Home ತುಮಕೂರು ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಡಾ: ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರು: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಡಾ: ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರು: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

94
0
Sri Shivakumara Swamiji's name for mid-day meal programme: CM Bommai

ತುಮಕೂರು:

ಶಿವಕುಮಾರ ಸ್ವಾಮೀಜಿಗಳ ಜಯಂತಿಯನ್ನು ದಾಸೋಹ ದಿನ ಎಂದು ಈಗಾಗಲೇ ಸರ್ಕಾರ ಆಚರಿಸುತ್ತಿದೆ. ಮಧ್ಯಾಹ್ನದ ಬಿಸಿ ಊಟದ ಯೋಜನೆಗೆ ಡಾ: ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರನ್ನಿಡಲು ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಆಯೋಜಿಸಿದ್ದ ಡಾ: ಶ್ರೀ ಶಿವಕುಮಾರ ಮಹಾಶಿವಯೋಗಿಗಳ 115ನೇ ಜಯಂತೋತ್ಸವ ಹಾಗೂ “ ಗುರುವಂದನಾ ಮಹೋತ್ಸವದಲ್ಲಿ ಕೇಂದ್ರದ ಗೃಹ ಹಾಗೂ ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರೊಂದಿಗೆ ಪಾಲ್ಗೊಂಡು ಮಾತನಾಡಿದರು.

ಆಡಳಿತಗಾರರು ಶ್ರೀ ಮಠವನ್ನು ಶ್ರದ್ಧಾ ಭಕ್ತಿಯಿಂದ ಕಂಡಿದ್ದಾರೆ. ನಮ್ಮ ಸರ್ಕಾರವೂ ಅತ್ಯಂತ ಶ್ರದ್ಧೆಯಿಂದ ಕಾಣುತ್ತಿದೆ. ಭಕ್ತಿಯಿಂದ ಬಸವಣ್ಣನವರ ದಾಸೋಹ, ಶಿಕ್ಷಣ, ಆರೋಗ್ಯ ತತ್ವಗಳಿಗೆ ನಮ್ಮ ಸರ್ಕಾರ ಮಹತ್ವ ನೀಡಿದೆ. ಸರ್ವೋದಯ ಕಾರ್ಯಕ್ರಮಕ್ಕೆ 60 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚು ಅನುದಾನವನ್ನು ಈ ವರ್ಷದ ಬಜೆಟ್ ನಲ್ಲಿ ಮೀಸಲಿರಿಸಿದೆ. ಜನಕಲ್ಯಾಣಕ್ಕಾಗಿ ಹಾಗೂ ಜನರ ಪರವಾಗಿ ನಮ್ಮ ಸರ್ಕಾರ ಕೆಲಸ ಮಾಡಲಿದೆ. ನಿಮ್ಮ ವಿಶ್ವಾಸ ಗಳಿಸುವ ರೀತಿಯಲ್ಲಿ ಕೆಲಸ ಮಾಡುತ್ತದೆ . ಬಡವರು ದೀನದಲಿತರು, ಹೆಣ್ಣು ಮಕ್ಕಳಿಗೆ ಕಾರ್ಯಕ್ರಮಗಳ ಅನುಷ್ಠಾನ ಮಾಡಿ ನಿಮ್ಮ ಪ್ರೀತಿ ವಿಶ್ವಾಸವನ್ನು ಗಳಿಸಿ ನಿಮ್ಮ ಮುಂದೆ ಬರುತ್ತೇವೆ ಎಂದರು.

ಕೇಂದ್ರ ಸಚಿವರ ಆಗಮನ ನಮ್ಮಲ್ಲಿ ಸಂಚಲನ ಮೂಡಿಸಿದೆ. ಜನರು ಅವರ ಮೇಲೆ ಪ್ರೀತಿ ಇರಿಸಿದ್ದಾರೆ ಎಂದರು.

ಶಿವಕುಮಾರ ಸ್ವಾಮೀಜಿಗಳ ಸ್ಪೂರ್ತಿ: ಈ ನೆಲದಲ್ಲಿ ಅವರ ಸ್ಫೂರ್ತಿ, ಪ್ರೇರಣೆ ಇದೆ. ಇಲ್ಲಿ ಬಂದರೆ ಮನಸ್ಸಿಗೆ ಶಾಂತಿ, ಬದುಕಿಗೆ ದಾರಿ ಸಿಗುವ ಶಕ್ತಿ ಸಿದ್ದಗಂಗಾ ಕ್ಷೇತ್ರದಲ್ಲಿ ಇದೆ. ಅದೇ ದಾರಿಯಲ್ಲಿ ಸಿದ್ದಲಿಂಗಸ್ವಾಮಿಗಳು ಶಿವಕುಮಾರ ಸ್ವಾಮಿಗಳ ಪರಂಪರೆಯನ್ನು ಅತ್ಯಂತ ಪ್ರಾಮಾಣಿಕವಾಗಿ ದಕ್ಷತೆಯಿಂದ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಯೋಗ್ಯವಾಗಿ ಮುನ್ನಡೆಸುತ್ತಿದ್ದಾರೆ ಎಂದರು.

ಅನನ್ಯ ಸೇವೆಯ ದಾಖಲೆ:

ಶಿವಕುಮಾರ ಸ್ವಾಮೀಜಿ ಅವರು ಸುಮಾರು 88 ವರ್ಷಗಳ ಕಾಲ ಈ ನಾಡಿನ ಸೇವೆಯನ್ನು ಮಠದ ಮುಖಾಂತರ ಮಾಡಿರುವುದು ಒಂದು ದಾಖಲೆ. ಯಾವುದೇ ಪರಪೂಜ್ಯರು ಇಷ್ಟು ದೀರ್ಘಕಾಲದ ಸೇವೆಯನ್ನು ಇಡೀ ಭಾರತ ದೇಶದಲ್ಲಿ ಮಾಡಿಲ್ಲ ಎನ್ನುವುದು ನಮ್ಮೆಲ್ಲರಿಗೂ ಅಭಿಮಾನದ ಸಂಗತಿ. ಅದಕ್ಕಾಗಿಯೇ ಅವರಿಗೆ ನಡೆದಾಡುವ ದೇವರು ಎಂಬ ಬಿರುದು ಬಂದಿದೆ. ಅವರು ಹಚ್ಚಿದ ಒಲೆಯ ಕಿಚ್ಚು ಸುಮಾರು 100 ವರ್ಷಕ್ಕಿಂತ ಹೆಚ್ಚಿನದಾಗಿದ್ದು, ಇಂದಿಗೂ ಉರಿಯುತ್ತಿದೆ. ಎಲ್ಲಿಯವರೆಗೆ ಈ ಅಡಿಗೆ ಒಲೆಯ ಕಿಚ್ಚು ಉರಿಯುತ್ತಿರುತ್ತದೆ, ಅಲ್ಲಿಯವರೆಗೆ ಬಡ ಮಕ್ಕಳ ಹೊಟ್ಟೆ ತಣ್ಣಗಾಗುತ್ತದೆ ಎಂದರು. ನಾವೆಲ್ಲರೂ ಕೋಟಿ ಕೋಟಿ ಗುರುವಂದನೆಗಳನ್ನು ಸದಾ ಸಲ್ಲಿಸಬೇಕು. ಅನ್ನ, ಅಕ್ಷರ, ಆಶ್ರಯಗಳನ್ನು ಅಕ್ಷರಶಃ ಪಾಲಿಸಿದ ದೇವರು ಶಿವಕುಮಾರ ಸ್ವಾಮೀಜಿ ಅವರು. ಅವರು ನಮ್ಮ ನಡುವೆ ಜೀವಂತವಾಗಿದ್ದು, ಪ್ರೇರಣೆ, ಆಶೀರ್ವಾದ ನೀಡುತ್ತಿದ್ದಾರೆ.

ಸರ್ವೋದಯ ಮತ್ತು ಅಂತ್ಯೋದಯ ಪರಿಕಲ್ಪನೆ: ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವನು ನಿಜ ಸಾಧಕ ಎಂದು ಸ್ವಾಮಿ ವಿವೇಕಾನಂದರು ಹೇಳಿದಂತೆ ಅವರು ಬದುಕಿದ್ದಾರೆ. ಶಿವಕುಮಾರ ಸ್ವಾಮೀಜಿ ಅವರು ಬದುಕಿನ ದಾರಿಯನ್ನು ಕಟ್ಟಿಕೊಟ್ಟಿರುವ ಸ್ವಾಮೀಜಿಗಳು. ದೂರದ ಉತ್ತರ ಕರ್ನಾಟಕದ ಮಕ್ಕಳು, ಎಲ್ಲಾ ಸಮುದಾಯದ 10 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಸಲಹುವುದು ಸುಲಭದ ಮಾತಲ್ಲ. ದೈವಶಕ್ತಿ ನಮ್ಮೆಲ್ಲದಿಗೂ ಮಾರ್ಗದರ್ಶನ ಮಾಡುತ್ತಿದೆ. ಅವರ ಶ್ರದ್ಧೆ, ನಿಷ್ಠೆ ಮತ್ತು ಪರಿಶ್ರಮ ಅವರ ಧ್ಯೇಯ. ಅದರ ಪರಿಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಶಿವಕುಮಾರ ಸ್ವಾಮೀಜಿ ಅವರಿಗೆ ಜಾತಿ ಕುಲ ಎಂದು ನೋಡದೆ, ಎಲ್ಲ ವರ್ಗದ ಜನರನ್ನು ಪ್ರೀತಿ ಮಾಡಿ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಸರ್ವೋದಯ ಮತ್ತು ಅಂತ್ಯೋದಯ ಪರಿಕಲ್ಪನೆ ಈ ಮಠದಲ್ಲಿ ನಿತ್ಯ ನಿರಂತರವಾಗಿ ನಡೆಯುತ್ತಿದೆ. ಅಂತ್ಯೋದಯ ಪರಿಕಲ್ಪನೆಯಲ್ಲಿ ಅತ್ಯಂತ ಕಟ್ಟ ಕಡೆಯ ಮನುಷ್ಯನಿಗೆ ಇಲ್ಲಿ ಸ್ಥಾನವಿದೆ. ಅವನು ತನ್ನ ಬದುಕು ಪ್ರಾರಂಭಿಸಲು ಎಲ್ಲ ರೀತಿಯ ವ್ಯವಸ್ಥೆ ಶ್ರೀ ಮಠದಲ್ಲಿದೆ ಎಂದು ಸಿಎಂ ಹೇಳಿದರು.

LEAVE A REPLY

Please enter your comment!
Please enter your name here