Home ಬೆಂಗಳೂರು ನಗರ ಉಪನಗರ ರೈಲು: ಕಾರಿಡಾರ್‌–2 ಕಾಮಗಾರಿಗೆ ಶೀಘ್ರ ಚಾಲನೆ

ಉಪನಗರ ರೈಲು: ಕಾರಿಡಾರ್‌–2 ಕಾಮಗಾರಿಗೆ ಶೀಘ್ರ ಚಾಲನೆ

70
0
V Somanna

ಬೆಂಗಳೂರು:

‘ಉಪನಗರ ರೈಲು ಯೋಜನೆಯ ಕಾರಿಡಾರ್‌–2 ಕಾಮಗಾರಿಯನ್ನು ಮಾರ್ಚ್‌ ಅಂತ್ಯದ ವೇಳೆಗೆ ಆರಂಭಿಸಲು ಉದ್ದೇಶಿಸಲಾಗಿದೆ’ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಪ್ರಕಾಶ್‌ ಕೆ. ರಾಥೋಡ್‌ ಅವರ ಪರವಾಗಿ ಯು.ಬಿ. ವೆಂಕಟೇಶ್‌ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾರಿಡಾರ್‌–2 ವ್ಯಾಪ್ತಿಯ ಬೈಯಪ್ಪನಹಳ್ಳಿ–ಚಿಕ್ಕಬಾಣಾವರ 25.01 ಕಿ.ಮೀ ಉದ್ದ ಮಾರ್ಗದ ಸಿವಿಲ್‌ ಕಾಮಗಾರಿಯ ಟೆಂಡರ್ ಕರೆಯಲಾಗಿದ್ದು, ಮಾರ್ಚ್‌ 1ರಂದು ಟೆಂಡರ್‌ ಬಿಡ್ಡಿಂಗ್‌ ತೆರೆಯಲಾಗಿದೆ’ ಎಂದು ವಿವರಿಸಿದರು.

‘ಟೆಂಡರ್‌ ಕರೆಯುವ ಮುನ್ನ ಭೂಸ್ವಾಧೀನ ಪ್ರಕ್ರಿಯೆ, ವಿನ್ಯಾಸ ರಚನೆಯಂತಹ ಪೂರ್ವಭಾವಿ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ. ಉಳಿದ ಮೂರು ಕಾರಿಡಾರ್‌ಗಳ ಟೆಂಡರ್‌ ಕರೆಯಲು ಪೂರ್ವಭಾವಿ ಸಿದ್ಧತೆಗಳನ್ನು ನಡೆಸಲಾಗುತ್ತಿದ್ದು, 2026ರ ವೇಳೆಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.

‘ಉಪನಗರ ರೈಲು ಯೋಜನೆಗೆ ಆರ್ಥಿಕ ವ್ಯವಹಾರಗಳ ಕುರಿತ ಕೇಂದ್ರ ಸಚಿವ ಸಂಪುಟ ಸಮಿತಿಯು 2020ರ ಅಕ್ಟೋಬರ್‌ನಲ್ಲಿ ಅನುಮೋದನೆ ನೀಡಿದೆ. ಈ ಯೋಜನೆಯ ಅಂದಾಜು ವೆಚ್ಚ ₹15,767 ಕೋಟಿಯಾಗಿದೆ. 148.17 ಕಿ. ಮೀ. ಉದ್ದದ ಈ ಯೋಜನೆಯನ್ನು ರಾಜ್ಯ ಸರ್ಕಾರ ಮತ್ತು ರೈಲ್ವೆ ಸಚಿವಾಲಯದ ಜಂಟಿ ಸಂಸ್ಥೆಯಾದ ‘ಕೆ–ರೈಡ್‌ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ’ ಎಂದು ವಿವರಿಸಿದರು.

ಯು.ಬಿ. ವೆಂಕಟೇಶ್‌ ಮಾತನಾಡಿ, ‘ಅನುಮೋದನೆ ದೊರೆತು 500ಕ್ಕೂ ಹೆಚ್ಚು ದಿನಗಳಾದರೂ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿಲ್ಲ. ಈ ಯೋಜನೆ ಬಗ್ಗೆ ಮಲತಾಯಿ ಧೋರಣೆ ಮಾಡಬೇಡಿ’ ಎಂದು ಹೇಳಿದರು.

LEAVE A REPLY

Please enter your comment!
Please enter your name here