ಬೆಂಗಳೂರು: ‘ಹಿಂದೂ ಒಂದು ಧರ್ಮ, ಅದು ಒಂದು ಸಂಘಟನೆ ಅಥವಾ ಸಂಸ್ಥೆಯಲ್ಲಾ. ನಾನು ಹಿಂದೂ, ಸುಹಾಸ್ ಕೂಡ ಹಿಂದೂ. ನಾವಿಬ್ಬರೂ ಹಿಂದೂಧರ್ಮದ ಸಿದ್ದಾಂತವನ್ನು ನಂಬಿರುವ ಅನುಯಾಯಿಗಳೆ ಹೊರತು ಕಾರ್ಯಕರ್ತರಾಗಲು ಸಾಧ್ಯವಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಇಂದಿಲ್ಲಿ ತಿಳಿಸಿದ್ದಾರೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಹಿಂದೂ ಪರ ಸಂಘಟನೆಯ ಕಾರ್ಯಕರ್ತನನ್ನು ಮಾಧ್ಯಮಗಳು ಹಿಂದೂ ಕಾರ್ಯಕರ್ತ ಎನ್ನುವುದು ಸಮಂಜಸವಲ್ಲ ಎಂಬುದು ನನ್ನ ಭಾವನೆ. ಇದು ಸಮಾಜಕ್ಕೆ ತಪ್ಪು ಸಂದೇಶ ರವಾನೆ ಮಾಡಿದಂತೆ. ಹಾಗಾಗಿ ಮಾಧ್ಯಮಗಳು ಈ ನಿಟ್ಟಿನಲ್ಲಿ ಪರಿಶೀಲನೆ ಮಾಡಬೇಕೆಂದು ಮನವಿ ಮಾಡುತ್ತೇನೆ’ ಎಂದು ಕೋರಿದ್ದಾರೆ.

‘ದುಷ್ಕರ್ಮಿಗಳಿಂದ ಹತ್ಯೆಯಾದ ಸುಹಾಸ್ ಶೆಟ್ಟಿ ಯನ್ನು ಅನೇಕ ಮಾಧ್ಯಮಗಳು ಹಿಂದೂ ಕಾರ್ಯಕರ್ತ ಎಂದು ವರದಿ ಮಾಡುತ್ತಿವೆ. ಸುಹಾಸ್ ಶೆಟ್ಟಿ ಹಿಂದೂಪರ ಸಂಘಟನೆಯ ಅಥವಾ ಸಂಘ ಪರಿವಾರದ ಕಾರ್ಯಕರ್ತನೆ ಹೊರತು ಹಿಂದೂ ಕಾರ್ಯಕರ್ತನಲ್ಲ. ಅವನು ಒಬ್ಬ ರೌಡಿ ಶೀಟರ್ ಮತ್ತು ಕೊಲೆ ಆರೋಪಿ’ ಎಂದು ದಿನೇಶ್ ಗುಂಡೂರಾವ್ ಉಲ್ಲೇಖಿಸಿದ್ದಾರೆ.