ಬೆಂಗಳೂರು : ಜನಗಣತಿ ಮಾಡುವುದು ಕೇಂದ್ರ ಸರಕಾರದ ಜವಾಬ್ದಾರಿ. ಅದಕ್ಕಾಗಿಯೇ ಸರಕಾರದ ಅಧೀನದಲ್ಲಿ ಸೆನ್ಸಸ್(ಜನ ಗಣತಿ) ಆಯೋಗವಿದೆ. ರಾಜ್ಯಗಳಿಗೆ ಜನ ಗಣತಿ ಮಾಡುವ ಅಧಿಕಾರವಿಲ್ಲ. ಆದರೂ, ಕೆಲವು ರಾಜ್ಯಗಳಲ್ಲಿ ಜಾತಿ ಗಣತಿಗಳನ್ನು ಮಾಡಿದ್ದಾರೆ. ಈಗ ಕೇಂದ್ರ ಸರಕಾರ ಮಾಡುವಂತಹ ಜನ ಗಣತಿ ಹಾಗೂ ಜಾತಿ ಗಣತಿಯಲ್ಲಿ ಎಲ್ಲ ವಿಚಾರಗಳು ಸೇರಲಿವೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ಅವರು ತಿಳಿಸಿದರು.
ಸಮಾಜದಲ್ಲಿರುವ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರಕಾರವು ದೇಶದಲ್ಲಿ ಜಾತಿ ಗಣತಿ ನಡೆಸಲು ನಿರ್ಧರಿಸಿದೆ ಎಂದು ಅವರು ತಿಳಿಸಿದರು.
ಶನಿವಾರ ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಹಿಂದುಳಿದ ವರ್ಗಗಳಲ್ಲಿ ಯಾವ ಯಾವ ಜಾತಿಗಳ ಜನರು ಎಷ್ಟಿದ್ದಾರೆ ಎಂಬ ಅಧಿಕೃತ ಮಾಹಿತಿ ಲಭ್ಯವಿಲ್ಲ. ಆದುದರಿಂದ, ಹಿಂದುಳಿದ ವರ್ಗಗಳ ಜನಗಣತಿ ಮಾಡುವಂತೆ ನಾನು ಹಿಂದೆಯೇ ಆಗ್ರಹಿಸಿದ್ದೆ ಎಂದು ಹೇಳಿದರು.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಜಾತಿ ಗಣತಿಯನ್ನು ನಡೆಸುವಂತೆ ಆಗ್ರಹಿಸುತ್ತಿದ್ದರು. ಈಗ ಕೇಂದ್ರ ಸರಕಾರವು ಎಲ್ಲ ಜಾತಿಗಳ ಗಣತಿ ನಡೆಸಲು ಮುಂದಾಗಿರುವುದರಿಂದ ಅವರು ಸಹಕಾರ ನೀಡಬೇಕು ಎಂದು ರಾಮದಾಸ್ ಅಠಾವಳೆ ಕೋರಿದರು.
ಕಾಕಾ ಕಾಲೇಲ್ಕರ್ ಆಯೋಗದ ವರದಿಯನ್ವಯ ದೇಶದಲ್ಲಿ ಶೇ.52ರಷ್ಟು ಹಿಂದುಳಿದ ವರ್ಗದವರು ಇದ್ದಾರೆ. ಇದೀಗ, ಕೇಂದ್ರ ಸರಕಾರವು ಜನ ಗಣತಿಯೊಂದಿಗೆ ಜಾತಿ ಗಣತಿಯನ್ನು ನಡೆಸುತ್ತಿರುವುದರಿಂದ, ಪ್ರತಿಯೊಂದು ಸಮಾಜದ ನಿಖರ ಅಂಕಿ ಅಂಶಗಳು ಲಭ್ಯವಾಗಲಿವೆ ಎಂದು ರಾಮದಾಸ್ ಅಠಾವಳೆ ಅಭಿಪ್ರಾಯಪಟ್ಟರು.