
ಬೆಂಗಳೂರು:
ಬೆಂಗಳೂರಿನ ಜನರ ಬಹುದಿನಗಳ ಬೇಡಿಕೆಯಾಗಿರುವ ಆರ್ ವಿ ರೋಡ್ & ಬೊಮ್ಮಸಂದ್ರ ನಡುವಿನ 18.8 ಕಿಮೀ ಗಳ ಮೆಟ್ರೋ ಹಳದಿ ಮಾರ್ಗದ ಪರಿಶೀಲನೆಯನ್ನು ಬುಧವಾರ ನಡೆಸಿರುವ ಸಂಸದ ತೇಜಸ್ವಿ ಸೂರ್ಯ ರವರು, ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಈ ಮಾರ್ಗವನ್ನು ಸಾರ್ವಜನಿಕ ಸೇವೆಗೆ ಒದಗಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪರಿಶೀಲನೆ ನಂತರ ಮಾತನಾಡಿದ ತೇಜಸ್ವೀ ಸೂರ್ಯ ರವರು “ 2014 ರಲ್ಲಿ ಕೇವಲ 7ಕಿಮೀ ಮಾತ್ರವಿದ್ದ ಮೆಟ್ರೋ ಸಂಪರ್ಕವು ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಹಕಾರದಿಂದ ಪ್ರಸ್ತುತ 78ಕಿಮೀ ಪೂರ್ಣಗೊಂಡಿದ್ದು, ಈ ವರ್ಷಾಂತ್ಯದ ವೇಳೆಗೆ 100 ಕಿಮೀ ಪೂರ್ಣಗೊಳ್ಳಲಿದೆ. 2024 ಮುಗಿಯುವದರೊಳಗಾಗಿ 140 ಕಿಮೀ ವ್ಯಾಪ್ತಿ ಹೊಂದಲಿದ್ದು, ಇದರಿಂದ ಬೆಂಗಳೂರಿಗರ ಬಹುದಿನಗಳ ಬೇಡಿಕೆ ಈಡೇರಲಿದೆ.ಕೋವಿಡ್ ಸಮಸ್ಯೆ,ಬಿಬಿಎಂಪಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿನ ಅನಗತ್ಯ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದ್ದು, 2024 ಫೆಬ್ರುವರಿ ಒಳಗಾಗಿ ಸಾರ್ವಜಿನಿಕ ಸಂಚಾರಕ್ಕೆ ಮುಕ್ತವಾಗಲಿದೆ.
ಸಿಲ್ಕ್ ಬೋರ್ಡ್ , ಬಿಟಿಎಂ ಮುಖಾಂತರ ನಗರದ ಐಟಿ ಬಿಟಿ , ಕೈಗಾರಿಕಾ ಕಾರಿಡಾರ್ ಗಳಿಗೆ ಸಂಪರ್ಕ ಕಲ್ಪಿಸುವ ಈ ಹಳದಿ ಮಾರ್ಗವು 16 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದ್ದು ಇವುಗಳ ಶೇ.95 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವಂತೆ ಸರ್ಕಾರವನ್ನು ಕೋರುತ್ತೇನೆ “ ಎಂದು ತಿಳಿಸಿದರು.
ಪ್ರತಿನಿತ್ಯ ಈ ಮಾರ್ಗದಲ್ಲಿ 2.5 ಲಕ್ಷ ಜನರು ಪ್ರಯಾಣಿಸಲಿದ್ದು, ಇಲೆಕ್ಟ್ರಾನಿಕ್ ಸಿಟಿ , ಸಿಲ್ಕ್ ಬೋರ್ಡ್ ಬಳಿಯ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.
ಈ ಮಾರ್ಗದ ಜಯದೇವ ನಿಲ್ದಾಣವು 5 ಸ್ತರದ ಸಂಚಾರ ಸಾರಿಗೆಯನ್ನು ಹೊಂದಿದ್ದು,ವಿಶೇಷ ವಿನ್ಯಾಸ ಹೊಂದಿದ ಏಷಿಯಾದ ಮೊದಲ ನಿಲ್ದಾಣವಾಗಲಿರುವುದು ಗಮನಾರ್ಹ. ಬಿ.ಎಂ.ಆರ್.ಸಿ.ಎಲ್ ಅಧಿಕಾರಿಗಳ ಪ್ರಕಾರ ಯೋಜನೆಯ ಅಡಿಯಲ್ಲಿ 16 ನಿಲ್ದಾಣಗಳ ಶೇ 95 ರಷ್ಟು ಕಾರ್ಯ ಪೂರ್ಣಗೊಂಡಿದ್ದು, ಈ ಮಾರ್ಗದಲ್ಲಿ ಆರ್ ವಿ ರೋಡ್, ಸಿಲ್ಕ್ ಬೋರ್ಡ್ & ಜಯದೇವ ನಿಲ್ದಾಣಗಳಲ್ಲಿ 3 ಇಂಟರ್ ಚೇಂಜ್ ಸೌಕರ್ಯ ಒದಗಿಸಲಾಗಿರುವುದು ಗಮನಾರ್ಹ.
ಪರಿಶೀಲನೆ ನಂತರ Titagarh Rail Systems ನ MD ರೊಂದಿಗೆ ಮಾತನಾಡಿದ ಸಂಸದರು ನಿಗದಿತ ಸಮಯಕ್ಕೆ ರೈಲ್ವೆ ಬೋಗಿಗಳ ಸರಬರಾಜಿಗೆ ಒತ್ತಾಯಿಸಿರುತ್ತಾರೆ.
ಇದೇ ಸಂದರ್ಭದಲ್ಲಿ ಶ್ರೀ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕೆ. ಎಸ್ .ಆರ್ . ಟಿ.ಸಿ, ರೈಲ್ವೆ, ಬಿ.ಎಂ. ಟಿ.ಸಿ, ಮೆಟ್ರೋ & ಸಂಚಾರ ಪೊಲೀಸ್ ಸೇವೆಗಳನ್ನು ಒಳಗೊಂಡ ಸಂಯುಕ್ತ ಕಾರ್ಯಾಚರಣೆಯ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರವನ್ನು ಆರಂಭಿಸಿದ್ದು, ಪ್ರಸ್ತುತ ಸರ್ಕಾರ ಈ ಕುರಿತು ನಿಷ್ಕ್ರಿಯತೆ ತೋರಿಸುತ್ತಿರುವುದು ಆಘಾತಕಾರಿ. ಬೆಂಗಳೂರಿನ ಸಾರ್ವಜನಿಕ ಸಂಚಾರ ದಟ್ಟಣೆ ನಿವಾರಣೆಗೆ ರಾಜ್ಯ ಸರ್ಕಾರವು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಮುಂಚೆ ಬಿ.ಎಂ.ಟಿ.ಸಿ , ಮೆಟ್ರೋ ಹಾಗೂ ಸಾರ್ವಜನಿಕ ಸಂಚಾರಿ ಪೊಲೀಸ್ ವ್ಯವಸ್ಥೆಯ ನಡುವೆ ಸೂಕ್ತ ಸಂಯೋಜನೆ ಇರದೇ ಬೆಂಗಳೂರಿನ ಸಂಚಾರ ದಟ್ಟಣೆಗೆ ಹೊಸ ಹೊಸ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಆದ್ಯತೆಯ ಮೇರೆಗೆ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಗಮನ ಹರಿಸಬೇಕಿದೆ ಎಂದು ಇದೇ ಸಂದರ್ಭದಲ್ಲಿ ವಿವರಿಸಿದರು.
ಪಾರ್ಕಿಂಗ್ , ಸ್ಕೈ ವಾಕ್ ಸೌಲಭ್ಯ : ಮೆಟ್ರೋ ನಿಲ್ದಾಣಗಳ ಬಳಿ ಪಾರ್ಕಿಂಗ್ ಸಮಸ್ಯೆ ಕಂಡುಬರುತ್ತಿದ್ದು, ಹತ್ತಿರದ ಖಾಲಿ ಸ್ಥಳವನ್ನು ಬಳಸಿಕೊಂಡು ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು BMRCL ಅಧಿಕಾರಿಗಳಿಗೆ ಸೂಚಿಸಿದ್ದು, ಬೊಮ್ಮಸಂದ್ರ & ಹೆಬ್ಬಗೋಡಿ ಗಳಲ್ಲಿ ಪಾದಚಾರಿ ಸ್ಕೈ ವಾಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿರುತ್ತಾರೆ.
ಇನ್ಫೋಸಿಸ್ ಫೌಂಡೇಶನ್ ಮೂಲಕ ಇಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣವನ್ನು 180 ಕೋಟಿ ರೂ, ಸಹಕಾರದೊಂದಿಗೆ PPP ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದ್ದು, ಈ ಕಾರ್ಯದಲ್ಲಿ ಶ್ರೀ ನಾರಾಯಣ ಮೂರ್ತಿ & ಶ್ರೀಮತಿ ಸುಧಾ ಮೂರ್ತಿ ರವರ ಸಹಕಾರ ಶ್ಲಾಘನೀಯ.




