Home ಬೆಂಗಳೂರು ನಗರ ಭ್ರಷ್ಟಾಚಾರದ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಬೊಮ್ಮಾಯಿಗೆ ಸಿದ್ದರಾಮಯ್ಯ ಸವಾಲು

ಭ್ರಷ್ಟಾಚಾರದ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಬೊಮ್ಮಾಯಿಗೆ ಸಿದ್ದರಾಮಯ್ಯ ಸವಾಲು

54
0
Siddaramaiah challenges Bommai for open discussion on corruption... In Badami

ಬೆಂಗಳೂರು:

ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭ್ರಷ್ಟಾಚಾರದ ಬಗ್ಗೆ ತಮ್ಮ ಆಯ್ಕೆಯ ಸಮಯ ಮತ್ತು ಸ್ಥಳದಲ್ಲಿ ಬಹಿರಂಗ ಚರ್ಚೆಗೆ ಬರಲಿ ಎಂದು ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಭಾನುವಾರ ಸವಾಲು ಹಾಕಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರ್ಕಾರ ಜನಸ್ಪಂದನ ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಮಾಡಿ, ಸುಳ್ಳೆ ನಮ್ಮ ಸ್ಪಂದನೆ- ಜನರಿಗೆ ಟೋಪಿ ಹೊಲಿಯುವುದೆ ನಮ್ಮ ಸಾಧನೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

ವೇದಿಕೆಯ ಮೇಲಿದ್ದವರು ಕಾರ್ಯಕ್ರಮದ ಉದ್ದಕ್ಕೂ ಸುಳ್ಳುಗಳನ್ನು ಹೇಳಿದ್ದಾರೆ. ಬಿಜೆಪಿಯವರ ಸುಳ್ಳು ಮಾತುಗಳನ್ನು ಕೇಳಿ ಕುರ್ಚಿಗಳನ್ನು ಅರ್ಧಂಬರ್ಧ ಭರ್ತಿ ಮಾಡಿದ್ದ ಜನರು ಬೇಸರದಿಂದ ಎದ್ದು ಹೊರ ನಡೆದದ್ದು ಕಾಣುತ್ತಿತ್ತು. ಆದರೂ ಸುಳ್ಳು ನಿಲ್ಲಲಿಲ್ಲ ಎಂದರು.

Also Read: Siddaramaiah challenges Bommai for open discussion on corruption

ಬಸವರಾಜ ಬೊಮ್ಮಾಯಿಯವರು ತಾವೊಬ್ಬ ಮರ್ಯಾದಸ್ತರ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ, ಈ ರಾಜ್ಯವು ನೈತಿಕತೆಯನ್ನು ಬಯಸುತ್ತದೆ ಎಂಬುದನ್ನು ಪಕ್ಕಕ್ಕೆ ಇಟ್ಟು ಸುಳ್ಳುಗಳನ್ನು ಪುಂಖಾನುಪುಂಖವಾಗಿ ಗಾಳಿಯಲ್ಲಿ ತೇಲಿಬಿಟ್ಟರು. ಅವುಗಳಲ್ಲಿ ಎರಡು ಸುಳ್ಳುಗಳಿಗೆ ನಾನು ಪ್ರತಿಕ್ರಿಯಿಸುತ್ತೇನೆ. ಉಳಿದ ಸುಳ್ಳುಗಳು ಪ್ರತಿಕ್ರಿಯೆಗೂ ಅರ್ಹವಲ್ಲ ಎಂದರು.

“ರಾಜ್ಯದಲ್ಲಿ ಐ.ಎ.ಎಸ್.ಅಧಿಕಾರಿಯಾಗಿದ್ದ ಅನುರಾಗ್ ತಿವಾರಿಯವರ ಸಾವು ಯಾರದೋ ಪಿತೂರಿಯಿಂದ ನಡೆದಿದೆ. ಅವರು ಯಾವುದೊ ಹಗರಣವನ್ನು ತನಿಖೆ ಮಾಡುತ್ತಿದ್ದರು ಅದಕ್ಕಾಗಿ ಕೊಲೆ ನಡೆದಿದೆ ಇತ್ಯಾದಿಯಾಗಿ ಹೇಳಿದ್ದಾರೆ. ಬಸವರಾಜ ಬೊಮ್ಮಾಯಿಯವರು ತಾನೊಬ್ಬ ಮುಖ್ಯಮಂತ್ರಿ, ತಾನು ಆಡುವ ಪ್ರತಿ ಮಾತಿಗೊಂದು ಘನತೆ ಇರಬೇಕು ಎಂಬುದನ್ನು ಕಾಲ ಕೆಳಗೆ ತುಳಿದು ಈ ಮಾತನ್ನು ಹೇಳಿದ್ದಾರೆ,” ಎಂದು ಸಿದ್ದರಾಮಯ್ಯ ಹೇಳಿದರು.

“ಅನುರಾಗ್ ತಿವಾರಿಯವರು ಉತ್ತರ ಪ್ರದೇಶದ ಲಖನೌನಲ್ಲಿನ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಕುರಿತು ಉತ್ತರ ಪ್ರದೇಶದ ವಿಶೇಷ ತನಿಖಾ ದಳ ತನಿಖೆಗೆ ತೆಗೆದುಕೊಂಡಿತ್ತು. ಶೋಭಾ ಕರಂದ್ಲಾಜೆ ಯವರು ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಬೇಕೆಂದು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರಿಗೆ ಫೋನ್ ಕರೆ ಮಾಡಿದ್ದರು,”

“…ಶೋಭಾ ಕರಂದ್ಲಾಜೆಯವರ ಮನವಿ ಆಧರಿಸಿ ಅವರು ಈ ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಿದ್ದಾರೆ. 2018 ರಲ್ಲಿ ಸಿ.ಬಿ.ಐ.ರಾಜ್ಯದಿಂದಲೂ ಮಾಹಿತಿ ಸಂಗ್ರಹಿಸಿದೆ. ಬಹುಶಃ ಅದು ರಾಜ್ಯಕ್ಕೂ ಬಂದು ಪರಿಶೀಲನೆ ನಡೆಸಿದೆ. ಪ್ರಕರಣವನ್ನು ಸಿ.ಬಿ.ಐ. ಗೆ ವಹಿಸಿ, 4 ವರ್ಷಗಳಾಗಿವೆ. ತನಿಖೆಯ ಫಲಿತಾಂಶಗಳೇನು ಎಂದು ಈ ವರೆಗೆ ಮಾಹಿತಿ ಇಲ್ಲ,”

“…ಹಾಗಾಗಿ ಬಸವರಾಜ ಬೊಮ್ಮಾಯಿ ಯವರು ಜನರ ಮುಂದೆ ಸಿ.ಬಿ.ಐ. ತನಿಖೆಯ ಫಲಿತಾಂಶ ಏನು? ಎಂಬುದರ ಕುರಿತು ಮಂಡಿಸಬೇಕು. ಇಲ್ಲದಿದ್ದರೆ ರಾಜ್ಯದ ಜನರ ಮುಂದೆ ಬೇಷರತ್ ಆಗಿ ಕ್ಷಮೆ ಕೇಳಬೇಕು,” ಎಂದು ಸಿದ್ದರಾಮಯ್ಯ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಪರೇಶ್ ಮೇಸ್ತಾ ಕೊಲೆಯ ಪ್ರಮುಖ ಆರೋಪಿಯಾಗಿರುವ ಆಜಾದ್ ಅಣ್ಣಿಗೇರಿ ಎಂಬಾತನಿಗೆ ಇತ್ತೀಚೆಗೆ ತಾನೆ ವಕ್ಫ್ ಬೋರ್ಡ್‍ನಲ್ಲಿ ಉಪಾಧ್ಯಕ್ಷ ಪದವಿ ನೀಡಲಾಗಿತ್ತು. ನಾವುಗಳು ಗಲಾಟೆ ಮಾಡಿದ ಮೇಲೆ ಅದನ್ನು ಹಿಂತೆಗೆದುಕೊಂಡರು.

“ಅನ್ನಭಾಗ್ಯ ಯೋಜನೆಯ ಬಗ್ಗೆ ಕೂಡ ಅವರು ಹಗುರವಾಗಿ ಮಾತನಾಡಿದ್ದಾರೆ. ಬಿಜೆಪಿ ಯವರೆಲ್ಲರೂ ಈ ವಿಚಾರವನ್ನು ಪದೆ ಪದೆ ಪ್ರಸ್ತಾಪ ಮಾಡಿದ್ದಾರೆ. ಮೋದಿಯವರ ಅಕ್ಕಿಗೆ ಸಿದ್ದರಾಮಯ್ಯನವರ ಚೀಲ ಎಂದು ವ್ಯಂಗ್ಯ ಮಾಡಿದ್ದಾರೆ…”

“…ಹಾಗಿದ್ದರೆ ಬೊಮ್ಮಾಯಿ ಯವರಿಗೆ ಸರಳವಾದ ಪ್ರಶ್ನೆಯೊಂದನ್ನು ಕೇಳುತ್ತೇನೆ. ಇದನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ದಾಖಲೆಗಳನ್ನು ಪರಿಶೀಲಿಸಿ ಅಥವಾ ಆರ್ಥಿಕ ಇಲಾಖೆಯ ಅಧಿಕಾರಿಗಳನ್ನು ಕೇಳಿ ಸತ್ಯವನ್ನು ಅವರು ಜನರ ಮುಂದೆ ಇಡಬೇಕು…”

“…ನನ್ನ ಪ್ರಶ್ನೆ ಸರಳವಾದುದು 2008-09 ರಿಂದ 2012-13 ರವರೆಗೆ ಬಿಜೆಪಿ ಸರ್ಕಾರವು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ವತಿಯಿಂದ ಖರ್ಚು ಮಾಡಿದ್ದು ಕೇವಲ ರೂ.4913 ಕೋಟಿಯಾಗಿದ್ದರೆ, 2013-14 ರಿಂದ 2017-18 ರವರೆಗೆ ನಮ್ಮ ಕಾಂಗ್ರೆಸ್ ಸರ್ಕಾರ ರೂ.18,000ಗೂ ಕೋಟಿಗಳಿಗೂ ಹೆಚ್ಚಿನ ಮೊತ್ತವನ್ನು ಬಜೆಟ್ ನಲ್ಲಿ ಒದಗಿಸಿದ್ದು ಏಕೆ?…”

“…ಮೋದಿಯವರು ಅಕ್ಕಿ ಕೊಟ್ಟಿದ್ದರೆ ನಮ್ಮ ಕಾಂಗ್ರೆಸ್ ಸರ್ಕಾರ ಯಾಕೆ ಇಷ್ಟೊಂದು ಹಣವನ್ನು ಆಹಾರ ಇಲಾಖೆಯ ವತಿಯಿಂದ ಖರ್ಚು ಮಾಡಬೇಕಾಗಿತ್ತು?…”

“…ಅನ್ನಭಾಗ್ಯ ಯೋಜನೆಯಡಿ ನಾವು 2013 ರಿಂದ ಮನೆಯಲ್ಲಿ ಎಷ್ಟೇ ಸದಸ್ಯರಿದ್ದರೂ ಗರಿಷ್ಠ 30 ಕೆ.ಜಿ. ಯವರೆಗೆ ಅಕ್ಕಿ ಕೊಡುತ್ತಿದ್ದೆವು. ಏಕ ಸದಸ್ಯರಿದ್ದರೆ 10 ಕೆ.ಜಿ. ಅಕ್ಕಿ ಕೊಡುತ್ತಿದ್ದೆವು. 2015 ರಿಂದ 2017 ರ ಮಾರ್ಚ್ ವರೆಗೆ ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿ, ಉಪ್ಪು, 1 ಕೆ.ಜಿ ಅಡುಗೆ ಎಣ್ಣೆ ನೀಡುತ್ತಿದ್ದೆವು. ಇದಕ್ಕೆ ಕಾರಣ ಏನೆಂದರೆ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರವು ಆಹಾರ ಭದ್ರತಾ ಕಾಯ್ದೆಯಡಿ ಪ್ರತಿಯೊಬ್ಬರಿಗೆ 5ಕೆ.ಜಿ. ಆಹಾರ ಧಾನ್ಯಗಳನ್ನು ಮಾತ್ರ ನೀಡಬೇಕೆಂದು ಕಡ್ಡಾಯಗೊಳಿಸಿತ್ತು…”

“…ಈ ಅಕ್ಕಿ ಸಾಕಾಗುವುದಿಲ್ಲವೆಂಬ ಅಭಿಪ್ರಾಯಗಳು ಕೇಳಿ ಬಂದ ಕಾರಣ 2017 ರ ಏಪ್ರಿಲ್ ನಿಂದ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ 7 ಕೆ.ಜಿ. ಅಕ್ಕಿ, 2 ಕೆ.ಜಿ. ಗೋಧಿ, ಜೊತೆಗೆ 1 ಕೆ.ಜಿ. ತೊಗರಿಬೇಳೆಯನ್ನು ಸಹ ನೀಡಲು ಪ್ರಾರಂಭಿಸಿದೆವು…”

“…ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 7 ಕೆ.ಜಿ. ಅಕ್ಕಿಯ ಬದಲಾಗಿ, ಅಕ್ಕಿ, ರಾಗಿ ಸೇರಿ 5 ಕೆ.ಜಿ.ಗೆ ಇಳಿಕೆ ಮಾಡಿದೆ. ಕೊರೋನಾ ಇದ್ದ ಕಾರಣಕ್ಕೆ 5 ಕೆ.ಜಿ. ಅಕ್ಕಿಯನ್ನು ನೀಡುತ್ತಿದೆ…”

“…ಕಾಂಗ್ರೆಸ್ ಸರ್ಕಾರ ಕೊಡುತ್ತಿದ್ದ ತೊಗರಿಬೇಳೆಯನ್ನು ಬಿಜೆಪಿ ಸರ್ಕಾರ 2020 ರ ಏಪ್ರಿಲ್‍ನಿಂದಲೇ ನಿಲ್ಲಿಸಿದೆ. ಈ ಎಲ್ಲ ವಿಚಾರಗಳ ಕುರಿತು ಬೊಮ್ಮಾಯಿಯವರು ಚರ್ಚಿಸಲು ಸಿದ್ಧರಿದ್ದರೆ ನಾನು ಸದನದಲ್ಲೇ ಚರ್ಚಿಸುತ್ತೇನೆ…”

“…ಇಷ್ಟು ವಿಚಾರ ಮುಖ್ಯಮಂತ್ರಿ ಆದವರಿಗೆ ತಿಳಿದಿರಬೇಕು. ಅವರಿಗೆ ಗೊತ್ತಿಲ್ಲದಿದ್ದರೆ ನನ್ನನ್ನಾದರೂ ಕೇಳಿದ್ದರೆ ತಕ್ಷಣವೇ ಮಾಹಿತಿ ಕೊಡುತ್ತಿದ್ದೆ. ಅಂಧಕಾರದ ಕೂಪದಲ್ಲಿ ಸಿಕ್ಕಿ ಬಿದ್ದವರಿಗೆ ಜಗತ್ತೆಲ್ಲವೂ ಕತ್ತಲೆಮಯವಾಗಿರುತ್ತದೆಂಬಂತೆ ಬೊಮ್ಮಾಯಿವರು ವರ್ತಿಸುತ್ತಿದ್ದಾರೆ…”

“…ಮುಖ್ಯಮಂತ್ರಿಯವರು ಹಾಗೂ ಬಿಜೆಪಿಯವರು ಇನ್ನು ಮುಂದೆಯಾದರೂ ಸುಳ್ಳು ಹೇಳುವುದನ್ನು ನಿಲ್ಲಿಸಿ ತಾವು ಮಾಡಿರುವ ಘನಂದಾರಿ ಅಭಿವೃದ್ಧಿ ಕೆಲಸಗಳನ್ನು ಸ್ಪಂದನವೆಂಬ ಹೆಸರಿನ ಸಭೆಗಳಲ್ಲಿ ಅಥವಾ ಮಾಧ್ಯಮಗಳ ಮುಂದೆ ಆಡಲಿ…”

ನಿನ್ನೆ ದೊಡ್ಡಬಳ್ಳಾಪುರದಲ್ಲಿ ಸುಳ್ಳು ಹೇಳುವುದಕ್ಕೆ ಸ್ಪರ್ಧೆಗೆ ಬಿದ್ದವರಂತೆ ವರ್ತಿಸಿದ ಬಿಜೆಪಿಯವರು ಹಾಗೂ ಮುಖ್ಯಮಂತ್ರಿಗಳು ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ,” ಎಂದು ಸಿದ್ದರಾಮಯ್ಯ ಹೇಳಿದರು.

LEAVE A REPLY

Please enter your comment!
Please enter your name here