ನಟ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ’ (Kantara) ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಅನೇಕ ಕಡೆಗಳಿಗೆ ತೆರಳಿ ಅವರು ಪ್ರಚಾರ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಧೂಳೆಬ್ಬಿಸಿದ ಈ ಸಿನಿಮಾ ಈಗ ಒಟಿಟಿಗೂ ಕಾಲಿಟ್ಟು ಪ್ರೇಕ್ಷಕರನ್ನು ರಂಜಿಸುತ್ತಿದೆ. ಅಮೇಜಾನ್ ಪ್ರೈಂ ವಿಡಿಯೋದಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿದೆ. ಸದ್ಯಕ್ಕೆ ಸಿನಿಮಾ ಕೆಲಸಗಳಿಂದ ರಿಷಬ್ ಶೆಟ್ಟಿ ಅವರು ಸ್ವಲ್ಪ ಬ್ರೇಕ್ ಪಡೆದುಕೊಂಡಿದ್ದಾರೆ. ಒಂದಷ್ಟು ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು (ಡಿ.2) ಅವರು ಕಲಬುರಗಿ ನಗರಕ್ಕೆ ತೆರಳಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಕಾಂತಾರ 2’ (Kantara 2) ಸಿನಿಮಾ ಪ್ಲ್ಯಾನ್, ವರಾಹ ರೂಪಂ ಹಾಡಿನ ವಿವಾದ ಸೇರಿದಂತೆ ಅನೇಕ ವಿಚಾರ ಬಗ್ಗೆ ಎದುರಾದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.
ಮಲಯಾಳಂನ ತೈಕ್ಕುಡಂ ಬ್ರಿಡ್ಜ್ ಮ್ಯೂಸಿಕ್ ಬ್ಯಾಂಡ್ನವರು ‘ಕಾಂತಾರ’ ಸಿನಿಮಾದ ‘ವರಾಹ ರೂಪಂ..’ ಹಾಡಿನ ಮೇಲೆ ಕೃತಿ ಚೌರ್ಯ ಆರೋಪ ಮಾಡಿದ್ದಾರೆ. ಕೋರ್ಟ್ನಲ್ಲಿ ಇದರ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ರಿಷಬ್ ಶೆಟ್ಟಿ ಹೋದಲ್ಲೆಲ್ಲ ಪ್ರಶ್ನೆ ಎದುರಾಗುತ್ತಿದೆ. ಆದರೆ ಹಾಡಿನ ವಿವಾದದ ಬಗ್ಗೆ ಮಾತನಾಡಲು ರಿಷಬ್ ಶೆಟ್ಟಿ ನಿರಾಕರಿಸಿದ್ದಾರೆ.
‘ಹಾಡಿನ ವಿಚಾರ ಕೋರ್ಟ್ನಲ್ಲಿ ಇದೆ. ಅಲ್ಲಿಂದ ಬಂದಾಗಲೇ ಮಾತನಾಡಬೇಕು. ಅದರ ಬಗ್ಗೆ ನಾವು ಇಲ್ಲಿ ಮಾತನಾಡಬಾರದು’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಒಟಿಟಿಯಲ್ಲಿ ‘ಕಾಂತಾರ’ ಪ್ರಸಾರ ಆಗುತ್ತಿದ್ದು, ಅದರಲ್ಲಿ ‘ವರಾಹ ರೂಪಂ..’ ಹಾಡು ಬದಲಾಗಿರುವುದಕ್ಕೆ ಅನೇಕ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.
‘ಕಾಂತಾರ’ ಚಿತ್ರ 400 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಯಶಸ್ಸು ಜನರಿಂದ ಬಂದಿದ್ದು ಎಂದು ರಿಷಬ್ ಹೇಳಿದ್ದಾರೆ. ಹಾಗಾದರೆ ‘ಕಾಂತಾರ 2’ ಸಿನಿಮಾ ಬರುತ್ತಾ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಟೈಮ್ ಬಂದಾಗ ಕಾಂತಾರ 2 ಚಿತ್ರ ಬರುತ್ತದೆ. ಅದರ ಬಗ್ಗೆ ಆಗಲೇ ಹೇಳುತ್ತೇವೆ. ಆ ಕುರಿತು ಈಗ ಯಾವುದೇ ಆಲೋಚನೆ ಇಲ್ಲ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Rishab Shetty: ದೇಶಾದ್ಯಂತ ‘ಕಾಂತಾರ’ ಗೆದ್ದಿದ್ದು ಯಾಕೆ? ಬಹಿರಂಗ ವೇದಿಕೆಯಲ್ಲಿ ಕಾರಣ ತಿಳಿಸಿದ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಅವರಿಗೆ ಸಿದ್ದಶ್ರೀ ಪ್ರಶಸ್ತಿ ನೀಡಲಾಗಿದೆ. ಹೋದಲ್ಲೆಲ್ಲ ಅಭಿಮಾನಿಗಳು ಸಾಕಷ್ಟು ಪ್ರೀತಿ ತೋರಿಸುತ್ತಿದ್ದಾರೆ. ರಿಷಬ್ ಅವರ ಮುಂದಿನ ಸಿನಿಮಾ ಯಾವುದು ಎಂದು ತಿಳಿದುಕೊಳ್ಳಲು ಸಿನಿಪ್ರಿಯರು ಕಾತರರಾಗಿದ್ದಾರೆ. ಈ ಬಗ್ಗೆ ಸದ್ಯಕ್ಕೆ ರಿಷಬ್ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಶೀಘ್ರವೇ ಘೋಷಣೆ ಆಗಲಿ ಎಂದು ಫ್ಯಾನ್ಸ್ ನಿರೀಕ್ಷಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.