Home ಬೆಂಗಳೂರು ನಗರ Physiotherapy Courses | ಫಿಸಿಯೋಥೆರಪಿ ಕೋರ್ಸ್‌ಗಳಿಗೆ ನೀಟ್ ಕಡ್ಡಾಯ: ಡಾ.ಶರಣಪ್ರಕಾಶ್‌ ಪಾಟೀಲ್‌

Physiotherapy Courses | ಫಿಸಿಯೋಥೆರಪಿ ಕೋರ್ಸ್‌ಗಳಿಗೆ ನೀಟ್ ಕಡ್ಡಾಯ: ಡಾ.ಶರಣಪ್ರಕಾಶ್‌ ಪಾಟೀಲ್‌

42
0

ಬೆಂಗಳೂರು : ಫಿಸಿಯೋಥೆರಪಿ ಕೋರ್ಸ್‌ಗಳಿಗೆ ಪ್ರವೇಶವು ಈಗ ನೀಟ್ ವ್ಯಾಪ್ತಿಗೆ ಬರಲಿದ್ದು, ಇದು ಪ್ರಮಾಣೀಕೃತ ವೈದ್ಯಕೀಯ ಶಿಕ್ಷಣದತ್ತ ರಾಷ್ಟ್ರೀಯ ನಡೆಗೆ ಪೂರಕವಾಗಿರುತ್ತದೆ. ಸಾಮರ್ಥ್ಯ ಆಧಾರಿತ ಕಲಿಕೆ ಮತ್ತು ಹೆಚ್ಚುವರಿ ಕ್ಲಿನಿಕಲ್ ಮಾನ್ಯತೆಗಾಗಿ ಕೋರ್ಸ್ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಫಿಸಿಯೋಥೆರಪಿಯ ಅಂತರರಾಷ್ಟ್ರೀಯ ಸಮ್ಮೇಳನವಾದ ʼಕರ್ನಾಟಕ ಫಿಸಿಯೋಕಾನ್ -25ʼ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಫಿಸಿಯೋಥೆರಪಿ ಕೋರ್ಸ್‌ಗಳ ಪ್ರವೇಶವನ್ನು ನೀಟ್ ವ್ಯಾಪ್ತಿಗೆ ಸೇರಿಸಲು ರಾಜ್ಯ ಸರ್ಕಾರದ ಬೆಂಬಲವಿದೆ. ಶೈಕ್ಷಣಿಕ ಗುಣಮಟ್ಟ ಮತ್ತು ವೃತ್ತಿಪರ ಮಾನದಂಡಗಳನ್ನು ಹೆಚ್ಚಿಸುವ ನೀಟ್ ಅಡಿಯಲ್ಲಿ ಭೌತಚಿಕಿತ್ಸೆಯ ಕೋರ್ಸ್‌ಗಳ ಏಕೀಕರಣವನ್ನು ನಾವು ಸ್ವಾಗತಿಸುತ್ತೇವೆ ಎಂದು ಅವರು ಹೇಳಿದರು.

ಗಣನೀಯ ಸೇವೆ ನೀಡುತ್ತಿರುವ ಭೌತ ಚಿಕಿತ್ಸಕರು ಹೆರಿಗೆಯಿಂದ ವೃದ್ಧರ ಆರೈಕೆಯವರೆಗೆ, ಆರೋಗ್ಯ ರಕ್ಷಣೆಯಲ್ಲಿ ಭೌತಚಿಕಿತ್ಸಕರು ಪ್ರಮುಖ ಪಾತ್ರ ವಹಿಸುತ್ತಾರೆ. ಭೌತಚಿಕಿತ್ಸಕರು ನರ ಮತ್ತು ಮೂಳೆಚಿಕಿತ್ಸೆ ಪುನರ್‌ ಆರೈಕೆ, ಹೃದಯ ಶ್ವಾಸಕೋಶ ಆರೈಕೆ, ಮಕ್ಕಳ ಚಿಕಿತ್ಸೆ, ಅಂಗವೈಕಲ್ಯ ಚಿಕಿತ್ಸೆ, ಫಿಟ್ನೆಸ್ ಮತ್ತು ಸಮುದಾಯ ಆಧಾರಿತ ಆರೈಕೆಗೆ ಗಣನೀಯ ಕೊಡುಗೆ ನೀಡುತ್ತಾರೆ” ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ತರಬೇತಿ ಪಡೆದ ವೃತ್ತಿಪರರಿಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ. ಇದನ್ನು ಪೂರೈಸಲು ಹೆಚ್ಚಿನ ಸರ್ಕಾರಿ ಕಾಲೇಜುಗಳಲ್ಲಿ ಭೌತಚಿಕಿತ್ಸೆಯ ಕೋರ್ಸ್‌ಗಳನ್ನು ಪರಿಚಯಿಸುವ ಚಿಂತನೆ ಇದೆ ಎಂದು ಡಾ.ಶರಣಪ್ರಕಾಶ್‌ ಪಾಟೀಲ್‌ ತಿಳಿಸಿದರು.

ರಾಷ್ಟ್ರೀಯ ಅಲೈಡ್ & ಹೆಲ್ತ್ ಪ್ರೊಫೆಷನಲ್ಸ್ ಆಯೋಗದ ಅಧ್ಯಕ್ಷರಾದ ಡಾ.ಯಜ್ಞ ಶುಕ್ಲಾ ಮಾತನಾಡಿ, ಭೌತಚಿಕಿತ್ಸೆಯ ಶಿಕ್ಷಣದಲ್ಲಿ ಒಂದು ರಾಷ್ಟ್ರ, ಒಂದು ಪಠ್ಯಕ್ರಮ ಉಪಕ್ರಮವನ್ನು ಪರಿಚಯಿಸಲು ಆಯೋಗ ಚಿಂತನೆ ನಡೆಸಿದೆ ಎಂದು ಹೇಳಿದರು,

ಪಠ್ಯಕ್ರಮ ಸುಧಾರಣೆಗಳು ವಿದ್ಯಾರ್ಥಿಗಳು ಮತ್ತು ವೈದ್ಯರಿಗೆ ವಿಶೇಷ ಪ್ರಯೋಜನಗಳೊಂದಿಗೆ ವೃತ್ತಿಯನ್ನು ಉನ್ನತೀಕರಿಸುವ ಮಾನದಂಡವನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಇಸ್ರೇಲ್, ಆಸ್ಟ್ರೇಲಿಯಾ ಮತ್ತು ನೇಪಾಳದ ಭಾಷಣಕಾರರು, ಜಾಗತಿಕ ತಜ್ಞರು ಹಾಗೂ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. 50 ರಾಷ್ಟ್ರೀಯ ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ 800ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು.

ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಭಗವಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್ ಉಪಸ್ಥಿತರಿದ್ದರು.

ಹೊಸ ಕಚೇರಿ ಕಟ್ಟಡ ಉದ್ಘಾಟನೆ :ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಅಲೈಡ್ ಹೆಲ್ತ್ ಸೈನ್ಸ್‌ ಕೌನ್ಸಿಲ್ (ಕೆಎಸ್‌ಎಎಚ್‌ಸಿ) ನ ಹೊಸ ಕಚೇರಿಯನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಕೆಎಸ್‌ಎಎಚ್‌ಸಿ ಅಧ್ಯಕ್ಷ ಡಾ.ಯು.ಟಿ.ಇಫ್ತಿಕರ್ ಫರೀದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here