬಳಸಲಾಗುತ್ತಿದೆ. ಉಳಿಕೆ ಮೊತ್ತವನ್ನು ದೇವಾಲಯಗಳ ನಿಶ್ಚಿತ ಠೇವಣಿ ಖಾತೆ ಹಾಗೂ ಉಳಿತಾಯ ಖಾತೆಯಲ್ಲಿ ನಿರ್ವಹಿಸಲಾಗುತ್ತಿದೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳು 2002 ನಿಯಮ 30 ಮತ್ತು 31ರನ್ವಯ ದೇವಸ್ಥಾನದ ಪಕ್ಕದಲ್ಲಿ (ಜಾತ್ರೆ ಮತ್ತು ಉತ್ಸವಗಳಿಗೆ ತೊಂದರೆಯಾಗದಂತೆ) ಇರುವ ಸ್ಥಿರ ಸ್ವತ್ತುಗಳನ್ನು ಬಹಿರಂಗ ಹರಾಜಿನ ಮೂಲಕ ಗುತ್ತಿಗೆ ನೀಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಅದರಂತೆ ದೇವಾಲಯಗಳಿಗೆ ಸೇರಿದ ನಿವೇಶನಗಳನ್ನು ಗುತ್ತಿಗೆಗೆ ಪಡೆದು ಸಾರ್ವಜನಿಕ ಉದ್ದೇಶಕ್ಕಾಗಿ ಶಾಲೆ, ಕಾಲೇಜು, ಕಲ್ಯಾಣ ಮಂಟಪ ಹಾಗೂ ಆಸ್ಪತ್ರೆಗಳನ್ನು ನಿರ್ಮಿಸಿ ಖಾಸಗಿ ಸಂಸ್ಥೆಯವರು ಕಾಲ ಕಾಲಕ್ಕೆ ಬಾಡಿಗೆಯ ರೂಪದಲ್ಲಿ ನೀಡುತ್ತಿರುವ ಹಣದಿಂದ ದೇವಾಲಯಕ್ಕೆ ಹೆಚ್ಚಿನ ಆದಾಯ ಬರುತ್ತಿರುತ್ತದೆ.
ಈ ನಿಟ್ಟಿನಲ್ಲಿ ಪ್ರಸಕ್ತ ಯಾವುದೇ ಯೋಜನೆಗಳನ್ನು ರೂಪಿಸಿರುವುದಿಲ್ಲ. ಆದರೆ, ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಾಲಯಗಳ ಪೈಕಿ ಬಹುತೇಕ ದೇವಾಲಯಗಳು ಗ್ರಾಮ ಪಂಚಾಯಿತಿ /ಪುರಸಭೆ/ ನಗರಸಭೆ/ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇದ್ದು, ಈ ದೇವಾಲಯಗಳಿಗೆ ಸೇರಿದ ಆಯಕಟ್ಟಿನಲ್ಲಿರುವ ಖಾಲಿ ಜಾಗಗಳನ್ನು ಗುರುತಿಸಿ, ದೇವಾಲಯದ ಆರ್ಥಿಕ ಸ್ಥಿತಿಗತಿಯನ್ನು ಗಣನೆಗೆ ತೆಗೆದುಕೊಂಡು ದೇವಾಲಯಕ್ಕೆ ಹೆಚ್ಚಿನ ಆದಾಯ ಬರುವ ನಿಟ್ಟಿನಲ್ಲಿ ಕಲ್ಯಾಣ ಮಂಟಪ/ಚಾರ್ಜಿಂಗ್ ಸ್ಟೇಷನ್ /ಪೆಟ್ರೋಲ್ ಬಂಕ್ ನಿರ್ಮಾಣ/ ಅಂಗಡಿ ಮಳಿಗೆಗಳ ನಿರ್ಮಾಣ/ವಾಣಿಜ್ಯ ಸಂಕೀರ್ಣ ನಿರ್ಮಾಣ ಇವೇ ಮೊದಲಾದ ಹೆಚ್ಚಿನ ಆದಾಯ ತರುವ ಕಾಮಗಾರಿಯನ್ನು ನಿಯಮಾನುಸಾರ ಪರಿಶೀಲಿಸಿ ಕೈಗೊಳ್ಳುವ ಸಲುವಾಗಿ ದೇವಾಲಯಗಳಿಗೆ ಸೇರಿದ ಖಾಲಿ ಜಾಗಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ಸಚಿವರು ತಿಳಿಸಿದರು.