ಶಿವಮೊಗ್ಗ: ಆದಿಚುಂಚನಗಿರಿ ಶಾಲೆಯಲ್ಲಿ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರವನ್ನು ತೆಗೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯಲೋಪ ಎಸಗಿದ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಅಮಾನತು ಮಾಡಿರುವುದಾಗಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಈ ಕುರಿತು ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನಿವಾರ ಪ್ರಕರಣದ ಕುರಿತು ಸಂಬಂಧಪಟ್ಟ ಅಧಿಕಾರಿಗಳ ವಿಚಾರಣೆ ಹಾಗೂ ಸಿಸಿಟಿವಿ ವಿಡಿಯೋವನ್ನು ಸಂಪೂರ್ಣವಾಗಿ ಚೆಕ್ ಮಾಡಲಾಗಿದೆ. ಸಿಸಿಟಿವಿ ವಿಡಿಯೋದಲ್ಲಿ ಇದು ಸ್ಪಷ್ಟವಾಗಿ ಕಾಣುತ್ತೆ. ಒಬ್ಬ ವಿದ್ಯಾರ್ಥಿ ಬರುತ್ತಾನೆ. ಇಬ್ಬರು ಸೆಕ್ಯೂರಿಟಿಗಳಿಗೆ ಆ ವಿದ್ಯಾರ್ಥಿಯೇ ಜನಿವಾರ ತೆಗೆದು ತೋರಿಸುತ್ತಾನೆ. ಇದಕ್ಕೆ ಅನುಮತಿ ಇದೆಯೇ? ಎಂದು ಕೇಳುತ್ತಾನೆ. ಆಗ ಸೆಕ್ಯೂರಿಟಿಯವರು ಇಲ್ಲ ಎಂದಾಗ, ಇವನು ಪಕ್ಕಕ್ಕೆ ಹೋಗಿ ಜನಿವಾರ ತೆಗೆದು ಬರುತ್ತಾನೆ. ಇನ್ನೊಬ್ಬ ವಿದ್ಯಾರ್ಥಿ ಇದೇ ರೀತಿ ಬಂದಾಗ ಸೆಕ್ಯೂರಿಟಿಯವರು ಜನಿವಾರ ಹಾಕಿಕೊಂಡು ಪರೀಕ್ಷಾ ಕೊಠಡಿಗೆ ತೆರಳಲು ಅವಕಾಶ ಇಲ್ಲ ಎನ್ನುತ್ತಾರೆ. ಇದಕ್ಕೆ ವಿದ್ಯಾರ್ಥಿ ಇಲ್ಲ, ನಾನು ಜನಿವಾರ ತೆಗೆಯುವುದಿಲ್ಲ ಎನ್ನುತ್ತಾನೆ. ಆಗ ಸೆಕ್ಯೂರಿಟಿಯವರು ಅಲ್ಲೇ ಐದು ನಿಮಿಷ ಕುಳಿತುಕೊಳ್ಳಿ ಎಂದು ಹೇಳುತ್ತಾರೆ ಎಂದರು.
ಆಗ ಕಾಲೇಜಿನ ಪ್ರಾಂಶುಪಾಲರು ಅಲ್ಲಿ ಬಂದು ವಿದ್ಯಾರ್ಥಿ ಕುಳಿತುಕೊಂಡಿರುವ ಕುರಿತು ವಿಚಾರಿಸಿದಾಗ, ಜನಿವಾರದ ವಿಚಾರವನ್ನು ಸೆಕ್ಯೂರಿಟಿಯವರು ಹೇಳಿದ್ದಾರೆ. ಆಗ ಪ್ರಾಂಶುಪಾಲರು ಸಂಪ್ರದಾಯಕ್ಕೆ ಅಡ್ಡಿಪಡಿಸುವ ಯಾವುದೇ ಕ್ರಮ ಇಲ್ಲ. ವಿದ್ಯಾರ್ಥಿ ಹೋಗಿ ಪರೀಕ್ಷೆ ಬರೆಯಬಹುದು ಎಂದು ಹೇಳಿ ವಿದ್ಯಾರ್ಥಿಯನ್ನು ಪರೀಕ್ಷೆ ಬರೆಯಲು ಒಳಗೆ ಕಳುಹಿಸಿಕೊಡುತ್ತಾರೆ. ಯಾವುದೇ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ತೊಂದರೆಯಾಗಿಲ್ಲ. ಅವರು ಸರಿಯಾದ ಸಮಯಕ್ಕೆ ಹೋಗಿ ಪರೀಕ್ಷೆ ಬರೆದಿದ್ದಾರೆ. ಆದರೆ, ಖಂಡಿತವಾಗಿಯೂ ಅವರ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾದಂತೆ ಆಗಿದೆ. ಇದೇ ಕಾರಣಕ್ಕೆ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.
ಮುಂದಿನ ಹಂತದ ತನಿಖೆಗೆ ಆದೇಶ ಮಾಡಲಾಗಿದೆ. ಕಾಲೇಜಿನ ಪ್ರಾಂಶುಪಾಲರು ಹಾಗೂ ಡಿಡಿಪಿಐ ಅವರ ಸಮಯ ಪ್ರಜ್ಞೆಯಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಯಾವುದೇ ತೊಂದರೆಯಾಗಿಲ್ಲ. ಆದರೆ, ಇಬ್ಬರು ಸೆಕ್ಯೂರಿಟಿ ಅವರ ತಿಳುವಳಿಕೆಯ ಕೊರತೆಯಿಂದ ಈ ರೀತಿಯ ಘಟನೆ ಆಗಿರುವುದು ಕಂಡುಬಂದಿದೆ ಎಂದು ಹೇಳಿದರು.
ಬ್ರಾಹ್ಮಣ ಮಹಾಸಭಾದ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಇಲ್ಲಿ ಜನಿವಾರ ಕಟ್ ಮಾಡಲಾಗಿಲ್ಲ. ಜನಿವಾರವನ್ನು ವಿದ್ಯಾರ್ಥಿಯ ಕೈಯಿಂದಲೇ ತೆಗೆಸಲಾಗಿದೆ. ಪರೀಕ್ಷೆ ನಡೆಯುತ್ತಿರುವುದರಿಂದ ವಿಡಿಯೋವನ್ನು ನೀಡಲ್ಲ. ಅವರು ಬಂದ್ರೆ ತೋರಿಸುವುದಾಗಿ ತಿಳಿಸಿದರು.
ಜನಿವಾರ ಪ್ರಕರಣದ ಕುರಿತು ಸೂಕ್ತ ತನಿಖೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಲಾಗಿದೆ. ಇಲ್ಲಿ ಕಟ್ ಮಾಡಿ, ಕಸದ ಬುಟ್ಟಿಗೆ ಎಸೆಯುವ ಯಾವ ಕೆಲಸ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಆದರೆ ಜನಿವಾರ ತೆಗೆದಿಟ್ಟು ಬನ್ನಿ ಎನ್ನುವುದು ಸಹ ಒಪ್ಪುವಂತದ್ದು ಅಲ್ಲ. ಈ ಜನಿವಾರದ ಕುರಿತು ಸೂಕ್ತ ತನಿಖೆ ನಡೆಸಲಾಗುವುದು ಎಂದರು. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ರಕ್ಷಕ ದಳದ ಇಬ್ಬರು ಸಿಬ್ಬಂದಿಯನ್ನು ಗೃಹ ರಕ್ಷಕ ದಳದ ಕಮಾಂಡೆಂಟ್ ಅಮಾನತು ಮಾಡಿದ್ದಾರೆ. ಅಮಾನತು ಕುರಿತ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.