ಮುಖ್ಯ ಆಯುಕ್ತರಿಂದ 3 ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ
ಬೆಂಗಳೂರು: ಜು. 24: ಕನ್ನಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಯೋಜನೆ ರೂಪಿಸುವಂತೆ ಬೆಂ.ಘ.ತ್ಯಾ.ನಿ.ನಿ ದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ರಾಜಕಾಲುವೆ ಕಾಮಗಾರಿಗಳ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಕನ್ನಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಪ್ರತಿನಿತ್ಯ 350 ಮೆಟ್ರಿಕ್ ಟನ್ ತ್ಯಾಜ್ಯ ಸಂಸ್ಕರಣೆ ಮಾಡಲಾಗುತ್ತಿದೆ. ಈ ಘಟಕವನ್ನು ಖಾಸಗಿ ಸಂಸ್ಥೆಯಾದ ಸತಾರಾಂ ಮೂಲಕ ನಡೆಸಲಾಗುತ್ತಿದ್ದು, ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸುವ ಸಲುವಾಗಿ ಸಾಧಕ-ಭಾದಕಗಳನ್ನು ಚರ್ಚಿಸಿ ಯೋಜನೆ ರೂಪಿಸಲು ಸೂಚಿಸಿದರು.
ಸೀಗೇಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕ: ಸೀಗೇಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 120 ಮೆಟ್ರಿಕ್ ಟನ್ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯವಿದ್ದು, ಸಂಪೂರ್ಣ ತ್ಯಾಜ್ಯವನ್ನು ಸ್ವೀಕರಿಸಿ ಸಂಸ್ಕರಣೆ ಮಾಡಲಾಗುತ್ತಿದೆ. ಘಟಕದಲ್ಲಿ 5 ಲಕ್ಷ ಟನ್ ಲೆಗಸಿ ವೇಸ್ಟ್ ಇದ್ದು, ಟ್ರಾಮಲ್ ಯಂತ್ರ ಬಳಸಿಕೊಂಡು ಲೆಗೆಸಿ ವೇಸ್ಟ್ ಅನ್ನು ರೀಪ್ರೊಸೆಸಿಂಗ್ ಮಾಡಬೇಕು. ಅದರಲ್ಲಿ ಆರ್.ಡಿ.ಎಫ್ ತ್ಯಾಜ್ಯವನ್ನು ಬಿಡದಿಯಲ್ಲಿರುವ ವಿದ್ಯುತ್ ಉತ್ಪಾದನಾ ಘಟಕಕ್ಕೆ ಕಳುಹಿಸಿ ಇನರ್ಟ್ ಅನ್ನು ಲ್ಯಾಂಡ್ಫಿಲ್ ಗೆ ವಿಲೇವಾರಿ ಮಾಡಲು ಸೂಚನೆ ನೀಡಿದರು.
ಸೀಗೇಹಳ್ಳಿ ಘಟಕದಲ್ಲಿ ಪಾಲಿಕೆಯ ಬಳಕೆಯಾಗದ ವಾಹನಗಳಿ(ಸ್ಕ್ರ್ಯಾಪ್)ದ್ದು, ಆರ್.ಟಿ.ಓ. ಇಲಾಖೆಯು ಅದನ್ನು ತಪಾಸಣೆ ಮಾಡಿ ವಾಹನಗಳ ದರವನ್ನು ನಿಗದಿಪಡಿಸಿ ಇ-ಆಕ್ಷನ್ ಮಾಡಲು ಸೂಚಿಸಿದರು.
ಸುಬ್ಬರಾಯನ ಪಾಳ್ಯ ತ್ಯಾಜ್ಯ ಸಂಸ್ಕರಣಾ ಘಟಕ: ಸುಬ್ಬರಾಯನ ಪಾಳ್ಯ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 150 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿ ಆಗುತ್ತಿದ್ದು, ಸದ್ಯ 120 ಟನ್ ತ್ಯಾಜ್ಯವನ್ನು ಸ್ವೀಕರಿಸಲಾಗುತ್ತಿದೆ. ಘಟಕಕ್ಕೆ ಸಂಪೂರ್ಣ ತ್ಯಾಜ್ಯ ಸ್ವೀಕರಿಸಿ ಸಂಸ್ಕರಣೆ ಮಾಡಬೇಕು. ಏನಾದರು ದುರಸ್ತಿ ಕಾರ್ಯವಿದ್ದರೆ ಅದನ್ನು ಸರಿಪಡಿಸಿಕೊಂಡು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಬೇಕು. ಸ್ಥಳೀಯ ನಿವಾಸಿಗಳಿಗೆ ಯಾವುದೇ ರೀತಿಯ ದುರ್ವಾಸನೆ ಬಾರದಂತೆ ಔಷಧಿ ಸಿಂಪಡಣೆ ಮಾಡಿ, ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ರಾಜಕಾಲುವೆ ಕಾಮಗಾರಿಗಾಗಿ ಜಂಟಿ ಪರಿಶೀಲನೆ: ನಾಗರಭಾವಿಯ ಟೀಚರ್ಸ್ ಕಾಲೋನಿಯಲ್ಲಿ ಮಳೆಗಾಲದ ವೇಳೆ ಪ್ರವಾಹ ಸಮಸ್ಯೆ ಎದುರಾಗುತ್ತಿದೆ. ಆ ಸಮಸ್ಯೆಯನ್ನು ಬಗೆಹರಿಸಬೇಕಾದರೆ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಆವರಣದಲ್ಲಿರುವ ಕಚ್ಚಾ ರಾಜಕಾಲುವೆಯನ್ನು ಪಕ್ಕಾ ರಾಜಕಾಲುವೆ ಮಾಡಬೇಕಿದೆ. ಈ ಸಂಬಂಧ ಇಂದು ಪಾಲಿಕೆ ಹಾಗೂ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರರ್ಸಿಟಿ ಯ ಉಪ ಕುಲಪತಿಗಳು ಜಂಟಿ ಪರಿಶೀಲನೆ ನಡೆಸಿ ರಾಜಕಾಲುವೆ ನಿರ್ಮಾಣ ಮಾಡಲು ಕ್ರಮವಹಿಸಲಾಗಿದೆ. ಈ ನಿಟ್ಟಿನಲ್ಲಿ ಕೂಡಲೆ ರಾಜಕಾಲುವೆ ಕಾಮಗಾರಿಯನ್ನು ಪ್ರಾರಂಭಿಸಿ ಈ ಭಾಗದಲ್ಲಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಇನ್ನು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಆವರಣದಲ್ಲಿ ರಾಜಕಾಲುವೆಯ ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಮುಖ್ಯ ಅಭಿಯಂತರರಾದ ರಾಜೇಶ್, ಬಿಎಸ್.ಡಬ್ಲ್ಯೂ.ಎಂ.ಎಲ್ನ ಡಿಜಿಎಂ ಧಾನ್ ನಾಯ್ಕ್, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.