ಬೆಂಗಳೂರು, ಜುಲೈ 16 ( ಕರ್ನಾಟಕ ವಾರ್ತೆ): ಕೋಲಾರ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅವಧಿಪೂರ್ವಕ್ಕೂ ಮುನ್ನ ಜನಿಸಿದ ಮಕ್ಕಳಲ್ಲಿ ರಕ್ತದ ಕೊರತೆ ಹಾಗೂ ಗರ್ಭಿಣಿ ಯರಲ್ಲಿನ ಅಪೌಷ್ಟಿಕತೆ ಕುರಿತಂತೆ ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಪರವಾಗಿ ಉತ್ತರಿಸಿದ ಸಭಾನಾಯಕರಾದ ಎನ್.ಎಸ್ ಬೋಸರಾಜು ಅವರು, ಸದರಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಮಾತೃಪೂರ್ಣ ಯೋಜನೆ, ಆರೋಗ್ಯ ತಪಾಸಣೆ ಸೇರಿದಂತೆ ಇತರ ಆರೋಗ್ಯ ಸೇವೆಗಳನ್ನು ಜಾರಿಗೊಳಿಸಿದೆ.
ಜೊತೆಗೆ ರಾಜ್ಯದ ಎಲ್ಲಾ ತಾಲ್ಲೂಕುಗಳ ಸುಮಾರು 69,919 ಅಂಗನವಾಡಿ ಕೇಂದ್ರಗಳಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಠಿಕಾಂಶವುಳ್ಳ ಮಧ್ಯಾಹ್ನದ ಬಿಸಿಯೂಟವನ್ನು ಅಂಗನವಾಡಿ ಕೇಂದ್ರದಲ್ಲಿಯೇ ನೀಡಲಾಗುತ್ತಿದೆ ಎಂದ ಅವರು ಸದರಿ ಯೋಜನೆಯಡಿ ನೀಡುತ್ತಿರುವ ಬಿಸಿಯೂಟ 1342 ಕ್ಯಾಲೊರಿ ಇದ್ದು 41 ಗ್ರಾಂ ಪ್ರೋಟೀನ್ ಮತ್ತು 578 ಮಿಲಿಗ್ರಾಮ್ ಕ್ಯಾಲ್ಸಿಯಮ್ ಒಳಗೊಂಡಿರುತ್ತದೆ ಎಂದರು.
