ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚಾದ ಸಂಘರ್ಷದಿಂದಾಗಿ ಭಾರತದಲ್ಲಿ LPG ಕೊರತೆ ಹೆಚ್ಚಾಗಿದ್ದು, ಈ ನಡುವೆ ಹೋಟೆಲ್ಗಳು ಹಾಗೂ ವಾಣಿಜ್ಯ ಸಂಸ್ಥೆಗಳು ಕಲ್ಲಿದ್ದಲು ಮತ್ತು ಸೀಮೆಎಣ್ಣೆ ಬಳಸುವಂತೆ ಹಾಗೂ ಮನೆಗಳು ಪಿಎನ್’ಜಿ ಅನಿಲ ಬಳಕೆ ಮಾಡುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.
ನವದೆಹಲಿಯಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು, ಅಡುಗೆ ಅನಿಲದ ಕೊರತೆ ಸರ್ಕಾರದ ಗಮನದಲ್ಲಿರುವ ಪ್ರಮುಖ ವಿಷಯವಾಗಿದ್ದು, ಪರಿಸ್ಥಿತಿ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಭಾರತದಲ್ಲೂ LPG ಸರಬರಾಜಿನ ಮೇಲೆ ಪರಿಣಾಮ ಬಿದ್ದಿದೆ.
ಈ ಕೊರತೆಯಿಂದಾಗಿ ವಿಶೇಷವಾಗಿ ರೆಸ್ಟೊರೆಂಟ್ಗಳು ಮತ್ತು ಹೋಟೆಲ್ಗಳಂತಹ ವಾಣಿಜ್ಯ ಬಳಕೆದಾರರು ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಯನ್ನು ತಗ್ಗಿಸಲು ವಾಣಿಜ್ಯ ಬಳಕೆದಾರರು ತಾತ್ಕಾಲಿಕವಾಗಿ ಕಲ್ಲಿದ್ದಲು ಮತ್ತು ಸೀಮೆಎಣ್ಣೆ ಬಳಸುವಂತೆ ಸಲಹೆ ನೀಡಿದೆ.
ಇದಕ್ಕಾಗಿ ಕೋಲ್ ಇಂಡಿಯಾ ಸಂಸ್ಥೆಗೆ ಸಣ್ಣ, ಮಧ್ಯಮ ಹಾಗೂ ಇತರ ವಾಣಿಜ್ಯ ಬಳಕೆದಾರರಿಗೆ ಕಲ್ಲಿದ್ದಲು ಸರಬರಾಜು ಖಚಿತಪಡಿಸಲು ಆದೇಶ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಸರ್ಕಾರದ ಪ್ರಕಾರ ದೇಶದಾದ್ಯಂತ ಇರುವ ಸುಮಾರು 25,000 LPG ವಿತರಕರಲ್ಲಿ ಯಾವುದೇ ಸ್ಥಳದಲ್ಲೂ ಸಂಪೂರ್ಣ ಅನಿಲ ಕೊರತೆ ಉಂಟಾಗಿಲ್ಲ. ಆದರೆ, ಜನರು ಭಯದಿಂದ ಹೆಚ್ಚಿನ ಪ್ರಮಾಣದಲ್ಲಿ ಬುಕ್ಕಿಂಗ್ ಮಾಡುತ್ತಿರುವುದು ಮುಖ್ಯ ಸಮಸ್ಯೆಯಾಗಿದೆ ಎಂದು ಹೇಳಿದೆ.
ಸಾಮಾನ್ಯವಾಗಿ ಪ್ರತಿದಿನ ಸುಮಾರು 50 ಲಕ್ಷ LPG ಸಿಲಿಂಡರ್ ಬುಕ್ಕಿಂಗ್ ಆಗುತ್ತಿತ್ತು. ಆದರೆ, ಈಗ ಈ ಸಂಖ್ಯೆ 75 ಲಕ್ಷಕ್ಕೆ ಏರಿಕೆಯಾಗಿದೆ. ಈ ಹೆಚ್ಚಿದ ಬೇಡಿಕೆಯನ್ನು ಪೂರೈಸಲು ಸರ್ಕಾರ ನಿಯಮಿತ ಕೋಟಾದ ಮೇಲೆ ಹೆಚ್ಚುವರಿಯಾಗಿ 48,000 ಕಿಲೋಲೀಟರ್ LPG ವಿತರಣೆ ಮಾಡಲು ಅನುಮತಿ ನೀಡಿದೆ.
ಇದೇ ವೇಳೆ ದೇಶದಲ್ಲಿ ಪೈಪ್ ಮೂಲಕ ಸರಬರಾಜಾಗುವ PNG ಅನಿಲದ ಕೊರತೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. PNG ಸಂಪರ್ಕ ಇರುವ ಮನೆಗಳು LPG ಬಳಕೆಯನ್ನು ಕಡಿಮೆ ಮಾಡಲು ತಾತ್ಕಾಲಿಕವಾಗಿ PNG ಅನಿಲವನ್ನು ಬಳಖೆ ಮಾಡಬಹುದು ಎಂದು ಸಲಹೆ ನೀಡಿದೆ.
ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ, ದೇಶದಲ್ಲಿ ಸುಮಾರು 7 ಲಕ್ಷ LPG ಗ್ರಾಹಕರಿಗೆ ಈಗಾಗಲೇ PNGಗೆ ಬದಲಾಯಿಸುವ ಆಯ್ಕೆಯನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ
