ಬೆಂಗಳೂರು: ನಾಡಿನ ಐಕಾನಿಕ್ ಸಂಸ್ಥೆಯಾದ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್ಡಿಎಲ್) ಹೊಸ ಯುಗಕ್ಕೆ ಅಧಿಕೃತವಾಗಿ ಕಾಲಿಟ್ಟಿದೆ. ಮಂಗಳವಾರ ನಡೆದ ಭರ್ಜರಿ ಕಾರ್ಯಕ್ರಮದಲ್ಲಿ ಖ್ಯಾತ ನಟಿ ತಮನ್ನಾ ಭಾಟಿಯಾ ಅವರನ್ನು ಸಂಸ್ಥೆಯ ಪ್ರಚಾರ ರಾಯಭಾರಿಯಾಗಿ ಪರಿಚಯಿಸಿ, 57 ಹೊಸ ಹಾಗೂ ನವೀಕರಿತ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.
ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಸರ್ ಬೆಳಕಿನ ಝಗಮಗದ ನಡುವೆ ತಮನ್ನಾ ಭವ್ಯವಾಗಿ ವೇದಿಕೆಗೆ ಆಗಮಿಸಿದರು. ಪರಂಪರೆ ಮತ್ತು ಸಮಕಾಲೀನತೆಯ ಸಂಯೋಜನೆಯನ್ನು ಪ್ರತಿಬಿಂಬಿಸುವಂತೆ ಮೈಸೂರು ಸಿಲ್ಕ್ ಸೀರೆಯಲ್ಲಿ ಕಂಗೊಳಿಸಿದ ಅವರು, ನವ ಪ್ಯಾಕಿಂಗ್ ಪಡೆದ ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ 57 ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹಾಗೂ ಕೆಎಸ್ಡಿಎಲ್ ಅಧ್ಯಕ್ಷ ಸಿ.ಎಸ್. ಅಪ್ಪಾಜಿ ನಾಡಗೌಡ ಅವರ ನೇತೃತ್ವದಲ್ಲಿ ಸಂಸ್ಥೆ ಹೊಸ ಬ್ರ್ಯಾಂಡಿಂಗ್ ತಂತ್ರದೊಂದಿಗೆ ಮುಂದಿನ ಹಂತಕ್ಕೆ ಸಾಗುತ್ತಿದೆ. ಹೊಸ ಉತ್ಪನ್ನ ಪಟ್ಟಿಯಲ್ಲಿ ಗಂಧದ ಎಣ್ಣೆ, ಮಲ್ಲಿಗೆ ಪರಿಮಳದ ಐಷಾರಾಮಿ ಸೋಪ್, ಸುಗಂಧ ದ್ರವ್ಯ, ಟೂತ್ ಪೇಸ್ಟ್, ಕೊಬ್ಬರಿ ಎಣ್ಣೆ, ಪೆಟ್ರೋಲಿಯಂ ಜೆಲ್ಲಿ ಹಾಗೂ ಸಾವಯವ ಉತ್ಪನ್ನಗಳು ಸೇರಿವೆ. ಒಟ್ಟು ಸುಮಾರು 60 ಉತ್ಪನ್ನಗಳ ಶ್ರೇಣಿಯನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ತಮನ್ನಾ, “ಮೈಸೂರು ಸ್ಯಾಂಡಲ್ ಸೋಪ್ ಕೇವಲ ಒಂದು ಸೋಪಲ್ಲ. ಇದು ಭಾವನೆಗಳು, ಬಾಲ್ಯದ ನೆನಪುಗಳು ಮತ್ತು ನೈಜ ಗುಣಮಟ್ಟದ ಸಂಕೇತ. ಮಾರುಕಟ್ಟೆಯಲ್ಲಿ ಇದಕ್ಕೆ ಸಮಾನವಾದ ಮತ್ತೊಂದು ಉತ್ಪನ್ನವೇ ಇಲ್ಲ. ಮುಂದಿನ ಎರಡು ವರ್ಷ ಈ ಬ್ರ್ಯಾಂಡ್ಗೆ ರಾಯಭಾರಿಯಾಗಿ ಕೆಲಸ ಮಾಡುವ ಅವಕಾಶ ನನಗೆ ಹೆಮ್ಮೆಯ ವಿಷಯ,” ಎಂದರು.
ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, “ಕೆಎಸ್ಡಿಎಲ್ ಈಗ ಸ್ಯಾಂಡಲ್ ಸೋಪ್ಗೆ ಮಾತ್ರ ಸೀಮಿತವಿಲ್ಲ. ಜಾಸ್ಮೀನ್ ಪರಿಮಳದ ಪ್ರೀಮಿಯಂ ಸೋಪ್ಗಳು ಹಾಗೂ ಸುಗಂಧ ದ್ರವ್ಯಗಳ ವಲಯಕ್ಕೂ ಕಾಲಿಟ್ಟಿದ್ದೇವೆ. ಯುರೋಪ್ ಮಾರುಕಟ್ಟೆಯಲ್ಲಿ ಇಂತಹ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದೆ,” ಎಂದು ತಿಳಿಸಿದರು. ಪ್ರಸ್ತುತ ಶೇಕಡಾ 1ರಷ್ಟು ಮಾತ್ರ ರಫ್ತು ನಡೆಯುತ್ತಿದ್ದು, ಇದನ್ನು ಹೆಚ್ಚಿಸಲು ಸ್ಪಷ್ಟ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದರು.
ಅಧ್ಯಕ್ಷ ಸಿ.ಎಸ್. ಅಪ್ಪಾಜಿ ನಾಡಗೌಡ ಮಾತನಾಡಿ, “ಈ ಸಾಲಿನಲ್ಲಿ ಕೆಎಸ್ಡಿಎಲ್ ವಹಿವಾಟು ₹2,000 ಕೋಟಿ ತಲುಪುವ ನಿರೀಕ್ಷೆಯಿದ್ದು, ಲಾಭ ₹500 ಕೋಟಿ ದಾಟಲಿದೆ. ದೇಶವ್ಯಾಪಿ ಪ್ರಭಾವ ಹೊಂದಿರುವ ತಮನ್ನಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಳ್ಳುವುದು ಈ ಬೆಳವಣಿಗೆಯ ಪ್ರಮುಖ ಭಾಗ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ಎಂ. ಪ್ರಶಾಂತ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
