ಭಾನುವಾರ ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್ 2026ರ ಗ್ರೂಪ್ ಎ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 61 ರನ್ಗಳಿಂದ ಸೋಲಿಸಿ ದಾಖಲೆ ಬರೆದಿದೆ. ಇದೀಗ ಭಾರತ vs ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಇಷ್ಟೊಂದು ಹೈಪ್ ನೀಡುವ ಅಗತ್ಯವಿದೆಯೇ ಎನ್ನುವ ಮಾತುಗಳು ಕೇಳಿಬರುತ್ತಿವೆ. ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಆರಂಭದಲ್ಲಿ ಹೇಳಿತ್ತು. ಆದರೆ, ಐಸಿಸಿ ಮತ್ತು ಬಿಸಿಬಿ ಮಧ್ಯಪ್ರವೇಶದಿಂದ ಪಾಕಿಸ್ತಾನ ಭಾರತದೊಂದಿಗೆ ಆಡಲು ಒಪ್ಪಿಕೊಂಡಿತು. ಬಹಿಷ್ಕಾರ ನಾಟಕದ ಕೇಂದ್ರಬಿಂದುವಾಗಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥ ಮೊಹ್ಸಿನ್ ನಖ್ವಿ, ಭಾನುವಾರ ಭಾರತ ಪಾಕಿಸ್ತಾನದ ಮೇಲೆ ಪ್ರಾಬಲ್ಯ ಸಾಧಿಸಿದಾಗ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಹಾಜರಿದ್ದರು.
ಅನಾಮಧೇಯ ಮೂಲವನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಪಿಟಿಐ ವರದಿ ಪ್ರಕಾರ, ‘ಭಾರತ ವಿರುದ್ಧ 61 ರನ್ಗಳ ಸೋಲು ಕಂಡ ಪಾಕಿಸ್ತಾನ ತಂಡದ ಪ್ರದರ್ಶನದ ಬಗ್ಗೆ ಮೊಹ್ಸಿನ್ ನಖ್ವಿ ತಂಡದ ವ್ಯವಸ್ಥಾಪಕ ನಾವೇದ್ ಅಕ್ರಮ್ ಚೀಮಾ ಅವರಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ’ ಎನ್ನಲಾಗಿದೆ.
‘ಭಾರತದ ವಿರುದ್ಧ ಪಾಕಿಸ್ತಾನ ಮತ್ತೊಂದು ಸೋಲು ಕಾಣಲಿದೆ ಎಂಬುದು ಸ್ಪಷ್ಟವಾಗುತ್ತಿದ್ದಂತೆ, ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯದಿಂದ ಮೊಹ್ಸಿನ್ ನಖ್ವಿ ಬೇಗನೆ ನಿರ್ಗಮಿಸಿದರು’ ಎಂದು ಮೂಲಗಳು ತಿಳಿಸಿವೆ.
ಪಿಸಿಬಿ ಹಿರಿಯ ಅಧಿಕಾರಿಯ ಮೂಲಕ ನಖ್ವಿ, ಮುಖ್ಯವಾದ ಪಂದ್ಯಗಳಲ್ಲಿ ಈ ರೀತಿಯ ಪ್ರದರ್ಶನಗಳು ಸರಿಯಲ್ಲ ಅಥವಾ ಸ್ವೀಕಾರಾರ್ಹವಲ್ಲ ಎಂದು ವ್ಯವಸ್ಥಾಪಕರಿಗೆ ತಿಳಿಸಿರುವುದಾಗಿ ಅವರು ಹೇಳಿದರು.
ಮುಖ್ಯ ಕೋಚ್ ಮೈಕ್ ಹೆಸ್ಸನ್ ಕೂಡ ಡ್ರೆಸ್ಸಿಂಗ್ ಕೋಣೆಯಲ್ಲಿ ಆಟಗಾರರೊಂದಿಗೆ ಮಾತನಾಡಿ, ಅವರು ತಮ್ಮ ಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಆಡಿಲ್ಲ ಎಂದು ಹೇಳಿದ್ದಾಗಿ ವರದಿಯಾಗಿದೆ.
‘ಪಂದ್ಯದ ಬಳಿಕ ತಡರಾತ್ರಿ ಪಾಕಿಸ್ತಾನ ಮ್ಯಾನೇಜ್ಮೆಂಟ್ ಕಠಿಣ ನಿರ್ಧಾರ ತೆಗೆದುಕೊಂಡಿದ್ದು, ಬುಧವಾರ ನಮೀಬಿಯಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಬಾಬರ್ ಅಜಮ್ ಮತ್ತು ಶಾಹೀನ್ ಅಫ್ರಿದಿ ಅವರನ್ನು ಬೆಂಚ್ನಲ್ಲಿ ಕೂರಿಸಿ, ಸಲ್ಮಾನ್ ಮಿರ್ಜಾ/ನಸೀಮ್ ಶಾ ಮತ್ತು ಫಖರ್ ಜಮಾನ್ ಅವರಿಗೆ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ನೀಡಲು ತೀರ್ಮಾನಿಸಲಾಗಿದೆ’ ಎಂದು ಅವರು ಹೇಳಿದರು.
ಟೂರ್ನಮೆಂಟ್ನ ಸೂಪರ್ ಎಂಟನೇ ಹಂತಕ್ಕೆ ಅರ್ಹತೆ ಪಡೆಯಲು ಬಯಸಿದರೆ ಪಾಕಿಸ್ತಾನವು ನಮೀಬಿಯಾ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಭಾರತದ ಎದುರು ಭಾರಿ ಸೋಲು ಕಾಣುವ ಮುನ್ನ ಪಾಕ್ ಅಂಕಪಟ್ಟಿಯಲ್ಲಿ ಕೆಳಗಿರುವ ಯುಎಸ್ಎ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧ ಗೆಲುವು ಕಂಡಿದೆ.
