ಇಸ್ರೇಲ್ಗೆ ಅಧಿಕೃತ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಎನ್ಸಿಇಆರ್ಟಿ ಪಠ್ಯಪುಸ್ತಕ ವಿವಾದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ್ದು, ಸಮಾಜ ವಿಜ್ಞಾನ ಪಠ್ಯದ ವಿವಾದಾತ್ಮಕ ಭಾಗವನ್ನು ಪ್ರಕಟಿಸಿದವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಅವರಿಗೆ ನಿರ್ದೇಶನ ನೀಡಿದ್ದಾರೆ.
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಸಂಸ್ಥೆ, “ನ್ಯಾಯಾಂಗ ಭ್ರಷ್ಟಾಚಾರ” ಕುರಿತ ಅಧ್ಯಾಯವನ್ನು ಸೇರಿಸುವ ನಿರ್ಧಾರಕ್ಕೆ ಕಾರಣವಾದ ಪಠ್ಯಪುಸ್ತಕ ರಚನಾ ಪ್ರಕ್ರಿಯೆಯನ್ನು ಪರಿಶೀಲಿಸುತ್ತಿದ್ದು, ಈ ವಿಷಯವನ್ನು ಸೇರಿಸಲು ಹೊಣೆಗಾರರಾದ ವ್ಯಕ್ತಿಗಳನ್ನು ಗುರುತಿಸುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಈ ನಿರ್ಣಯದ ತಪ್ಪಿಗೆ ಕಾರಣವಾದ ಪಠ್ಯಪುಸ್ತಕ ರಚನಾ ಪ್ರಕ್ರಿಯೆಯನ್ನು ಎನ್ಸಿಇಆರ್ಟಿ ಪರಿಶೀಲಿಸುತ್ತಿದೆ, ಇದಕ್ಕೆ ಹೊಣೆಗಾರರಾದವರನ್ನು ಗುರುತಿಸುತ್ತಿದೆ. ಇದರಿಂದ ಭವಿಷ್ಯದಲ್ಲಿ ಇಂತಹ ಅನೌಚಿತ್ಯಗಳು ಸಂಪೂರ್ಣವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಧಾನ ಮಂತ್ರಿಗಳು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಅವರು ಈ ವಿಷಯದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದು, ವಿವಾದಾತ್ಮಕ ಭಾಗವನ್ನು ರಚಿಸಿದವರ ವಿರುದ್ಧ ಹೊಣೆಗಾರಿಕೆ ನಿಗದಿಪಡಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ನಡೆದ ಘಟನೆಗೆ ನಾನು ಬಹಳ ವಿಷಾದಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ, ನ್ಯಾಯಾಂಗವನ್ನು ಅವಮಾನಿಸುವ ಉದ್ದೇಶ ಇರಲಿಲ್ಲ. ಈ ಘಟನೆಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಯಲಿದೆ ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸಲಾಗುತ್ತದೆ. ಅಧ್ಯಾಯವನ್ನು ರಚಿಸುವಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ವಿಷಯ ತಿಳಿದ ತಕ್ಷಣವೇ ಪಠ್ಯದ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಂಶೆದ್ಪುರದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ ಧರ್ಮೇಂದ್ರ ಪ್ರದಾನ್ ತಿಳಿಸಿದ್ದಾರೆ.
ಭಾರತದಂತಹ ಪ್ರಜಾಸತ್ತಾತ್ಮಕ ದೇಶದಲ್ಲಿ ನ್ಯಾಯಾಂಗವು ಶ್ರೇಷ್ಠವಾಗಿದ್ದು, ಅದಕ್ಕೆ ನಾವು ಅಪಾರ ಗೌರವ ನೀಡುತ್ತೇವೆ, ಈ ವಿಷಯವನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ. ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲಾಗುತ್ತದೆ ಎಂದು ಅವರು ಹೇಳಿದರು.
ವಿವಾದವೇನು?
8ನೇ ತರಗತಿಯ ಎನ್ ಸಿಇಆರ್ ಟಿ ಸಮಾಜ ವಿಜ್ಞಾನ ಪಾಠ ಪುಸ್ತಕದಲ್ಲಿ, ಭ್ರಷ್ಟಾಚಾರ, ಬಾಕಿ ಪ್ರಕರಣಗಳ ಭಾರೀ ಸಂಖ್ಯೆಯು ಹಾಗೂ ತಕ್ಕ ಪ್ರಮಾಣದ ನ್ಯಾಯಾಧೀಶರ ಕೊರತೆ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳಾಗಿವೆ ಎಂದು ಉಲ್ಲೇಖಿಸಲಾಗಿದೆ.
ಎನ್ಸಿಇಆರ್ಟಿ ಈಗಾಗಲೇ ಆ ಪಠ್ಯಪುಸ್ತಕವನ್ನು ತನ್ನ ವೆಬ್ಸೈಟ್ನಿಂದ ತೆಗೆದುಹಾಕಿದ್ದು, “ಅನೌಚಿತ್ಯಪೂರ್ಣ ವಿಷಯ”ಕ್ಕಾಗಿ ಕ್ಷಮೆಯಾಚಿಸಿದೆ. ಜೊತೆಗೆ, ಸಂಬಂಧಿತ ಪ್ರಾಧಿಕಾರಗಳ ಸಲಹೆ ಪಡೆದು ಪುಸ್ತಕವನ್ನು ಮರುರಚಿಸಲಾಗುವುದು ಎಂದು ತಿಳಿಸಿದೆ.
