
ಬೆಂಗಳೂರು:
ನಾಗರಿಕ ಸೇವೆ ಪರೀಕ್ಷೆಯಲ್ಲಿ ಮೊದಲ 4 ರ್ಯಾಂಕ್ ಮಹಿಳೆಯರ ಪಾಲಾಗಿದ್ದು, ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಇದೇ ಕೇವಲ ಆರಂಭವಷ್ಟೇ.. ಭವಿಷ್ಯದಲ್ಲಿ ಮಹಿಳೆಯರು ಇಂತಹ ಸಾಕಷ್ಟು ಸಾಧನೆಗಳನ್ನು ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿವಿ ಪದವಿ ಪ್ರದಾನ ಸಮಾರಂಭದಲ್ಲಿ ಭಾಷಣದ ಆರಂಭದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಶುಭಾಶಯ ಕೋರಿದರು. ಶಿಕ್ಷಕರು, ಆಧಾತ್ಮಿಕ ಮಾರ್ಗದರ್ಶನದ ಕೃತಜ್ಞತೆಗೆ ಈ ದಿನ ಮಿಸಲು ಎಂದು ಹೇಳಿದರು.
President Droupadi Murmu graced the 2nd convocation of Sri Sathya Sai University for Human Excellence at Muddenahalli, Karnataka. https://t.co/NidC9XSscx pic.twitter.com/TbnBFh35EP
— President of India (@rashtrapatibhvn) July 3, 2023
ಬಳಿಕ ಮಾತಾನಾಡಿದ ದ್ರೌಪದಿ ಮುರ್ಮು ಅವರು, ‘ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಉತ್ತಮ ಸಾಧನೆಗಳನ್ನು ತೋರುತ್ತಿರುವುದು ಸಂತೋಷದ ವಿಷಯವಾಗಿದೆ. ಎಲ್ಲಾ ರಂಗಗಳಲ್ಲಿಯೂ ಮಹಿಳೆಯರು ಮುಂದೆ ಬರುತ್ತಿದ್ದಾರೆ. ಮಹಿಳೆಯರ ಸಾಧನೆ ವಿಚಾರದಲ್ಲಿ ಇದು ಟ್ರೇಲರ್ ಅಷ್ಟೇ ಪಿಕ್ಚರ್ ಇನ್ನೂ ಬಾಕಿ ಇದೆ. ಭಾರತದ ಶ್ರೀಮಂತ ಸಂಪ್ರದಾಯಗಳು ನಮ್ಮ ಹೆಮ್ಮೆಯಾಗಿದೆ. ಸಂಪ್ರದಾಯಗಳ ಜೊತೆ ಆಧುನಿಕತೆಯನ್ನು ಅಳವಡಿಸಿಕೊಂಡರೆ ಲಾಭವಾಗಲಿದೆ. ಸ್ಪರ್ಧಾತ್ಮಕ ಯುಗದಲ್ಲಿ ಮಾನಸಿಕ, ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಪರೀಕ್ಷೆಗಳು ಮತ್ತು ಫಲಿತಾಂಶ ಉತ್ತುಂಗದ ಒಂದು ಆಯಾಮ ಅಷ್ಟೆ. ಪರೀಕ್ಷೆಯ ಯಶಸ್ಸು ನಿಮ್ಮ ಸಾಮಾರ್ಥ್ಯದ ಅಳತೆಯಲ್ಲ. ನಿಮ್ಮ ವ್ಯಕ್ತಿತ್ವ ಮತ್ತು ಚಾರಿತ್ರ್ಯ, ಶೈಕ್ಷಣಿಕ ಬದುಕು, ಸಾಧನೆಗಳಿಗಿಂತ ಮಿಗಿಲು ಎಂದರು.
ನಾಗರಿಕ ಸೇವಾ ಪರೀಕ್ಷೆಯಲ್ಲಿ ಮಹಿಳೆಯರಿಗೆ ಮೊದಲ 4 ರ್ಯಾಂಕ್: ಮುರ್ಮು ಸಂತಸ
ವಿಶೇಷವಾಗಿ ಈ ವರ್ಷ ಕೇಂದ್ರ ನಾಗರಿಕ ಸೇವೆ ಪರೀಕ್ಷೆಯ ಮೊದಲ ನಾಲ್ಕು ರ್ಯಾಂಕ್ಗಳನ್ನು ಪಡೆದ ಮಹಿಳೆಯರನ್ನು ಉಲ್ಲೇಖಿಸಿದ ಅವರು, “ಈ ವರ್ಷದ ನಾಗರಿಕ ಸೇವಾ ಪರೀಕ್ಷೆಯಲ್ಲಿ ನಮ್ಮ ಹೆಣ್ಣುಮಕ್ಕಳು ಮೊದಲ ನಾಲ್ಕು ರ್ಯಾಂಕ್ಗಳಲ್ಲಿ ಸ್ಥಾನ ಗಳಿಸಿರುವುದು ನನಗೆ ತುಂಬಾ ಖುಷಿ ತಂದಿದೆ. ಸಮಾನ ಅವಕಾಶಗಳನ್ನು ನೀಡಿದಾಗಲೆಲ್ಲಾ ನಮ್ಮ ಹೆಣ್ಣುಮಕ್ಕಳು ನಮ್ಮ ಹುಡುಗರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಇದು ಸೂಚಿಸುತ್ತದೆ. ಇದು ಭಾರತದಲ್ಲಿ ಆಗುತ್ತಿರುವ ಬದಲಾವಣೆ ಮತ್ತು ನಮ್ಮ ದೇಶದ ಸುವರ್ಣ ಭವಿಷ್ಯದ ಒಂದು ನೋಟವಾಗಿದೆ ಎಂದು ಹೇಳಿದರು.
ಪದವಿ, ಗೋಲ್ಡ್ ಮೇಡಲ್ ಮತ್ತು ಡಾಕ್ಟರೇಟ್ ಪದವಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದವಿ ಮತ್ತು ಗೋಲ್ಡ್ ಮೇಡಲ್ ಪ್ರದಾನ ಮಾಡಿದರು. ನಂತರ ಆರು ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಸಂಗೀತ ಮತ್ತು ಕಲೆ ವಿಭಾಗದಲ್ಲಿ ಸಾಧನೆ ಮಾಡಿದ ಡಾ ಆರ್ ಕೆ ಪದ್ಮನಾಭ, ಕ್ರೀಡೆ ಮತ್ತು ದಾರ್ಢ್ಯತೆ ವಿಭಾಗದಲ್ಲಿ ಸಾಧನೆ ಮಾಡಿದ ಪುಲ್ಲೆಲ ಗೋಪಿಚಂದ್, ಆರೋಗ್ಯ ವಿಭಾಗದಲ್ಲಿ ಸಾಧನೆ ಮಾಡಿದ ಡಾ. ಪ್ರತಿಮಾ ಮೂರ್ತಿ, ಶಿಕ್ಷಣ ವಿಭಾಗದಲ್ಲಿ ಸಾಧನೆ ಮಾಡಿದ ಪ್ರೊ. ವಿಜಯ್ ಶಂಕರ್ ಶುಕ್ಲಾ, ಸಮಾಜ ಸೇವೆ ವಿಭಾಗದಲ್ಲಿ ಸಾಧನೆ ಮಾಡಿದ ಪದ್ಮಶ್ರೀ ಪುರಸ್ಕೃತ ಶ್ರೀಮತಿ ತುಳಸಿ ಗೌಡ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.