ಶಿವಮೊಗ್ಗ:
ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಬೆಳಲಕಟ್ಟೆಯಲ್ಲಿ ನಡೆದಿದೆ.
ಮೇಲಿನ ಹನಸವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಲಕಟ್ಟೆ ಗ್ರಾಮದ ನಿವಾಸಿ ಮಹೇಶಪ್ಪ (60) ಮೃತ ವ್ಯಕ್ತಿಯಾಗಿದ್ದು, ಬಿಕ್ಕೋನಹಳ್ಳಿಯ ಮಗಳ ಮನೆಯಿಂದ ಮಹೇಶಪ್ಪ ದ್ವಿಚಕ್ರ ವಾಹನದಲ್ಲಿ ಬೆಳಲಕಟ್ಟೆಕ್ಕೆ ತೆರಳುತ್ತಿದ್ದರು. ಈ ವೇಳೆ ಅವರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಪೆಟ್ರೋಲ್ ಎರಚಿ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಲಾಗಿದೆ.
ಬೆಂಕಿಯ ಕೆನ್ನಾಲಗೆಗೆ ಕೆಲವೇ ನಿಮಿಷದಲ್ಲಿ ಮಹೇಶಪ್ಪ ಸಂಪೂರ್ಣ ಸುಟ್ಟು ಹೋಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮಹೇಶಪ್ಪ ಅವರನ್ನು ಕೂಡಲೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹೇಶಪ್ಪ ಕೊನೆಯುಸಿರೆಳೆದಿದ್ದಾರೆ.ಇನ್ನು, ಬೆಂಕಿಯ ತೀವ್ರತೆಗೆ ದ್ವಿಚಕ್ರ ವಾಹನ ಸಂಪೂರ್ಣ ಸುಟ್ಟು ಹೋಗಿದೆ.
ಮಹೇಶಪ್ಪ ಮತ್ತು ಅವರ ಸಹೋದರ ಕುಮಾರ್ ಮಧ್ಯೆ ಆಸ್ತಿ ವಿವಾದವಿತ್ತು. ಇದೆ ಕಾರಣಕ್ಕೆ ಕುಮಾರ್ ಮತ್ತು ಆತನ ಪುತ್ರ ಕಾರ್ತಿಕ್ ಎಂಬುವವರು ಕೃತ್ಯ ಎಸಗಿದ್ದಾರೆ ಎಂದು ಮಹೇಶಪ್ಪ ಅವರ ಕುಟುಂಬ ಆರೋಪಿಸಿ ದೂರು ನೀಡಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಆರೋಪಿ ಕಾರ್ತಿಕ್ ಮತ್ತು ಕುಮಾರಪ್ಪ ತಲೆ ಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ.