ಬೆಂಗಳೂರು ನಗರ ಜಿಲ್ಲೆ ಏಪ್ರಿಲ್ 04 (ಕರ್ನಾಟಕ ವಾರ್ತೆ) : ಭಾರತದಲ್ಲಿನ ಪರಾಗ್ವೆ ರಾಯಭಾರಿ ಫ್ಲೆಮಿಂಗ್ ಡುವಾರ್ಟೆ ಹಾಗೂ ಕಾಂಬೋಡಿಯ ಕೌನ್ಸುಲ್ ಕಾರ್ತಿಕ್ ತಲ್ಲಂ ನೇತೃತ್ವದ ನಿಯೋಗವು ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜ್ಞಾನಜ್ಯೋತಿ ಕ್ಯಾಂಪಸ್ ಗೆ ಭೇಟಿ ನೀಡಿ ಶೈಕ್ಷಣಿಕ ಸಹಭಾಗಿತ್ವ ಕುರಿತು ವಿಚಾರ ವಿನಿಮಯ ನಡೆಸಿದರು.
ಇಂದು ಸೆಂಟ್ರಲ್ ಕಾಲೇಜಿನ ಆವರಣಕ್ಕೆ ಆಗಮಿಸಿದ ನಿಯೋಗವನ್ನು ಬೆಂಗಳೂರು ನಗರ ವಿಶ್ವವಿದ್ಯಾನಿಲಯಕ್ಕೆ ಕುಲಪತಿಗಳಾದ ಪ್ರೊ.ಲಿಂಗರಾಜ ಗಾಂಧಿ ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು.
ವಿಶ್ವವಿದ್ಯಾನಿಲಯದ ಆಡಳಿತ ವರ್ಗ ಹಾಗೂ ಹಿರಿಯ ಪ್ರಾಧ್ಯಾಪಕರೊಂದಿಗೆ ಚರ್ಚೆ ನಡೆಸಿದ ನಿಯೋಗವು, ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗದ ಅವಕಾಶಗಳ ಕುರಿತು ಪರಾಮರ್ಶಿಸಿತು.
ಹೊಸ ಪೀಳಿಗೆಯ ಅಗತ್ಯಗಳಿಗೆ ಅನುಗುಣವಾಗಿ ಬಿಸಿಯು ವಿಜ್ಞಾನ ಮತ್ತು ತಂತ್ರಜ್ಞಾನ, ವಾಣಿಜ್ಯ ಮತ್ತು ಆಡಳಿತ ಹಾಗೂ ಮಾನವಿಕ ಶಾಸ್ತ್ರ ವಿಭಾಗಗಳಲ್ಲಿ ನೂತನ ಕೋರ್ಸ್ ಗಳನ್ನು ಆರಂಭಿಸಿ ಬೋಧಿಸುತ್ತಿರುವುದಾಗಿ ಕುಲಪತಿ ಪ್ರೊ.ಗಾಂಧಿ ಅವರು ತಿಳಿಸಿದರು.
ಸಾರ್ವಜನಿಕ ಆರೋಗ್ಯ, ಪರಿಸರ ಸಂರಕ್ಷಣೆ, ಸ್ಮಾರ್ಟ್ ಸಿಟಿ ಯೋಜನೆ ಮುಂತಾದ ಕ್ಷೇತ್ರಗಳಲ್ಲಿ ಬಿಸಿಯು ಈಗಾಗಲೇ 12 ವಿದೇಶಿ ವಿಶ್ವವಿದ್ಯಾಲಯಗಳ ಜೊತೆ ಜಂಟಿ ಸಹಭಾಗಿತ್ವ ಮಾಡಿಕೊಂಡಿದೆ ಎಂದು ವಿವರಿಸಿದರು.
ಬಿಸಿಯು ಜೊತೆ ಶೈಕ್ಷಣಿಕ ಸಹಭಾಗಿತ್ವಕ್ಕೆ ಅಪಾರ ಆಸಕ್ತಿ ವ್ಯಕ್ತಪಡಿಸಿದ ಪೆರುಗ್ವೆ ರಾಯಭಾರಿ ಫ್ಲೆಮಿಂಗ್ ಡುವಾರ್ಟೆ ಶೀಘ್ರವೇ ಶಿಕ್ಷಣ ಸಚಿವರ ನೇತೃತ್ವದ ನಿಯೋಗ ಬೆಂಗಳೂರಿಗೆ ಭೇಟಿ ನೀಡಲಿದ್ದು, ಈ ನಿಟ್ಟಿನಲ್ಲಿ ಸೂಕ್ತ ಒಡಂಬಡಿಕೆ ಮಾಡಿಕೊಳ್ಳುವುದಾಗಿ ಪ್ರಕಟಿಸಿದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮಂಚೂಣಿಯಲ್ಲಿರುವ ಬೆಂಗಳೂರು ನಗರ ಕೇಂದ್ರಿತವಾದ ಬಿಸಿಯು ಸಹಯೋಗದಲ್ಲಿ ಶೈಕ್ಷಣಿಕ ವಿನಿಮಯ ಕಾರ್ಯಕ್ರಮ ರೂಪಿಸುವ ಪ್ರಸ್ತಾಪವನ್ನು ಅವರು ಮುಂದಿಟ್ಟರು.
ಭಾರತದೊಂದಿಗೆ ವಿಶೇಷ ಸಾಂಸ್ಕೃತಿಕ ಸಾಮ್ಯತೆ ಹೊಂದಿರುವ ಕಾಂಬೋಡಿಯಾ ದೇಶದ ಭಾಷೆ ಕನ್ನಡ ಭಾಷೆಗೆ ಸಾಕಷ್ಟು ನಿಕಟವಾಗಿದೆ ಎಂದು ಕಾರ್ತಿಕ್ ತಲ್ಲಂ ತಿಳಿಸಿದರು. ಬಿಸಿಯು ಜೊತೆ ಶೈಕ್ಷಣಿಕ ಸಹಕಾರಕ್ಕಾಗಿ ಅವರು ಇದೇ ವೇಳೆ ಅಪಾರ ಉತ್ಸುಕತೆ ವ್ಯಕ್ತಪಡಿಸಿದರು.
ಬಿಸಿಯು ಕುಲಸಚಿವರಾದ ಟಿ.ಜವರೇಗೌಡ, ಕುಲಸಚಿವ (ಮೌಲ್ಯಮಾಪನ) ಪ್ರೊ. ಬಿ.ರಮೇಶ್, ವಿತ್ತಾಧಿಕಾರಿ ಎಂ.ವಿ. ವಿಜಯಲಕ್ಷ್ಮಿ, ನಿಯೋಗದ ಸದಸ್ಯರಾದ ನವಾಬ್ ನಜಾಫ್ ಆಲಿ ಖಾನ್, ಸಿಂಡಿಕೇಟ್ ಸದಸ್ಯರಾದ ಪ್ರೊ.ಲಕ್ಷ್ಮಿನಾರಾಯಣ, ಜಾಗತಿಕ ಭಾಷೆಗಳ ಕೇಂದ್ರದ ಅಧ್ಯಕ್ಷರಾದ ಪ್ರೊ. ಜ್ಯೋತಿ ವೆಂಕಟೇಶ್ ಹಾಗೂ ಇತರರು ಉಪಸ್ಥಿತರಿದ್ದರು.