ಮೈಸೂರು:
ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಸ್ಡಿಪಿಐ ಬೆಂಬಲ ಕೋರಿದ ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ ವಿರುದ್ಧ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಶನಿವಾರ ತೀವ್ರವಾಗಿ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಮೇಶ್ವರ ಅವರು ಉಗ್ರಗಾಮಿ ಸಂಘಟನೆ ಪಿಎಫ್ಐನ ರಾಜಕೀಯ ಘಟಕ ಎಸ್ಡಿಪಿಐ ಬೆಂಬಲ ಕೋರಿದ್ದಾರೆ. ಪರಮೇಶ್ವರ ಅವರು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಮುಸ್ಲಿಮರಿಗೆ ಕರೆ ನೀಡಿದ್ದಾರೆ. ಅವರು ಗೃಹ ಸಚಿವರಾಗಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಎಸ್ಡಿಪಿಐ ಬೆಂಬಲ ಕೋರುವ ಮೂಲಕ ಅವರು ಯಾವ ಸಂದೇಶವನ್ನು ನೀಡಲು ಪ್ರಯತ್ನಿಸುತ್ತಿದ್ದಾರೆಂದು ಪ್ರಶ್ನಿಸಿದ್ದಾರೆ.
ಅಧಿಕಾರಕ್ಕೆ ಬರಲು ಅವರು ನಿಷೇಧಿತ ಸಂಘಟನೆಯ ರಾಜಕೀಯ ಘಟಕದ ಬೆಂಬಲವನ್ನು ಬಯಸುತ್ತಿದ್ದಾರೆ. ಈ ಹಿಂದಿದ್ದ ಬಿಹಾರ ಅಥವಾ ಉತ್ತರ ಪ್ರದೇಶ ರಾಜ್ಯದಂತೆ ಕರ್ನಾಟಕವನ್ನು ಮಾಡಲು ಕಾಂಗ್ರೆಸ್ ಬಯಸಿದೆಯೇ ಎಂದು ಪ್ರಶ್ನಿಸಿದ್ದಾರೆ.
ಸಿಮಿಯನ್ನು ನಿಷೇಧಿಸಿದ ನಂತರ ದಕ್ಷಿಣ ಭಾರತದಲ್ಲಿ PFI ಮತ್ತು KFD ಪ್ರಾರಂಭವಾಯಿತು. ಈ ಸಂಘಟನೆಯ ರಾಜಕೀಯ ವಿಭಾಗ SDPI ಆಗಿದೆ. ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ರಾಜಕೀಯ ಹತ್ಯೆಗಳಲ್ಲಿ ಪಿಎಫ್ಐ ಭಾಗಿಯಾಗಿದೆ ಎಂಬ ಮಾಹಿತಿ ತಿಳಿದುಬಂದ ಬಳಿಕ ಕೇಂದ್ರ ಸರ್ಕಾರವು 2022 ರಲ್ಲಿ ಈ ಸಂಘಟನೆಯನ್ನು ನಿಷೇಧಿಸಿತು. ಕಾಂಗ್ರೆಸ್ ದೇಶ ವಿರೋಧಿ ಸಂಘಟನೆಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ನಡೆದ ಹಲವಾರು ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿ ಪಿಎಫ್ಐ, ಕೆಎಫ್ಡಿ ಮತ್ತು ಎಸ್ಡಿಪಿಐ ಕೈವಾಡವಿದೆ, ಈ ಸಂಘಟನೆಗಳ ಕಾರ್ಯಕರ್ತರು ಸಿದ್ದರಾಮಯ್ಯನವರ ದತ್ತು ಮಕ್ಕಳಿದ್ದಂತೆ. ಎಸ್ಡಿಪಿಐ ಬೆಂಬಲದೊಂದಿಗೆ ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರವನ್ನು ತರಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಜನರು ಜಾಗರೂಕರಾಗಿರಬೇಕು. 2047 ರ ವೇಳೆಗೆ ಭಾರತ ಇಸ್ಲಾಮಿಕ್ ರಾಷ್ಟ್ರವಾಗಲಿದೆ ಎಂದು ಎಸ್ಡಿಪಿಐ ಹೇಳುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ರಾಜಕೀಯ ಹತ್ಯೆಗಳು ಹೆಚ್ಚಾಗುತ್ತವೆ ಎಂದು ತಿಳಿಸಿದರು.
ವಸತಿ ಸಚಿವ ವಿ ಸೋಮಣ್ಣ ಅವರು ವರುಣಾದಿಂದ ಮತ್ತು ಚಾಮರಾಜ ಕ್ಷೇತ್ರದಿಂದ ಎಲ್ ನಾಗೇಂದ್ರ ಅವರು ಏಪ್ರಿಲ್ 17 ರಂದು ನಾಮಪತ್ರ ಸಲ್ಲಿಸಲಿದ್ದಾರೆ. “ಸೋಮಣ್ಣ ಅವರು ವರುಣಾದಲ್ಲಿ ತಂದೆ ಮತ್ತು ಮಗನ (ಸಿದ್ದರಾಮಯ್ಯ ಮತ್ತು ಯತೀಂದ್ರ ಸಿದ್ದರಾಮಯ್ಯ) 15 ವರ್ಷಗಳ ‘ದರ್ಬಾರ್’ ಅಂತ್ಯಗೊಳಿಸಲಿದ್ದಾರೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬಿಜೆಪಿ ಕನಿಷ್ಠ ಎಂಟು ಸ್ಥಾನಗಳನ್ನು ಗೆಲ್ಲಲಿದೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮೈಸೂರು ಜಿಲ್ಲಾಧ್ಯಕ್ಷ ಶ್ರೀವಾತ್ಸವ, ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ವಿ ಕವಿಶಗೌಡ ಉಪಸ್ಥಿತರಿದ್ದರು.