ಅಹ್ಮದಾಬಾದ್: ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತೀಯ ಅಭಿಮಾನಿಗಳ ಹಾರ್ಟ್ ಬ್ರೇಕ್ ಮಾಡುತ್ತೇನೆ ಎಂದು ಕೊಚ್ಚಿಕೊಂಡಿದ್ದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಥ್ನರ್ ತಮ್ಮದೇ ಎಡವಟ್ಟಿನಿಂದ ಕಿವೀಸ್ ಅಭಿಮಾನಿಗಳ ಹಾರ್ಟ್ ಬ್ರೇಕ್ ಮಾಡಿದ್ದಾರೆ.
ಹೌದು.. ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026 ರ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡ ಭಾರತದ ಎದುರು ಬರೊಬ್ಬರಿ 96 ರನ್ ಗಳ ಅಂತರದಲ್ಲಿ ಸೋತು ತನ್ನ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ಅವಕಾಶದಿಂದ ವಂಚಿತವಾಯಿತು.
ನ್ಯೂಜಿಲೆಂಡ್ ಸೋಲಿಗೆ ಹಲವು ಕಾರಣಗಳಿವೆಯಾದರೂ ನಾಯಕ ಮಿಚೆಲ್ ಸ್ಯಾಂಥ್ನರ್ ಕೈಗೊಂಡ ಆ ಒಂದು ನಿರ್ಣಯ ಇಡೀ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು ಎಂದು ಹೇಳಲಾಗಿದೆ.
ನಿಜ ಹೇಳಬೇಕು ಎಂದರೆ ಮಿಚೆಲ್ ಸ್ಯಾಂಥ್ನರ್ ರ ಆ ಒಂದು ನಿರ್ಧಾರ ಇತ್ತ ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಗೂ ಅಚ್ಚರಿ ಮೂಡಿಸಿತ್ತು. ಅದೊಂದು ನಿರ್ಣಯದಿಂದ ಫೈನಲ್ ನಲ್ಲಿ ಭಾರತದ ಎದುರು ನ್ಯೂಜಿಲೆಂಡ್ ದುರ್ಬಲವಾಗುವಂತೆ ಮಾಡಿತು ಎನ್ನಲಾಗಿದೆ.
ಅನುಭವಿ ಆಫ್ ಸ್ಪಿನ್ನರ್ ಹೊರಗಿಟ್ಟು ಪೇಸರ್ ಗೆ ಅವಕಾಶ
ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಮಾಡಿದ ಎಡವಟ್ಟು ಎಂದರೆ ತಂಡದ ಅನುಭವಿ ಆಫ್ ಸ್ಪಿನ್ನರ್ ಕೋಲ್ ಮೆಕ್ಕಾಂಚಿ ಅವರನ್ನು ಕೈ ಬಿಟ್ಟು ಪೇಸರ್ ಜೇಕಬ್ ಡಫಿಯನ್ನು ತಂಡಕ್ಕೆ ಆಯ್ಕೆ ಮಾಡಿದ್ದು ದುಬಾರಿಯಾಗಿ ಪರಿಣಮಿಸಿತು. ಮೆಕ್ಕಾಂಚಿ ಕೇವಲ ಓರ್ವ ಆಫ್ ಸ್ಪಿನ್ನರ್ ಮಾತ್ರವಲ್ಲ.. ಅಗತ್ಯ ಬಿದ್ದಾಗ ಬ್ಯಾಟಿಂಗ್ ನಲ್ಲಿಯೂ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡುತ್ತಾರೆ.
ಆದರೆ ಡಫಿ ಬೌಲಿಂಗ್ ನಲ್ಲಿಯೇ ಹೊರತು ಈ ವರೆಗೂ ಬ್ಯಾಟಿಂಗ್ ನಲ್ಲಿ ಉತ್ತಮವಾಗಿರಲಿಲ್ಲ. ಅದಾಗ್ಯೂ ನಾಯಕ ಮಿಚೆಲ್ ಸ್ಯಾಂಥ್ನರ್ ಅವರ ಈ ನಿರ್ಧಾರ ಅಚ್ಚರಿಗೆ ಕಾರಣವಾಗಿತ್ತು. ಟಿ20 ವಿಶ್ವಕಪ್ ಫೈನಲ್ ನಲ್ಲಿ ನ್ಯೂಜಿಲೆಂಡ್ ಆಫ್ ಸ್ಪಿನ್ ಆಯ್ಕೆ ರಹಿತವಾಗಿ ಕಣಕ್ಕಿಳಿಯಿತು.
ಇನ್ನು ಟಾಸ್ ವೇಳೆ ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಕೂಡ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರು. ಕಿವೀಸ್ ತಂಡದಲ್ಲಿ ಯಾವುದೇ ಮುಂಚೂಣಿಯ ಆಫ್-ಸ್ಪಿನ್ನರ್ ಇಲ್ಲದಿರುವುದು ಸೂರ್ಯಗೆ ಅಚ್ಚರಿ ಮೂಡಿಸಿತ್ತು.
ಅಭಿಷೇಕ್ ಶರ್ಮಾ ನಿರಾಳ
ನ್ಯೂಜಿಲೆಂಡ್ ನಾಯಕನ ಈ ನಿರ್ಧಾರದಿಂದ ಯಾರು ಖುಷಿಪಟ್ಟರೋ ಇಲ್ಲವೋ.. ಆದರೆ ಭಾರತದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾಗೆ ಮಾತ್ರ ನಿರಾಳ ತಂದಿತ್ತು. ಕಿವೀಸ್ ನಾಯಕನ ಈ ಪ್ರಮಾದದ ಅತಿದೊಡ್ಡ ಫಲಾನುಭವಿ ಎಂದರೆ ಅದು ಅಭಿಷೇಕ್ ಶರ್ಮಾ ಎಂದು ಹೇಳಬಹುದು.
ಇಡೀ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಆಫ್ ಸ್ಪಿನ್ನರ್ ಗಳ ವಿರುದ್ಧ ಸಾಕಷ್ಟು ವೈಫಲ್ಯ ಅನುಭವಿಸಿದ್ದಾರೆ. ಅವರ ಈ ದುರ್ಬಲತೆಯನ್ನು ಗುರುತಿಸಿ ಟೂರ್ನಿಯಲ್ಲಿ ಪಾಕಿಸ್ತಾನ ಸೇರಿದಂತೆ ಸಾಕಷ್ಟು ತಂಡಗಳು ಆರಂಭದಲ್ಲೇ ಆಫ್ ಸ್ಪಿನ್ನರ್ ಗಳನ್ನು ಬೌಲಿಂಗ್ ಮಾಡಲು ಬಿಟ್ಟ ಉದಾಹರಣೆ ಇದೆ. ಅಂತೆಯೇ ಅಭಿಷೇಕ್ ಶರ್ಮಾ ಕೂಡ ಬಹುಪಾಲು ತಮ್ಮ ವಿಕೆಟ್ ಕೈ ಚೆಲ್ಲಿರುವುದೂ ಕೂಡ ಇದೇ ಆಫ್ ಸ್ಪಿನ್ನರ್ ಗಳಿಗೇ ಎಂಬುದು ಗಮನಾರ್ಹ.
ತಜ್ಞ ಆಫ್ ಸ್ಪಿನ್ನರ್ ಅನುಪಸ್ಥಿತಿಯಲ್ಲಿ ಭರ್ಜರಿ ಫಾರ್ಮ್ ಗೆ ಮರಳಿದ ಅಭಿಷೇಕ್ ಶರ್ಮಾ
ಇನ್ನು ನ್ಯೂಜಿಲೆಂಡ್ ನ ತಜ್ಞ ಆಫ್ ಸ್ಪಿನ್ನರ್ ಮೆಕ್ಕಾಂಚಿ ಅನುಪಸ್ಥಿತಿಯಲ್ಲಿ ಅದರಲ್ಲೂ ಫೈನಲ್ ಪಂದ್ಯದಲ್ಲಿ ಭಾರತದ ಅಭಿಷೇಕ್ ಶರ್ಮಾ ಅರ್ಧಶತಕ ಸಿಡಿಸಿ ಭರ್ಜರಿಯಾಗಿ ಫಾರ್ಮ್ ಗೆ ಮರಳಿದರು.
ಈ ಫೈನಲ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ನ್ಯೂಜಿಲೆಂಡ್ ನ ಅರೆಕಾಲಿಕ ಆಫ್-ಸ್ಪಿನ್ನರ್ ಗ್ಲೆನ್ ಫಿಲಿಪ್ಸ್ ಅವರಿಂದ ನಾಲ್ಕು ಎಸೆತಗಳನ್ನು ಎದುರಿಸಿದರಾದರೂ ಬಹುಪಾಲು ನ್ಯೂಜಿಲೆಂಡ್ ವೇಗಿಗಳನ್ನು ಎದುರಿಸಿ ಭರ್ಜರಿ ಬ್ಯಾಟಿಂಗ್ ಮಾಡಿದರು.
ಕಿವೀಸ್ ನ ಮತ್ತೊಬ್ಬ ಅರೆಕಾಲಿಕ ಸ್ಪಿನ್ ಬೌಲರ್ ರಾಚಿನ್ ರವೀಂದ್ರ ಔಟ್ ಮಾಡುವ ಹೊತ್ತಿಗೆ, ಅಭಿಷೇಕ್ ಅದಾಗಲೇ ಬಿರುಸಿನ ಬ್ಯಾಟಿಂಗ್ ಮೂಲಕ ಅರ್ಧಶತಕ ಪೂರ್ಣಗೊಳಿಸಿದ್ದರು. ಇದು ಭಾರತದ ಬ್ಯಾಟಿಂಗ್ ಪಾರಮ್ಯಕ್ಕೆ ಅಡಿಪಾಯ ಹಾಕಿಕೊಟ್ಟಿತು.
ಭಾರತ ದಾಖಲೆಯ ಶತಕ
ಭಾರತವು ನ್ಯೂಜಿಲೆಂಡ್ನ ತಪ್ಪು ಲೆಕ್ಕಾಚಾರವನ್ನು ಸಂಪೂರ್ಣವಾಗಿ ಬಳಸಿಕೊಂಡಿತು. ಸೂರ್ಯ ಕುಮಾರ್ ಯಾದವ್ ಪಡೆ T20 ವಿಶ್ವಕಪ್ ನಾಕೌಟ್ ಇತಿಹಾಸದಲ್ಲೇ ಅತ್ಯಂತ ವೇಗದ 100 ರನ್ ಗಳಿಸಿತು. ಅಂದರೆ ಭಾರತ ಕೇವಲ 7.2 ಓವರ್ಗಳಲ್ಲೇ ನೂರು ರನ್ ಗಳಿಸಿದ ದಾಖಲೆ ನಿರ್ಮಿಸಿತು.
ಪಂದ್ಯಆರಂಭಕ್ಕೂ ಮೊದಲೇ ಸೋತಿದ್ದ ನ್ಯೂಜಿಲೆಂಡ್
ನಾಯಕ ಮಿಚೆಲ್ ಸ್ಯಾಂಥ್ನರ್ ಅವರ ಈ ತಪ್ಪು ನಿರ್ಧಾರ ನ್ಯೂಜಿಲೆಂಡ್ ಫೈನಲ್ ಪಂದ್ಯ ಪ್ರಾರಂಭವಾಗುವ ಮೊದಲೇ ಸೋತಿತು ಎಂಬ ಅಭಿಪ್ರಾಯಕ್ಕೆ ಬರುವಂತಾಗಿದೆ. ಅವರ ಯುದ್ಧತಂತ್ರದ ಪ್ರಮಾದ – ಆಫ್-ಸ್ಪಿನ್ ಆಯ್ಕೆಯನ್ನು ನಿರ್ಲಕ್ಷಿಸಿದ್ದು ಭಾರತದ ಬ್ಯಾಟ್ಸ್ಮನ್ಗಳಿಗೆ ಇತಿಹಾಸ ಬರೆಯಲು ಬಾಗಿಲು ತೆರೆಯಿತು ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
